ಡ್ರಗ್ಸ್ ದಂಧೆ: ಮಾಜಿ ಸಚಿವ ಲಮಾಣಿ ಪುತ್ರಗೆ ನ್ಯಾಯಾಂಗ ಬಂಧನ
ದರ್ಶನ್ ಲಮಾಣಿ, ಸುನೀಶ್, ಸುಜಯ್, ಹೇಮಂತ್, ಅಶೀಶ್ ಸೇರಿದಂತೆ 7 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಸಿಸಿಬಿ ಹಾಗೂ ಕೆಂಪೇಗೌಡನಗರ ಪೊಲೀಸರು| ಡಿ.1ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ ನ್ಯಾಯಾಲಯ|
ಬೆಂಗಳೂರು(ನ.23): ಡ್ರಗ್ಸ್ ದಂಧೆಯಲ್ಲಿ ಬಂಧಿತನಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಸೇರಿದಂತೆ 7 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ 1ನೇ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಸಿಸಿಬಿ ಹಾಗೂ ಕೆಂಪೇಗೌಡನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ದರ್ಶನ್ ಲಮಾಣಿ, ಸುನೀಶ್, ಸುಜಯ್, ಹೇಮಂತ್, ಅಶೀಶ್ ಸೇರಿದಂತೆ 7 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆರೋಪಿಗಳ ಪೊಲೀಸ್ ವಶಕ್ಕೆ ಪಡೆದಿದ್ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಡಿ.1ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಲಕ್ಷ ಖರ್ಚು ಮಾಡಿ ಕೋಟಿ ಗಳಿಸಿ ಕೊಡ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್!
ಪೆಡ್ಲರ್ಗಳಿಗೆ ಸಹಕರಿಸಿದ ಆರೋಪ:
ನವೆಂಬರ್ 4ರಂದು ಡ್ರಗ್ ಪೆಡ್ಲರ್ಗಳಾದ ಸುಜಯ್ ಸುನೀಶ್ ಮತ್ತು ಹೇಮಂತ್ ಡಾರ್ಕ್ನೆಟ್ ವೆಬ್ ಮೂಲಕ ವಿದೇಶದಿಂದ ನಗರಕ್ಕೆ ಹೈಡ್ರೋ ಗಾಂಜಾ ತರಿಸಿಕೊಂಡಿದ್ದರು. ಚಾಮರಾಜಪೇಟೆಯ ವಿದೇಶ ಅಂಚೆ ಕಚೇರಿಯ ಪಾರ್ಸೆಲ್ ಆಫೀಸ್ನಲ್ಲಿ ತೆಗೆದುಕೊಳ್ಳುವ ವೇಳೆ ಸುಜಯ್ ಸಿಕ್ಕಿ ಬಿದ್ದಿದ್ದರು.
ಈ ವೇಳೆ ಸುನೀಶ್ ಮತ್ತು ಹೇಮಂತ್ ಪರಾರಿಯಾಗಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದರು. ಫೋನ್ ಲೊಕೇಷನ್ ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಮತ್ತು ಕೆಂಪೇಗೌಡನಗರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಈ ಆರೋಪಿಗಳಿಗೆ ಗೋವಾದಲ್ಲಿ ದರ್ಶನ್ ಲಮಾಣಿ ಆಶ್ರಯ ನೀಡಿ ಸಹಕರಿಸಿದ್ದರು. ಇದೇ ಆರೋಪದಲ್ಲಿ ದರ್ಶನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.