ಇಂತಹ ಸಂದರ್ಭದಲ್ಲೂ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ: ಮಾಜಿ ಸಚಿವೆ ಮೋಟಮ್ಮ
ಬಿಜೆಪಿ ವಿರುದ್ಧ ಮಾಜಿ ಸಚಿವೆ ಮೋಟಮ್ಮ ವಾಗ್ದಾಳಿ| ಸಚಿವೆ ಶಶಿಕಲಾ ಜೊಲ್ಲೆ ಬಗ್ಗೆ ಹೇಸಿಗೆ ಅನಿಸುತ್ತಿದೆ. ಪೊಟ್ಟಣದ ಮೇಲೆ ಮುನಿರಾಜು ಅಂತ ಹೆಸರಿದೆ. ಹೀಗಿದ್ರೂ ಸಚಿವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ| ಕೂಡಲೇ ಸಿಎಂ ಯಡಿಯೂರಪ್ಪ, ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ ಪುಷ್ಪಾ ಅಮರನಾಥ್|
ಬೆಂಗಳೂರು(ಮೇ.03): ಬಿಜೆಪಿ ಕೇವಲ ಕಾಂಗ್ರೆಸ್ ಮೇಲೆ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದೆ. ಗರ್ಭಿಣಿಯರಿಗೆ ನೀಡುವ ಆಹಾರದಲ್ಲಿ ಬಿಜೆಪಿ ಪಕ್ಷದ ಸಿಂಬಲ್ ಹಾಕಿದ್ದಾರೆ. ಬಿಜೆಪಿ ಅವರಿಗೆ ನಾಚಿಕೆ ಆಗೋದಿಲ್ವಾ? ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಂತಹ ನೀಚ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಇಂದು(ಭಾನುವಾರ) ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಸಚಿವೆ ಶಶಿಕಲಾ ಜೊಲ್ಲೆ ಬಗ್ಗೆ ಹೇಸಿಗೆ ಅನಿಸುತ್ತಿದೆ. ಪೊಟ್ಟಣದ ಮೇಲೆ ಮುನಿರಾಜು ಅಂತ ಹೆಸರಿದೆ. ಹೀಗಿದ್ರೂ ಸಚಿವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಸಿಎಂ ಯಡಿಯೂರಪ್ಪ, ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್ನಿಂದ 1 ಕೋಟಿ ರೂ.!
ಬಳಿಕ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ ಅವರು, ಸರ್ಕಾರದ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮ ಮಾಡಿಕೊಂಡಿದೆ. ಹಾಲನ್ನು ಕೂಡಾ ಬಿಜೆಪಿ ತಮಗೆ ಬೇಕಾದವರಿಗೆ ಕೊಟ್ಟಿದ್ದಾರೆ. ಫುಡ್ ಕಿಟ್ ಕೂಡಾ ಬೇಕಾದವರಿಗೆ ನೀಡುವ ಮೂಲಕ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ರಾಣಿ ಸತೀಶ್ ಅವರು, ಬಿಜೆಪಿ ಅವರು ಅನಾಗರಿಕತೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಸಚಿವರು ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಂತಹ ಸಮಯದಲ್ಲಿ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.
KSRTC ಬಸ್ ನಲ್ಲಿ ಕಾರ್ಮಿಕರು ಹೋಗೋಕೆ ದುಪ್ಪಟ್ಟು ಹಣ ಪಡೆಯುತ್ತಿದೆ. ಕೋಟಿ ಕೋಟಿ ಹಣವನ್ನ ಲೂಟಿ ಮಾಡಿದವರಿಗೆ ಹಣ ಮನ್ನಾ ಮಾಡಿದ್ದಾರೆ. ಕಾರ್ಮಿಕರಿಗೆ ಅನುಕೂಲವಾಗುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಮೋಟಮ್ಮ, ಜಯಮಾಲ, ಉಮಾಶ್ರೀ, ರಾಣಿ ಸತೀಶ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದಾರೆ.