Asianet Suvarna News Asianet Suvarna News

Shivamogga: ಅಂಗನವಾಡಿ ಕಾರ್ಯಕರ್ತೆಯರ ಸೇವೆ ಮಹತ್ವದ್ದು: ಬಿಎಸ್‌ವೈ

ಆರೋಗ್ಯವಂತ ಮಕ್ಕಳ ಬೆಳವಣಿಗೆ, ಮಹಿಳೆಯರ ಸಬಲೀಕರಣ ಸಹಿತ ಹಲವು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಂಸಿಸಿದರು.  

Former CM BS Yediyurappa Talks Over Anganwadi Workers At Shikaripura gvd
Author
First Published Nov 18, 2022, 12:43 PM IST

ಶಿಕಾರಿಪುರ (ನ.18): ಆರೋಗ್ಯವಂತ ಮಕ್ಕಳ ಬೆಳವಣಿಗೆ, ಮಹಿಳೆಯರ ಸಬಲೀಕರಣ ಸಹಿತ ಹಲವು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಂಸಿಸಿದರು. ಬುಧವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಆಯೋಜಿಸಿದ್ದ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದ ಪ್ರತಿ ಮನೆಯ ಪರಿಚಯ ಇಟ್ಟುಕೊಂಡು ತಮ್ಮ ಕರ್ತವ್ಯನಿರ್ವಹಿಸಿದರೆ ಮಾತ್ರ ಸಾಲದು. 

ಗ್ರಾಮದ ಪ್ರತಿ ಮಹಿಳೆ ಸಬಲೀಕರಣಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ ಅದನ್ನು ನಿಮ್ಮ ಆತ್ಮತೃಪ್ತಿಗಾಗಿ, ಉತ್ತಮ ಸಮಾಜ ಕಟ್ಟುವುದಕ್ಕಾಗಿ ಮಾಡಬೇಕು. ಆಗ ಸುಭದ್ರ ಸಮಾಜ, ದೇಶ ನಿರ್ಮಾಣ ಸಾಧ್ಯ. ಕೋವಿಡ್‌ ಸಂದರ್ಭದಲ್ಲಿ ನಿಮ್ಮ ಸೇವೆ ಅಭಿನಂದನಾರ್ಹ ಎಂದರು. ನಿಮಗೆ ಅಗತ್ಯವಿರುವ ಅನುಕೂಲ ಕಲ್ಪಿಸುವ ಕೈಲಾದ ಪ್ರಯತ್ನ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಗುರುತಿಸಿ ವಿಶ್ವಸಂಸ್ಥೆ ಜಾಗತಿಕ ಆರೋಗ್ಯ ನಾಯಕರು ಎನ್ನುವ ಬಿರುದು ನೀಡಿದೆ. ನಾವು ಮಾಡುವ ಕೆಲಸ ನಮಗೆ ಮಾತ್ರವಲ್ಲ, ಅದು ದೇಶ ಕಟ್ಟುವ ಕೆಲಸ ಅದಕ್ಕಾಗಿ ನಾವೆಲ್ಲರೂ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಸಿದ್ದು ಬೇರೆ ಕಡೆ ಸ್ಪರ್ಧೆ: ಯಡಿಯೂರಪ್ಪ

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಎನ್ನುವ ಸುದ್ಧಿ ಹಿಂದೆ ಹೆಚ್ಚು ಪ್ರಚಲಿತದಲ್ಲಿ ಇತ್ತು. ಆದರೆ ಅದು ಈಗಿಲ್ಲ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್‌, ವಿದ್ಯಾರ್ಥಿನಿಯರಿಗೆ ಸೈಕಲ್‌, ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆಗೆ ಹಲವು ಕಾರ್ಯಕ್ರಮ ನೀಡಿದೆ. ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಶಾಹಿ ಗಾರ್ಮೆಂಟ್ಸ್‌ ಆರಂಭಿಸುವುದಕ್ಕೆ ಬಿಎಸ್‌ವೈ ಒತ್ತಾಸೆಯಾಗಿ ನಿಂತ ಪರಿಣಾಮ ಇಂದು ಸಾವಿರಾರು ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಕಾರಣವಾಗಿದೆ ಎಂದರು.

ಉಚಿತ ಗ್ಯಾಸ್‌, ಆರೋಗ್ಯ ಕಾರ್ಡ್‌, ಮನೆ ಮನೆಗೆ ಗಂಗೆ, ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ, ರೈಲ್ವೆ, ವಿಮಾನ ನಿಲ್ದಾಣ, ನೀರಾವರಿ ಹೀಗೆ ಹಲವು ಕಾರ್ಯಕ್ರಮದ ಮೂಲಕ ಬಿಎಸ್‌ವೈ ಕ್ಷೇತ್ರದ ಜನರಿಗೆ ಕೊಡುಗೆ ನೀಡಿದ್ದಾರೆ. ರಾಜ್ಯದ ಬೇರೆ ಯಾವುದೇ ಕ್ಷೇತ್ರದೊಂದಿಗೆ ಹೋಲಿಸಿಕೊಂಡು ನೀವು ಪರೀಕ್ಷಿಸಿ ಅದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ

ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೇಖಾಬಾಯಿ, ತಹಸೀಲ್ದಾರ್‌ ಎಂ.ಪಿ.ಕವಿರಾಜ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ್‌, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಮುಖಂಡ ಹನುಮಂತಪ್ಪ ತೊಗರ್ಸಿ, ರುದ್ರಮುನಿ, ಸಿದ್ಧಲಿಂಗಪ್ಪ, ಶಿವಬಸಪ್ಪ, ನಾಗರತ್ನ, ಭಾರತಿ, ಕಲ್ಪನಾ, ಪ್ರೇಮಲತಾ, ಉಮಾದೇವಿ, ರೇಣುಕಾ, ನೀಲಮ್ಮ, ಸರೋಜ ಸಹಿತ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

Follow Us:
Download App:
  • android
  • ios