Asianet Suvarna News Asianet Suvarna News

Chikkamagaluru: ಕಾಡಿನ ರಕ್ಷಕನೇ ಭಕ್ಷಕನಾದ: ಮರಗಳನ್ನು ಕಡಿದು ಮಾರಿದ ಅರಣ್ಯಾಧಿಕಾರಿ ಸಸ್ಪೆಂಡ್

ಅಕ್ರಮವಾಗಿ ಬೀಟೆ ಮರ ಕಡಿದು ಸಾಮಿಲ್ ಗೆ ಸಾಗಿಸಿದ ಅರಣ್ಯ ಅಧಿಕಾರಿ
ಗ್ರಾಮದ ಸ್ಥಳೀಯರಿಗೆ ಮರ ಕಡಿಯಲು ಸುಪಾರಿ ಕೊಟ್ಟರು
ಉಪವಲಯ ಅರಣ್ಯ ಅಧಿಕಾರಿ ದರ್ಶನ್ ಅಮಾನತು

Forest protector convert destroyer Trees cutting Forest officer suspended sat
Author
First Published Feb 2, 2023, 4:46 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಫೆ.02): ರಕ್ಷಕರೇ ಭಕ್ಷಕರಾಗಿ ಅರಣ್ಯವನ್ನ ಉಳಿಸಿ ಬೆಳೆಸಬೇಕಾದ ಅಧಿಕಾರಿಗಳೇ ಅಕ್ರಮವಾಗಿ ಬೀಟೆ ಮರವನ್ನ ಕಡಿದು ಸಾಮಿಲ್ ಗೆ ಸಾಗಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ರಮವಾಗಿ ಮರವನ್ನ ಕಡಿದು ಸಾಗಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಉಪವಲಯ ಅರಣ್ಯ ಅಧಿಕಾರಿ ದರ್ಶನ್ ಎಂಬುವರನ್ನು ಡಿ.ಎಫ್.ಓ. ಕ್ರಾಂತಿ ಅಮಾನತ್ತು ಮಾಡಿ ಆದೇಶೀಸಿದ್ದಾರೆ.‌

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಆನಿಗನಹಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 5 ಬೀಟೆ ಮರಳನ್ನ ಕಡಿಯಲಾಗಿತ್ತು. ಸ್ಥಳೀಯರು ವಲಯ ಅರಣ್ಯಾಧಿಕಾರಿ ಹಾಗೂ ಡಿ.ಎಫ್.ಓ.ಗೆ ದೂರು ನೀಡಿದ್ದರು. ಇದೇ ವೇಳೆ, ಮರ ಕಡಿದವರು ಗ್ರಾಮಸ್ಥರ ಜೊತೆ ಮಾತನಾಡಿದ ಆಡಿಯೋ ಕೂಡ ವೈರಲ್ ಆಗಿತ್ತು. ಆಡಿಯೋದಲ್ಲಿ ಮರ ಕಡಿದವರು ದರ್ಶನ್ ಫಾರೆಸ್ಟರ್ ಹೇಳಿದ್ದಕ್ಕೆ ಮರ ಕಡಿದೆವು ಎಂದು ಮಾತನಾಡಿದ್ದರು.

Shivamogga News: ಮರಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಹೊತ್ತಿದ ಹೋರಾಟದ ಕಿಚ್ಚು

ಬೀಟೆ ಮರವನ್ನ ಕಡಿದು ಸಾಮಿಲ್ ಗೆ ರವಾನಿಸಿದ್ದರು: ಸುಮಾರು 20 ರಿಂದ 25 ಮೀಟರ್ ಬೀಟೆ ಮರವನ್ನ ಕಡಿದು ಸ್ವಲ್ಪ ಮರವನ್ನ ಹಾಸನ ಜಿಲ್ಲೆ ಬೇಲೂರಿನ ಸಾಮಿಲ್ ಗೆ ರವಾನಿಸಿದ್ದರು. ಮತ್ತೊಂದಷ್ಟು ಮರವನ್ನ ಮನೆಗೆ ಪೀಠೋಪಕರಣ ಮಾಡಲು ಕಾರ್ಪೆಂಟರ್ ಮನೆಗೆ ಕಳಿಸಿದ್ದರು. ವಿಷಯ ತಿಳಿದ ಕೂಡಲೇ ತನಿಖೆಗೆ ಮುಂದಾದ ಅರಣ್ಯ ಅಧಿಕಾರಿಗಳಿಗೆ ಅಧಿಕಾರಿಯ ಅಕ್ರಮವಾಗಿ ಮರವನ್ನು ಕುರಿತು ಸಾಗಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಜೊತೆಗೆ ಅಕ್ರಮವಾಗಿ ಮರ ಕಡಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರ್ಶನ್ ಫಾರೆಸ್ಟರ್ ಹೇಳಿದ್ದಕ್ಕೆ ಮರ ಕಡಿದು ಸಾಗಿಸಿದೆವು ಎಂದು ಒಪ್ಪಿಕೊಂಡಿದ್ದಾರೆ. 

ಫಾರೆಸ್ಟರ್ ದರ್ಶನ್ ಮೇಲೆ ಇಲಾಖೆಗೆ ಕ್ರಮ: ಹಾಗಾಗಿ ಹರೀಶ್, ಪ್ರದೀಪ್, ಮಂಜು ಹಾಗೂ ಬೇಲೂರಿನ ಮರದ ಸಾಮಿಲ್ಲಿನ ಮಾಲೀಕ ಸಿರಾಜ್ ಎಂಬ ನಾಲ್ವರ ಮೇಲೆ ಪ್ರಕರಣ ದಾಖಲಿಸಿರುವ ಅರಣ್ಯ ಅಧಿಕಾರಿಗಳು ಅರಣ್ಯವನ್ನ ರಕ್ಷಿಸಬೇಕಾದ ಅಧಿಕಾರಿಯೇ ಮರಗಳನ್ನ ಕಡಿಸಿದ್ದರಿಂದ ಫಾರೆಸ್ಟರ್ ದರ್ಶನ್ ಮೇಲೆ ಇಲಾಖೆಗೆ ಕ್ರಮ ಕೈಗೊಂಡು ಅಮಾನತ್ತು ಮಾಡಿದ್ದಾರೆ. ಕಾಡಿನ ಮರಗಳನ್ನು ಕಡಿಯದಂತೆ ಸಂರಕ್ಷಣೆ ಮಾಡುವುದಕ್ಕೆ ಸರ್ಕಾರ ನೀಡುತ್ತಿದ್ದ ಸಂಬಳಕ್ಕೆ ನಿಯತ್ತು ಇಲ್ಲದಂತೆ ಮರಗಳನ್ನು ಹನನ ಮಾಡಿದ ಅಧಿಕಾರಿಗೆ ತಕ್ಕ ಶಿಕ್ಷೆಯಂತೂ ಆಗಿದೆ. ಆದರೆ, ಈ ಶಿಕ್ಷೆಯ ಪ್ರಮಾಣ ಅಮಾನತಿಗೆ ಮಾತ್ರ ಸೀಮಿತವಾಗದೇ ಕಠಿಣ ಶಿಕ್ಷೆ ಆಗಬೇಕು.

ರಾತ್ರಿಯೇಕೆ ಮರದ ಬಳಿ ಹೋಗ್ಬಾರದು? ದೆವ್ವ ಭೂತ ಇರೋದು ನಿಜಾನಾ?

ಭವಿಷ್ಯಕ್ಕೆ ದಟ್ಟ ಅರಣ್ಯ ಉಳಿಯುವುದೇ: ಒಟ್ಟಾರೆ ಅರಣ್ಯವನ್ನು ರಕ್ಷಣೆ ಮಾಡಬೇಕಾದವರೇ ಭಕ್ಷಕರಾಗಿ ಅರಣ್ಯದಲ್ಲಿರುವ ಬೆಲೆಬಾಳುವ ಮರವನ್ನು ನಾಶಗೊಳಿಸಲು ಮುಂದಾಗಿರುವುದು ಭಾರಿ ಪ್ರಮಾಣದ ದೊಡ್ಡ ಪ್ರಮಾದವಾಗಿದೆ. ವೈಯಕ್ತಿಕ ಹಿತಾಸಕ್ತಿಯಾಗಿ ಹಾಗೂ ಆರ್ಥಿಕ ಲಾಭಕ್ಕಾಗಿ ಅಧಿಕಾರಿಗಳೇ ಮರಗಳನ್ನು ಕಡಿದು ಸಾಗಾಟ ಮಾಡಿದರೆ ಮುಂದಿನ ಭವಿಷ್ಯಕ್ಕೆ ದಟ್ಟ ಅರಣ್ಯ ಉಳಿಯುವುದೇ ಎಂಬ ಅನುಮಾನಗಳು ಕಾಡುತ್ತಿವೆ. ಇನ್ನು ಅರಣ್ಯ ನಾಶ ಮಾಡುವ ಅಧಿಕಾರಿಗಳಿಗೆ ಸೂಕ್ತ ಮತ್ತು ಕಠಿಣ ಶಿಕ್ಷೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಚಿಂತನೆಗಳನ್ನು ಮಾಡುವ ಇತರೆ ಅಧಿಕಾರಿಗಳಿಗೂ ಇದು ಎಚ್ಚರಿಕೆಯ ಪಾಠವಾಗಬೇಕು. ಜೊತೆಗೆ, ಅರಣ್ಯ ರಕ್ಷಣೆಯ ಬಗ್ಗೆ ನೀತಿ ಪಾಠವನ್ನು ಅವರಿಗೆ ತಿಳಿಸುವುದು ಇನ್ನೂ ಅಗತಯವಾಗಿದೆ.

Follow Us:
Download App:
  • android
  • ios