ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಕಾರ್ಯಾಚರಣೆ ನಡೆಸಿದ ಬೆನ್ನೆಲ್ಲೇ, ತಾಲೂಕಿನ ಅರಹಳ್ಳಿ, ಜನಘಟ್ಟ, ಜಂಗಮ ಗುರ್ಜೇನಹಳ್ಳಿ, ಹೂವಳ್ಳಿ ಗ್ರಾಮಗಳಿಗೆ ಸೇರಿದ ಸುಮಾರು 881 ಎಕರೆ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟವರಿಗೆ ಅರಣ್ಯಇಲಾಖೆ ನೋಟಿಸ್‌ ನೀಡಿದೆ.

ಕೋಲಾರ : ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಕಾರ್ಯಾಚರಣೆ ನಡೆಸಿದ ಬೆನ್ನೆಲ್ಲೇ, ತಾಲೂಕಿನ ಅರಹಳ್ಳಿ, ಜನಘಟ್ಟ, ಜಂಗಮ ಗುರ್ಜೇನಹಳ್ಳಿ, ಹೂವಳ್ಳಿ ಗ್ರಾಮಗಳಿಗೆ ಸೇರಿದ ಸುಮಾರು 881 ಎಕರೆ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟವರಿಗೆ ಅರಣ್ಯಇಲಾಖೆ ನೋಟಿಸ್‌ ನೀಡಿದೆ.

Add Asianetnews Kannada as a Preferred SourcegooglePreferred

ಇದರಿಂದಾಗಿ ಭೂಮಿ ಕಳೆದು ಕೊಳ್ಳುವ ಭೀತಿಯಲ್ಲಿರುವ ರೈತರು ಶನಿವಾರ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಗೋವಿಂದಪ್ಪ, ಅರಣ್ಯ ಇಲಾಖೆಯವರು ಜಿಪಿಆರ್‌ಎಸ್ ಮೂಲಕ ಸರ್ವೇ ಮಾಡಿ ಅರಣ್ಯ ಭೂಮಿ ವಶಪಡಿಸಿಕೊಳ್ಳುವ ನೆಪದಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲಿ ಎಂದರು.

ಮಂಜೂರಾಗಿರುವ ಜಮೀನು

1936 ರ ಕಾಯ್ದೆ ಅಡಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯಾಚರಣೆ ನಡೆಸಿ ಭೂಮಿ ವಶಪಡಿಸಿಕೊಳ್ಳಲು ಸಿದ್ಧತೆ ಮಾಡುತ್ತಿರುವುದಾಗಿ ಅರಣ್ಯ ಇಲಾಖೆ ಹೇಳುತ್ತಿದೆ. ಆದರೆ ಆದೇಶದ ಪ್ರತಿ ನೀಡುತ್ತಿಲ್ಲ. ಅರಣ್ಯ ಇಲಾಖೆಗೆ ಸೇರಿದ ಜಮೀನಾಗಿದ್ದರೆ ಅವರು ವಶಕ್ಕೆ ಪಡೆದುಕೊಳ್ಳಲಿ. ಇದಕ್ಕೆ ನಮ್ಮಗಳ ವಿರೋಧವಿಲ್ಲ, ನಮ್ಮ ಹೆಸರಿಗೆ ಜಮೀನು ಮಂಜೂರಾಗಿ, ಕಂದಾಯ ಇಲಾಖೆಯ ದಾಖಲಾತಿಗಳು ಇದ್ದು, ಸುಮಾರು ೫೦ ವಷ೯ದಿಂದ ಸಾಗುವಳಿ ಮಾಡಿಕೊಂಡು, ಬ್ಯಾಂಕುಗಳಿಂದ ಸಾಲ ಪಡೆದು ತೋಟ, ಕೋಳಿ ಫಾರಂಗಳನ್ನು ನಡೆಸುತ್ತಿರುವ ಪ್ರಸ್ತುತ ನಮ್ಮಗಳ ಭೂಮಿಗಳನ್ನು ವಶಪಡಿಸಿಕೊಳ್ಳಲು ಯತ್ನ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

27ರಂದು ಸಿಎಂಗೆ ಮನವಿ ಸಲ್ಲಿಕೆ

ನ.27 ರಂದು ಬೆಂಗಳೂರಿನಲ್ಲಿ ನಡೆಯುವ ಸಿಎಂ ಜನತಾ ದರ್ಶನಕ್ಕೆ ತಾಲೂಕಿನ ರೈತರು 15 ರಿಂದ 20 ಬಸ್ಸುಗಳಲ್ಲಿ ತೆರಳಿ ನಮಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಿದ್ದೇವೆ. ಸಿಎಂ ರೈತರ ಪರ ಇದ್ದು ನಮಗೆ ನ್ಯಾಯ ಒದಗಿಸುವ ಭರವಸೆ ಇದೆಯೆಂದು ಹೇಳಿದರು. ಸಭೆಯಲ್ಲಿ ರೈತರ ಪರ ಕಾಮಧೇನಹಳ್ಳಿ ಅಶ್ವಥ್ ನಾರಾಯಣ ಗೌಡ, ನಗರ ಸಭೆ ಮಾಜಿ ಸದಸ್ಯ ಅಹ್ಮದ್ ಜಾಫರ್, ಮುಖಂಡರಾದ ಯಡಹಳ್ಳಿ ಮಂಜು, ಅರಹಳ್ಳಿ ಮಂಜುನಾಥ್, ಜಂಗಮ ಗುರ್ಜೇನಹಳ್ಳಿ ಜೆ.ಬಿ.ರಂಗಪ್ಪ, ಹೂವಳ್ಳಿ ಚಂದ್ರಶೇಖರ್ ಇದ್ದರು.