ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ‘ಹೆಜ್ಜಾರ್ಲೆಗೆ’ ಜಿಪಿಎಸ್‌ ಅಳವಡಿಸುವಲ್ಲಿ ಯಶಸ್ವಿಯಾದ ಡೆಹರಾಡೂನ್‌ನ ವೈಲ್ಡ್‌ ಲೈಫ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡ 

ಎಚ್‌.ಜಿ.ರವಿಕುಮಾರ್‌

ಮದ್ದೂರು(ಸೆ.12):  ಪಕ್ಷಿಯ ಮೂಲಸ್ಥಾನ ಹಾಗೂ ಅದರ ಸಂಚಾರ ಮಾರ್ಗವನ್ನು ತಿಳಿಯುವ ಉದ್ದೇಶದಿಂದ ಡೆಹರಾಡೂನ್‌ನ ವೈಲ್ಡ್‌ ಲೈಫ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ‘ಹೆಜ್ಜಾರ್ಲೆಗೆ’ ಜಿಪಿಎಸ್‌ ಅಳವಡಿಸುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪೆಲಿಕನ್‌ (ಹೆಜ್ಜಾರ್ಲೆ) ಪಕ್ಷಿಗೆ ವಿಶೇಷ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸುವ ಕಾರ್ಯ ನಡೆದಿದ್ದು, ಈ ಮೂಲಕ ಐತಿಹಾಸಿಕ ದಿನಕ್ಕೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಾಕ್ಷಿಯಾಗಿದೆ.

ಯೂರೋಪ್‌ನ ಗ್ರೀಸ್‌ನಿಂದ ತಂದಿರುವ ವಿಶೇಷ ಜಿಪಿಎಸ್‌ ಟ್ರ್ಯಾಕರ್‌ ಮೂಲಕ ಪಕ್ಷಿಯ ಪ್ರವಾಸ ಮಾರ್ಗವನ್ನು ಕಂಡುಹಿಡಿಯಲು ಸಹಕಾರಿಯಾಗಲಿದೆ. ‘ಹೆಜ್ಜಾರ್ಲೆ’ಗಳು ಯಾವ ಯಾವ ದೇಶದಲ್ಲಿ ಸಂಚರಿಸುತ್ತವೆ, ಎಲ್ಲಿ ತಂಗುತ್ತವೆ, ಅದರ ಚಟುವಟಿಕೆಗಳು ಏನಿರುತ್ತವೆ ಎಂಬ ಎಲ್ಲ ಮಾಹಿತಿಯನ್ನು ಟ್ರ್ಯಾಕಿಂಗ್‌ ಮೂಲಕ ತಿಳಿಯಬಹುದಾಗಿದೆ. ಶ್ರೀಲಂಕಾ, ಮ್ಯಾನ್ಮಾರ್‌ ದೇಶಗಳಿಗೆ ಸಂಚರಿಸಲಿರುವ ‘ಹೆಜ್ಜಾರ್ಲೆ’ ಪಕ್ಷಿಯ ಮೂಲಸ್ಥಾನ ಯಾವುದು, ಯಾವ ಯಾವ ಕಾಲಘಟ್ಟದಲ್ಲಿ ಎಲ್ಲೆಲ್ಲಿ ಸಂಚರಿಸಲಿದೆ ಎನ್ನುವುದರ ಪಕ್ಕಾ ಮಾಹಿತಿ ದೊರಕುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಹೈವೇ: ಹೆದ್ದಾರಿ ಪ್ರಾಧಿಕಾರ ವಿರುದ್ಧ ಕ್ರಿಮಿನಲ್‌ ಕೇಸು

ಸೋಲಾರ್‌ ಲೈಟ್‌ ಮೂಲಕ ಆಟೋಮ್ಯಾಟಿಕ್‌ ಆಗಿ ಚಾಜ್‌ರ್‍ ಆಗಲಿರುವ ಗ್ರೀಕ್‌ನ ಜಿಪಿಎಸ್‌ ಟ್ರ್ಯಾಕರ್‌ನ್ನು ಒಂದು ‘ಹೆಜ್ಜಾರ್ಲೆ’ ಪಕ್ಷಿಯ ರೆಕ್ಕೆಗೆ ಯಶಸ್ವಿಯಾಗಿ ಅಳವಡಿಸಲಾಯಿತು. ಇದರ ಮೂಲಕ ಕನಿಷ್ಠ ನಾಲ್ಕು ವರ್ಷಗಳ ಕಾಲ ಪಕ್ಷಿ ಸಂಚರಿಸುವ ಮಾರ್ಗದ ಎಲ್ಲಾ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ಕಳುಹಿಸಿಕೊಡುತ್ತದೆ. ಕೊಕ್ಕರೆ ಬೆಳ್ಳೂರಿಗೆ ಅಕ್ಟೋಬರ್‌ ತಿಂಗಳಲ್ಲಿ ಬರುವ ಈ ಪಕ್ಷಿಗಳು ಎರಡು ತಿಂಗಳ ಬಳಿಕ ಮಾಯವಾಗುತ್ತವೆ. ಕರ್ನಾಟಕ, ತಮಿಳುನಾಡು, ಮಲೇಶಿಯಾ, ಮ್ಯಾನ್ಮಾರ್‌ ಹಾಗೂ ಶ್ರೀಲಂಕಾದಲ್ಲಿ ಮಾತ್ರ ಈ ಪಕ್ಷಿ ಸಂತತಿ ಕಾಣಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.