ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಬಳಿ ರಸ್ತೆ ವಿಸ್ತರಣೆ ಕಾಮಗಾರಿಯಿಂದ ಮರಗಳ ಬುಡ ಸಡಿಲಗೊಂಡಿದೆ. ಇದರಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಉರುಳುವ ಭೀತಿ ಎದುರಾಗಿದ್ದು, ಮಳೆಗಾಲದಲ್ಲಿ ಇದು ಪ್ರಯಾಣಿಕರಿಗೆ ದೊಡ್ಡ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ: ರಸ್ತೆ ವಿಸ್ತರಣೆ ಕಾಮಗಾರಿ ಪರಿಣಾಮ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಸೀಟು ಪರಿಸರದಲ್ಲಿ ಹಲವು ಮರಗಳು ರಸ್ತೆಗೆ ಉರುಳುವ ಭೀತಿ ಎದುರಾಗಿದೆ. ಮಂಗಳವಾರದ ಮಳೆಗೆ ಇಲ್ಲಿ ಮರವೊಂದು ರಸ್ತೆ ಹಾಗೂ ವಿದ್ಯುತ್ ಲೈನ್ ಮೇಲೆ ಉರುಳಿ ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ವಾಹನಗಳ ಸಂಚಾರವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಶಾಲಾ ಬಸ್ ಸಹಿತ ಕೆಲವು ದ್ವಿಚಕ್ರ ವಾಹನಗಳು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿವೆ.
ನಿಡಿಗಲ್ ನಿಂದ ಸೋಮಂತಡ್ಕ ತನಕದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗಾಗಿ ಎರಡು ಬದಿಗಳಲ್ಲಿ ಮರಗಳ ಬುಡ ಭಾಗದವರೆಗೂ ಅಗೆದುಹಾಕಲಾಗಿದೆ. ರಸ್ತೆ ವಿಸ್ತರಣೆಗೆ ಇಲ್ಲಿರುವ ಮರಗಳ ಬೇರಿನ ಭಾಗದವರೆಗೂ ಮಣ್ಣು ತೆರವುಗೊಳಿಸಲಾಗಿದೆ. ಇದರಿಂದ ಮರಗಳ ಬುಡಭಾಗದ ಮಣ್ಣು ಸಡಿಲಗೊಂಡು ಅವು ರಸ್ತೆಯತ್ತ ವಾಲಿ ನಿಂತಿವೆ.
ಪ್ರಸ್ತುತ ಸುರಿಯುತ್ತಿರುವ ಮಳೆಗೆ ಅರಣ್ಯ ಭಾಗದ ನೀರು ಈ ಮರಗಳ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು ಇನ್ನಷ್ಟು ಮಣ್ಣು ಸವಕಳಿ ಯಾಗುತ್ತಿದೆ. ಚರಂಡಿ ನಿರ್ಮಾಣವಾಗದೆ ಮರಗಳ ಬುಡ ಭಾಗದ ಅಲ್ಲಲ್ಲಿ ನೀರು ಸಂಗ್ರಹ ಗೊಳ್ಳುತ್ತಿದೆ. ಇದು ಕೂಡ ಮರಗಳು ಉರುಳಲು ಕಾರಣವಾಗುತ್ತಿದೆ.
ಚರಂಡಿಯಲ್ಲಿ ವಿದ್ಯುತ್ ಕಂಬ
ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ವಿದ್ಯುತ್ ಲೈನ್ ನ್ನು ಸ್ಥಳಾಂತರಗೊಳಿಸಲಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳನ್ನು ಚರಂಡಿಯಲ್ಲಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯುವ ವೇಳೆ ಕಂಬಗಳ ಬುಡ ಭಾಗದ ಮಣ್ಣು ಕೊಚ್ಚಿಕೊಂಡು ಹೋಗಿ ಇವು ಕೂಡ ರಸ್ತೆಗೆ ಬೀಳುವ ಸಾಧ್ಯತೆ ಇದೆ. ಕೆಲವೊಂದು ಕಂಬಗಳು ವಾಲಿ ನಿಂತಿವೆ. ಕಂಬಗಳ ಮೇಲ್ಭಾಗದಲ್ಲಿ ಹಲವಾರು ಮರಗಳಿದ್ದು ಇವು ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗುವ ಸಾಧ್ಯತೆ ಇದೆ.
ಅಪಾಯ ಖಚಿತ
ಇಲ್ಲಿನ ಅಪಾಯಕಾರಿ ಮರಗಳನ್ನು ತೆರೆವುಗೊಳಿಸದಿದ್ದರೆ ಈ ಮಳೆಗಾಲದಲ್ಲಿ ಇವು ರಸ್ತೆಗೆ ಉರುಳಿ ಬೀಳಲಿವೆ. ಈಗಾಗಲೇ ದಿನದಿಂದ ದಿನಕ್ಕೆ ಮರಗಳು ರಸ್ತೆಯತ್ತ ವಾಲತೊಡಗಿವೆ. ಮರಗಳು ಚಲಿಸುವ ವಾಹನಗಳ ಮೇಲೆ ಪಾದಚಾರಿಗಳ ಮೇಲೆ ಬಿದ್ದರೆ ಪ್ರಾಣ ಹಾನಿಯೂ ಸಂಭವಿಸಬಹುದು. ಮಳೆಯ ವೇಳೆ ಈ ಪ್ರದೇಶದಲ್ಲಿ ವಾಹನ ಸವಾರರು ಭಯದ ಸನ್ನಿವೇಶದಲ್ಲಿ ಸಂಚರಿಸುವಂತಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ವ್ಯತ್ಯಯವು ಉಂಟಾಗುತ್ತದೆ.
ಸೀಟು ಪ್ರದೇಶದಲ್ಲಿರುವ ಅಪಾಯಕಾರಿ ಮರಗಳ ಹಾಗೂ ಗೆಲ್ಲುಗಳ ತೆರವಿನ ಕುರಿತು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ತಕ್ಷಣ ಇನ್ನೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಮೆಸ್ಕಾಂ ಎಇಇ ಪ್ರವೀಣ್ ಹೇಳುತ್ತಾರೆ.


