ಚಿತ್ರದುರ್ಗದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಹಿನ್ನೆಲೆಯಲ್ಲಿ ಮೆಕ್ಕೇಜೋಳ ಸೇರಿ ಹಲವು ಫಸಲುಗಳಿಗೆ ಶೀತವಾಗಿದ್ದು ನಿವಾರಣೆ ಸಂಬಂಧ ರೈತರು ಯೂರಿಯಾ ಮೊರೆ ಹೋಗುತ್ತಿದ್ದಾರೆ. ಕಳೆದ ತಿಂಗಳು ಕೊಳ್ಳುವರು ಇಲ್ಲದೇ ಸಿಕ್ಕಾಪಟ್ಟೆ ದಾಸ್ತಾನು ಇತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ರೈತರು ಒಮ್ಮೆಲೆ ಮುಗಿ ಬಿದ್ದಿದ್ದು ಕೃಷಿ ಇಲಾಖೆ ಅಧಿಕಾರಿಗಳು ನೂಕು ನುಗ್ಗಲು ತಪ್ಪಿಸಲು ಹರಸಾಹಸ ಪಡುವಂತಾಗಿದೆ.

ಚಿತ್ರದುರ್ಗ(ಆ.04): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಫಸಲು ಉಳಿಸಿಕೊಳ್ಳಲು ರೈತರು ಯೂರಿಯಾ ಗೊಬ್ಬರ ಕೊಳ್ಳಲು ಮುಗಿ ಬಿದ್ದಿದ್ದು ದಾಸ್ತಾನು ಕೊರತೆ ಹಿನ್ನೆಲೆ ಸಂಕಷ್ಟಪರಿಸ್ಥಿತಿ ಎದುರಿಸುವಂತಾಗಿದೆ.

Add Asianetnews Kannada as a Preferred SourcegooglePreferred

ಮಳೆ ಹಿನ್ನೆಲೆಯಲ್ಲಿ ಮೆಕ್ಕೇಜೋಳ ಸೇರಿ ಹಲವು ಫಸಲುಗಳಿಗೆ ಶೀತವಾಗಿದ್ದು ನಿವಾರಣೆ ಸಂಬಂಧ ರೈತರು ಯೂರಿಯಾ ಮೊರೆ ಹೋಗುತ್ತಿದ್ದಾರೆ. ಕಳೆದ ತಿಂಗಳು ಕೊಳ್ಳುವರು ಇಲ್ಲದೇ ಸಿಕ್ಕಾಪಟ್ಟೆ ದಾಸ್ತಾನು ಇತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ರೈತರು ಒಮ್ಮೆಲೆ ಮುಗಿ ಬಿದ್ದಿದ್ದು ಕೃಷಿ ಇಲಾಖೆ ಅಧಿಕಾರಿಗಳು ನೂಕು ನುಗ್ಗಲು ತಪ್ಪಿಸಲು ಹರಸಾಹಸ ಪಡುವಂತಾಗಿದೆ.

ತರುಣ ರೈತರು ಟೊಂಕಕಟ್ಟಿದ ಪರಿಣಾಮ ಸಮೃದ್ಧ ಕಾಡು ನಿರ್ಮಾಣ

ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ 900 ಚೀಲದಷ್ಟು ಯೂರಿಯಾ ದಾಸ್ತಾನು ಇದ್ದು ಪ್ರತಿ ರೈತರಿಗೆ ಎರಡು ಪ್ಯಾಕೆಟ್‌ ನಂತೆ ವಿತರಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿತ್ತು. ಆಧಾರ್‌ ಕಾರ್ಡ್‌ ಕೈಯಲ್ಲಿ ಹಿಡಿದು ಬಂದಿದ್ದ ರೈತರು ಸರತಿಯಲ್ಲಿ ನಿಂತು ಯೂರಿಯಾ ಕೊಳ್ಳಲು ಮುಂದಾಗಿದ್ದರು. ಇನ್ನೆರಡು ದಿನಗಳಲ್ಲಿ ಮತ್ತಷ್ಟು ಯೂರಿಯಾ ಬರುವ ಸಾಧ್ಯತೆ ಇದೆ. ಅಲ್ಲಿ ತನಕ ರೈತರು ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲವೆಂದು ಕೃಷಿ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಯೂರಿಯಾ ಬಳಕೆ ಬೇಡ:

ಏತನ್ಮಧ್ಯೆ ಕೃಷಿ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅತಿಯಾಗಿ ಯೂರಿಯಾ ಬಳಕೆ ಮಾಡಬಾರದೆಂದು ರೈತರಲ್ಲಿ ಮನವಿ ಮಾಡಿದೆ. ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ಸಂಭವವಿದೆ ಎಂದಿದೆ.

ಯೂರಿಯಾ ರಸಗೊಬ್ಬರವನ್ನು ಮಣ್ಣು ಪರೀಕ್ಷಾ ವರದಿಯಲ್ಲಿನ ಶಿಫಾರಸ್ಸಿನ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬೇಕು. ಬಿತ್ತನೆ ಸಮಯದಲ್ಲಿ ಯೂರಿಯಾ ಮಾತ್ರ ಖರೀದಿಸದೇ ಸಮತೋಲನ ಪೋಷಕಾಂಶಗಳನ್ನು ಒದಗಿಸಲು ಕಾಂಪ್ಲೆಕ್ಸ್‌, ಡಿಎಪಿ ಹಾಗೂ ಎಂಒಪಿ ರಸಗೊಬ್ಬರ ಬಳಸುವುದು ಉತ್ತಮ.

ತೋಟಗಾರಿಕೆ ಹಾಗೂ ಹನಿ ನೀರಾವರಿ ಬೆಳೆಗಳಿಗೆ ಶೇ.100 ರಷ್ಟುನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು ಹಾಗೂ ಕಬ್ಬು ಬೆಳೆಗಾರರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಅಮೋನಿಯಂ ಸಲ್ಪೇಟ್‌ ಬಳಸಬೇಕು. ರಸಗೊಬ್ಬರಕ್ಕೆ ಅತಿ ಹೆಚ್ಚಿನ ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿರುವುದರಿಂದ ಆದಷ್ಟು ಮಿತವಾಗಿ ಬಳಕೆ ಮಾಡಬೇಕು. ಯೂರಿಯಾ ರಸಗೊಬ್ಬರ ದಪ್ಪ ಕಾಳು ಹಾಗೂ ಸಣ್ಣ ಕಾಳಿನ ಅಳತೆಯಲ್ಲಿ ಸರಬರಾಜಾಗುತ್ತಿದ್ದು, ಆದರೆ ಪೋಷಕಾಂಶದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹೀಗಾಗಿ ರೈತರು ಲಭ್ಯವಿರುವ ಯಾವುದೇ ಗಾತ್ರದ ರಸಗೊಬ್ಬರ ಬಳಕೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ನೋಡುಗರ ಹೃದಯ ಗೆದ್ದ ಹೃದಯಾಕಾರದ ಗದ್ದೆ!

"