ದೆಹಲಿ ರೈತರ ಹೋರಾಟ ರಾಜ್ಯಕ್ಕೂ ವಿಸ್ತರಣೆ : ರೈತ ನಾಯಕಿ
ದಕ್ಷಿಣ ಭಾರತದಲ್ಲಿಯೂ ರೈತರ ಹೋರಾಟ ವಿಸ್ತರಿಸಲು ರೈತ ಸಂಘಟನೆಗಳು ಪ್ಲ್ಯಾನ್ ಮಾಡಿವೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಸಲು ಪ್ಲಾನ್ ಮಾಡಲಾಗಿದೆ.
ಬೆಳಗಾವಿ (ಮಾ.13): ನೂತನ ಕೃಷಿಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೂ ರೈತರ ಹೋರಾಟ ವಿಸ್ತರಿಸಲು ರೈತ ಸಂಘಟನೆಗಳು ಪ್ಲ್ಯಾನ್ ಮಾಡಿವೆ.
ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಸಲು ಪ್ಲಾನ್ ಮಾಡಲಾಗಿದೆ.
ಬೆಳಗಾವಿಯಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾರ್ಚ್ 20 ರಂದು ಶಿವಮೊಗ್ಗ, ಮಾರ್ಚ್ 21ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಮಾರ್ಚ್ 31ರಂದು ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಲಾಗುವುದು. ಬೆಳಗಾವಿ ವಿಭಾಗದ ಆರು ಜಿಲ್ಲೆಗಳ ರೈತರ ಸಮಾವೇಶ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮಾ. 26ಕ್ಕೆ ಭಾರತ ಬಂದ್ಗೆ ಕರೆ! .
ರೈತ ನಾಯಕರಾದ ರಾಕೇಶ್ ಟಿಕಾಯಿತ್, ಯುದ್ವೀರ್ ಸಿಂಗ್, ಡಾ.ದರ್ಶನ್ ಪಾಲ್ ಭಾಗಿಯಾಗಲಿದ್ದಾರೆ. ಬೆಳಗಾವಿಯ ಸಮಾವೇಶದಲ್ಲಿ ರೈತ ಮುಖಂಡ ಯೋಗೇಂದ್ರ ಯಾದವ್ ಭಾಗಿ ಸಾಧ್ಯತೆ ಇದ್ದು, ಎಲ್ಲಾ ರೈತ ಸಂಘಟನೆಗಳು ಬಣಗಳ ಮರೆತು ಸಮಾವೇಶ ಯಶಸ್ವಿಗೆ ತೀರ್ಮಾನ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಡಳಿತ ಸಮಾವೇಶ ನಡೆಸಲು ಜಾಗ ನೀಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಪೊಲೀಸರು ಅವಕಾಶ ಕೊಡದಿದ್ದರೆ ಯಾವ ಸ್ವರೂಪ ಪಡೆಯಬೇಕೋ ಪಡೆಯುತ್ತದೆ. ಪರ್ಯಾಯ ಜಾಗ ನೀಡಿದರೆ ಅಲ್ಲಿ ಸಮಾವೇಶ ನಡೆಸಲು ಸಿದ್ಧರಿದ್ದೇವೆ. ರಾಜಕೀಯ ಒತ್ತಡದಿಂದ ಬೆಳಗಾವಿ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ ಎಂದು ಚುಕ್ಕಿ ಹೇಳಿದರು.
ಉಪಚುನಾವಣೆ ಇರೋದ್ರಿಂದ ಸಮಾವೇಶ ನಡೆಸಲು ಜಾಗ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಲ್ಲೆಲ್ಲಾ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಇದು ಬಿಜೆಪಿ ಅಥವಾ ಕಾಂಗ್ರೆಸ್ ವಿರುದ್ಧದ ಹೋರಾಟ ಅಲ್ಲ, ರೈತರ ಉಳಿವಿಗಾಗಿ ಹೋರಾಟ ಎಂದು ಬೆಳಗಾವಿಯಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.