ರಾಜ್ಯದಲ್ಲಿ ರೈತರ ವಿರೋಧದ ನಡುವೆಯೇ ಹೊಸ ಮಸುದೆಯೊಂದನ್ನು ಜಾರಿಗೆ ಮಾಡಿದ್ದು, ರೈತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಸೆ.25): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿ ನೀತಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯದ ಅನ್ನದಾತರು ಒಂದೆಡೆ ರಾಜಧಾನಿಯ ಕದ ತಟ್ಟಿಪ್ರತಿಭಟನೆಗೆ ಇಳಿದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಸದ್ದಿಲ್ಲದೇ ಕೃಷಿ ಭೂಮಿ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ವಿಧಾನವನ್ನು ಸರ್ಕಾರ ಸರಳೀಕರಣಗೊಳಿಸಿ ಆದೇಶ ಹೊರಡಿಸಿದೆ.

ಹೌದು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ (ಭೂ ಮಂಜೂರಾತಿ-1) ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಅನ್ವಯ ಹಿನ್ನೆಲೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಯಾರೇ ಅರ್ಜಿ ಸಲ್ಲಿಸಿದರೆ ಕೇವಲ 30 ದಿನಗಳಲ್ಲಿ ಅರ್ಜಿ ವಿಲೇವಾರಿ ಆಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆದೇಶ ಹೊರ ಬೀಳಲಿದ್ದು ಕಂದಾಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿರುವುದು ಸಾಕಷ್ಟುಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ದಾವಣಗೆರೆ: ಟೈರ್‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ, ಹೆಚ್ಚಾಗುತ್ತಿದೆ ಪ್ರತಿಭಟನೆ ಕಾವು ...

ಈ ಹಿಂದೆ ಭೂ ಪರಿವರ್ತನೆಗೆ ಯಾರೇ ಅರ್ಜಿ ಸಲ್ಲಿಸಿದರೂ ವಿಲೇವಾರಿಗೆ ವರ್ಷಾನುಗಟ್ಟಲೇ ಡಿಸಿ ಕಚೇರಿಯಲ್ಲಿ ಕಡತ ಧೂಳು ಹಿಡಿಯುತ್ತದೆ. ಜೊತೆಗೆ ಸಂಬಂಧಪಟ್ಟಪ್ರಾಧಿಕಾರಿಗಳು ಎನ್‌ಒಸಿ ಇಲ್ಲದೇ ಭೂ ಪರಿವರ್ತನೆ ಕಷ್ಟಸಾಧ್ಯವಾಗುತ್ತಿತ್ತು. ಆದರೆ ಸರ್ಕಾರ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 95(2)ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಇರುವ ಭೂ ಪರಿವರ್ತನಾ ವಿಧಾನವನ್ನು ಹಲವು ಷರತ್ತುಗಳಿಗೊಳಪಟ್ಟು ಸರಳೀಕರಿಸಿದೆ. ಇದರಿಂದ ಭೂ ಪರಿವರ್ತನೆ ಕೋರಿಕೆಗಳನ್ನು ಭೂ ಪರಿವರ್ತನಾ ತಂತ್ರಾಂಶದ ಮೂಲಕ ನಿರ್ವಹಿಸಿ ಜಿಲ್ಲಾಧಿಕಾರಿಗಳ ಡಿಜಿಟಲ್‌ ಸಹಿ ಕಾರ್ಡಿನ ಮೂಲಕ ಹೊರಡಿಸಲಾಗುತ್ತದೆ. ಅರ್ಜಿ ಜೊತೆಗೆ ಕನಿಷ್ಠ ದಾಖಲೆ ಒದಗಿಸಿದರೆ ಸಾಕು ಭೂ ಪರಿವರ್ತನೆ ಸಲೀಸಾಗಿ ತ್ವರಿತಗತಿಯಲ್ಲಿ ಆಗುತ್ತದೆ.

ಆಕ್ಷೇಪಣೆಗೆ 15, ಆದೇಶಕ್ಕೆ 30 ದಿನ:

ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಇಲಾಖೆ ಅಥವಾ ಪ್ರಾಧಿಕಾರಿಗಳು 15 ದಿನದೊಳಗೆ ಯಾವುದೇ ಸ್ಪೀಕೃತ, ವರದಿ, ಅಭಿಪ್ರಾಯ ಅಥವಾ ಭೂ ಪರಿರ್ವತನೆಗೆ ಯಾವುದೇ ಆಕ್ಷೇಪಣೆ ಬಾರದೇ ಹೋದಲ್ಲಿ ಡಿಸಿ ಭೂ ಪರಿವರ್ತನೆಗೆ ಕ್ರಮ ವಹಿಸಬೇಕು. ಜೊತೆ ಆನ್‌ಲೈನ್‌ನಲ್ಲಿ ಭೂ ಪರಿವರ್ತನೆಗೆ ಅರ್ಜಿ ಸ್ಪೀಕರಿಸಿದ 30 ದಿನಗಳಲ್ಲಿ ಡಿಸಿ ಭೂ ಪರಿವರ್ತನೆಗೆ ಆದೇಶ ಮಾಡಬೇಕು. ಇಲ್ಲದೇ ಹಿಂಬರಹ ಒದಗಿಸಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಸರ್ಕಾರ ಸರಳೀಕೃತ ಆದೇಶವೇನು?

ಅರ್ಜಿದಾರರು ಭೂ ಪರಿವರ್ತನೆಗೆ ಆನ್‌ಲೈನ್‌ ಮೂಲಕ ಡಿಸಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆಗೆ ಚಾಲ್ತಿ ಪಹಣಿ, ಮ್ಯೂಟೇಶಷನ್‌, ಭೂ ಪರಿವರ್ತನಾ ಪೂರ್ವ ನಕ್ಷೆ. ನೋಟರಿಯಿಂದ ಪ್ರಮಾಣೀಕರಿಸಿದ ಮೂಲ ಅಫಿಡವಿಟ್‌ ಪ್ರತಿಯನ್ನು ಆನ್‌ಲೈನ್‌ಲ್ಲಿ ಅಪ್‌ಲೋಡ್‌ ಮಾಡಬೇಕು, ಅರ್ಜಿದಾರರು ಅಫಿಡವಿಟ್‌ನ್ನು ಡಿಸಿ ಅಥವಾ ತಹಸೀಲ್ದಾರ್‌ಗೆ ಮತ್ತೊಮ್ಮೆ ಸಲ್ಲಿಸುವ ಅವಶ್ಯಕತೆ ಇರಲ್ಲ. ಆನ್‌ಲೈನ್‌ ಅರ್ಜಿ ಆಧರಿಸಿ ಡಿಸಿ ಅಥವಾ ಇತರೇ ಪ್ರಾಧಿಕಾರಿಗಳು ಕ್ರಮ ವಹಿಸಲಿವೆ. ಜೊತೆಗೆ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಡಿಸಿ ಯಾವುದೇ ಭೌತಿಕ ಅಥವಾ ಹಸ್ತಚಾಲಿತ ದಾಖಲೆಗಳನ್ನು ಅರ್ಜಿದಾರರಿಂದ ಪಡೆಯದೇ ಕೇವಲ ಆನ್‌ಲೈನ್‌ ಮೂಲಕ ಸಲ್ಲಿಸಿದ ದಾಖಲೆಗಳನ್ನೇ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಡಿಸಿಗಳಿಗೆ ಸರ್ಕಾರ ಸೂಚಿಸಿದೆ.