ಶಾಸಕ ಬಿ.ಸಿ. ನಾಗೇಶ್‌ ಸಚಿವರಾದ ಮೇಲೆ ಜನತೆಯ ಸಂಕಷ್ಟಮರೆತು ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಜನತೆಯ, ರೈತರ ಕಷ್ಟಗಳು, ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆಯೇ ಇಲ್ಲ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ   ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿಪಟೂರು: ಶಾಸಕ ಬಿ.ಸಿ. ನಾಗೇಶ್‌ ಸಚಿವರಾದ ಮೇಲೆ ಜನತೆಯ ಸಂಕಷ್ಟಮರೆತು ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಜನತೆಯ, ರೈತರ ಕಷ್ಟಗಳು, ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆಯೇ ಇಲ್ಲ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರು ಮನಬಂದಂತೆ ಆಡಳಿತ ನಡೆಸುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಲಂಚಗುಳಿತನ ತಾಂಡವವಾಡುತ್ತಿದೆ. ಜನಸಾಮಾನ್ಯರು ಸಣ್ಣಪುಟ್ಟಕೆಲಸ ಮಾಡಿಸಿಕೊಳ್ಳಲು ಹತ್ತಾರು ಬಾರಿ ಅಲೆದಾಡುವಂತಾಗಿದೆ. ಕೆಲಸ ನಿರ್ವಹಣೆ ವೇಳೆ ನಗರಸಭೆಯಲ್ಲಿ ಯಾವುದೇ ಅಧಿಕಾರಿಗಳು ಇರುವುದಿಲ್ಲ.

ಕೆಲಸಕಾರ್ಯಕ್ಕೆ ಅಧಿಕಾರಿಗಳನ್ನು ಹುಡುಕುವುದರಲ್ಲಿಯೇ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದ ಜನರು ರೋಸಿ ಹೋಗಿದ್ದಾರೆ. ರಾಜಕಾಲುವೆಗಳು ಒತ್ತುವರಿಯಾಗಿದ್ದು ಮಳೆ ಬಂದರೆ ಪರದಾಡುವ ಸ್ಥಿತಿ. ಚರಂಡಿ ನೀರು, ಮಳೆ ನೀರು ನಗರಕ್ಕೆ ಕುಡಿವ ನೀರು ಪೂರೈಸುವ ಈಚನೂರು ಕೆರೆಗೆ ಸೇರ್ಪಡೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ. ತಿಪಟೂರು ನಗರ ಯೋಜನಾ ಪ್ರಾಧಿಕಾರಕ್ಕೆ ತಮ್ಮ ಅವಧಿ ಮುಗಿಯಲು ಬಂದರೂ ಯಾರನ್ನೂ ಅಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ. ಸಣ್ಣಪುಟ್ಟಕಾಮಗಾರಿಗಳಿಗೆ ಪೂಜೆ ಮಾಡುವುದನ್ನೇ ಸಚಿವರು ದೊಡ್ಡ ಕೆಲಸವನ್ನಾಗಿಸಿಕೊಂಡಿದ್ದಾರೆ.

ರಕ್ಷಣೆ ನೀಡದ ಪೊಲೀಸ್‌ ವ್ಯವಸ್ಥೆ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಕಳ್ಳರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ನಗರದಲ್ಲಿ ಟ್ರಾಫಿಕ್‌ ವ್ಯವಸ್ಥೆ ಇಲ್ಲ. ಫುಟ್‌ಪಾತ್‌ ಸ್ಥಳ ಬೀದಿ ಬದಿ ವ್ಯಾಪಾರಿಗಳ ಕೇಂದ್ರವಾಗಿದ್ದು, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಪೋಲಿ ಪುಂಡರು ವೀಲಿಂಗ್‌ ಮಾಡಿಕೊಂಡು ಹುಡುಗಿಯರನ್ನು ಚುಡಾಯಿಸುತ್ತಾ ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿನಿಯರು ಓಡಾಡುವ ರಸ್ತೆಯುದ್ದಕ್ಕೂ ಮನಬಂದಂತೆ ವಾಹನ ಓಡಿಸುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ.

ಕತ್ತಲಿನಲ್ಲಿ ಸ್ತಂತ್ರಸ್ತರು: ಎತ್ತಿನಹೊಳೆ ಯೋಜನೆಗಾಗಿ 3-4ವರ್ಷಗಳಿಂದಲೂ ಭೂಸ್ವಾಧೀನ ಪ್ರಕ್ರಿಯೆ ಆಮೆವೇಗದಲ್ಲಿ ನಡೆದಿದ್ದು ಇಲ್ಲಿಯವರೆಗೂ ಭೂಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ಸಚಿವರು ಮುಂದಾಗಿಲ್ಲ. ಭೂಮಿ ಕಳೆದುಕೊಳ್ಳುವ ರೈತರು ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಭೂಮಿ ಬಿಟ್ಟು ಕೈಕಟ್ಟಿಕೂರುವಂತಾಗಿದ್ದು, ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ.

ಪರಿಹಾರದ ಮಾನದಂಡ ಹಾಗೂ ರೀತಿ ನೀತಿಗಳನ್ನ ತಿಳಿಸದೆ ರೈತರನ್ನು ಕತ್ತಲೆಯಲ್ಲಿಡಲಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ರೈತರು ಅನುಭವಿಸುತ್ತಿದ್ದರೂ ಯೋಜನೆ ಸಂಬಂಧ ಸಚಿವರು ಈವರೆಗೂ ಒಂದೇ ಒಂದು ಸಭೆ ನಡೆಸದೆ ಹಾಗೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ. ರೈತರ ಸಂಕಟಗಳು ತಿಳಿದಿದ್ದರೂ ಜಾಣಕುರುಡು ವಹಿಸುತ್ತಾ ಭೂಸಂತ್ರಸ್ಥರಿಗೂ, ಯೋಜನೆಗೂ ನನಗೂ ಸಂಬಂದವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಎನ್‌.ಹೆಚ್‌. 206 ಚತುಷ್ಪಥ ರಸ್ತೆಗೆ ರೈತರು ಭೂಮಿ ನೀಡುತ್ತಿದ್ದು, ಭೂಮಿ ಕಳೆದುಕೊಂಡ ಎಷ್ಟೋ ಸಂತ್ರಸ್ತರಿಗೆ ಈವರೆಗೂ ಪರಿಹಾರ ದೊರಕಿಸಿಕೊಡಲು ಸಚಿವರು ಮುಂದಾಗಿಲ್ಲ. ನಗರ, ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸಚಿವರು ಸ್ಪಂದಿಸದಿರುವುದನ್ನು ತಾಲೂಕಿನ ಯುವಜನತೆ, ರೈತರು, ಮಹಿಳೆಯರು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜವಾಬ್ಧಾರಿಯುತ, ಜನಸ್ನೇಹಿಯಾದ ಉತ್ತಮ ಜನಪ್ರತಿನಿಧಿಯನ್ನು ಚುನಾಯಿಸಲು ಮುಂದಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

10 ತಾಸು ವಿದ್ಯುತ್‌ ಒದಗಿಸಲು ಸರ್ಕಾರ ಚಿಂತನೆ

ರೈತರಿಗೆ ಏಳು ತಾಸು ಬದಲಾಗಿ 10 ತಾಸು ವಿದ್ಯುತ್‌ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ತಾಲೂಕಿನ ಸುಳೇಕಲ್‌ ಗ್ರಾಮದ ಬಳಿಯ .150 ಕೋಟಿ ವೆಚ್ಚದ 220/110/11ಕೆವಿ ವಿದ್ಯುತ್‌ ಉಪಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಎರಡು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಹೊಸ ವಿದ್ಯುತ್‌ ಉಪಕೇಂದ್ರಗಳ ಅನಾವರಣ ಮಾಡಲಾಗಿದೆ. ಇಂಧನ ಇಲಾಖೆ ಇತಿಹಾಸದಲ್ಲಿ ಇದು ಹೊಸ ಮೈಲುಗಲ್ಲು. ಇಂಧನ ಇಲಾಖೆಯನ್ನು ಜನಸ್ನೇಹಿ ಮಾಡಲು ಸರ್ಕಾರ ಬದ್ಧವಿದೆ. ಗ್ರಾಮೀಣ ಭಾಗದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗಕ್ಕೆ ಅಮೃತ ಜ್ಯೋತಿ ಯೋಜನೆಯಡಿ 75 ಯುನಿಟ್‌ ಉಚಿತ ವಿದ್ಯುತ್‌ ಪೂರೈಸಲು ಘೋಷಿಸಲಾಗಿದೆ. ರಾಜ್ಯದ ವಿದ್ಯುತ್‌ ರಹಿತ ಪ್ರದೇಶದಲ್ಲಿ 6 ಸಾವಿರ ಕಿ.ಮೀ. ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದೇವೆ. ಬೆಳಕು ಯೋಜನೆಯಡಿ ವಿದ್ಯುತ್‌ರಹಿತ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿ, ಸಾರ್ವಜನಿಕರಿಗೆ ನೆರವಾಗಿದ್ದೇವೆ ಎಂದರು.