* ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ಘಟನೆ* ಕೃಷಿ ಪರಿಕರಗಳನ್ನು ಖರೀದಿಸಲು ಒಮ್ಮಲೆ ದಾಂಗುಡಿ ಇಟ್ಟರು ಜನರು* ಸಬ್ಸಿಡಿ ದರ ಪ್ರಕಟಿಸುತ್ತಿದ್ದಂತೆ ಗೊಬ್ಬರ ಪಡೆಯಲು ಮುಗಿಬಿದ್ದ ರೈತರು  

ಕೊಟ್ಟೂರು(ಮೇ.26): ಕೊರೋನಾ ರೋಗ ವ್ಯಾಪಕವಾಗಿ ಹರಡುತ್ತಿರುವ ಈ ದಿನಗಳಲ್ಲಿ ಇದರ ಪರಿವೇ ಇಲ್ಲದೆ ಪಟ್ಟಣದ ಜೈ ಕಿಸಾನ್‌ ಆಗ್ರೋ ಮತ್ತು ಕೆಮಿಕಲ್ಸ್‌ ಅಂಗಡಿ ಮುಂದೆ ಡಿಎಪಿ ಗೊಬ್ಬರವನ್ನು ಪಡೆಯಲು ರೈತರು ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ಮಂಗಳವಾರ ನಿಂತಿದ್ದರು.

Add Asianetnews Kannada as a Preferred SourcegooglePreferred

ಸರ್ಕಾರ ಡಿಎಪಿ ಗೊಬ್ಬರ ಬೆಲೆಯನ್ನು ಸಬ್ಸಿಡಿ ದರ ಪ್ರಕಟಿಸುತ್ತಿದ್ದಂತೆ ರೈತರು ಗೊಬ್ಬರವನ್ನು ಪಡೆಯಲು ಮುಗಿಬಿದ್ದರು. ಪಟ್ಟಣದ ಎಲ್ಲ ರಸಗೊಬ್ಬರ ಅಂಗಡಿಯಲ್ಲಿ ಡಿಎಪಿ ಗೊಬ್ಬರ ಮಾರಾಟಕ್ಕೆ ಅನುಕೂಲ ಮಾಡಿ ಕೊಡುತ್ತಿದ್ದಂತೆ ಎಲ್ಲ ಅಂಗಡಿಗಳಲ್ಲಿ ಗೊಬ್ಬರ ಕ್ಷಣಮಾತ್ರದಲ್ಲಿ ದಾಸ್ತನು ಎಲ್ಲ ಮಾರಾಟವಾಯಿತು. ಪಟ್ಟಣದ ಜೈಕಿಸಾನ್‌ಆಗ್ರೋ ಮತ್ತು ಕೆಮಿಕಲ್ಸ್‌ಅಂಗಡಿ ಬಳಿ ದಾಸ್ತಾನು ಇರುವ ಮಾಹಿತಿ ಅರಿತು ಪಟ್ಟಣ ಮತ್ತು ತಾಲೂಕಿನ ರೈತರು ಬೆಳಗ್ಗೆ 7 ಗಂಟೆಯಿಂದಲೇ ಅಂಗಡಿಯ ಮುಂದೆ ಜಮಾವಣೆಗೊಂಡು ಉದ್ದನೆಯ ಸಾಲಿನಲ್ಲಿ ನಿಂತುಕೊಂಡರು.

"

ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಎಷ್ಟೇ ಅಧಿಕಾರಿಗಳು ಎಚ್ಚರಿಸಿದರು ಇಂತಹವುಗಳ ಮಾತಿಗೆ ಕಿಂಚಿತ್ತೂ ಕಿವಿಗೊಡದೆ ಗೊಬ್ಬರವನ್ನು ಪಡೆಯಲು ನಾಮುಂದು ತಾಮುಂದು ಎಂದು ಮುಂದಾದರು.
ಸೋಮವಾರ ತಾಲೂಕಿನಲ್ಲಿ ಉತ್ತಮ ಮಳೆ ಆಗಿದ್ದರಿಂದ ರೈತರು ತಮ್ಮ ಕೃಷಿ ಭೂಮಿಗಳಲ್ಲಿ ಬಿತ್ತನೆ ಕಾರ್ಯಕೈಗೊಳ್ಳಲು ಕೃಷಿ ಪರಿಕರಗಳನ್ನು ಖರೀದಿಸಲು ಒಮ್ಮಲೆ ದಾಂಗುಡಿ ಇಟ್ಟರು ನೂರಾನು ಜನರು ಸಾಲಿನಲ್ಲಿದ್ದರು ಮಾಸ್ಕ್‌ ಧರಿಸಿದವರು ಅಲ್ಲೊಬ್ಬರು ಇಲ್ಲೊಬ್ಬರು ಕಂಡು ಬಂದರು.

ಕೂಡ್ಲಿಗಿ: ಬಿತ್ತನೆ ಬೀಜ ಖರೀ​ದಿಗೆ ಲಾಕ್‌ಡೌನ್‌ ಅಡ್ಡಿ

ಲಾಕ್‌ಡೌನ್‌ ವಿನಾಯಿತಿ ಅವಧಿ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗುತಿದ್ದಂತೆ ಅಂಗಡಿ ಬಳಿ ಬಂದ ಪಪಂ ಸಿಬ್ಬಂದಿ ಬಂದ್‌ ಮಾಡುವಂತೆ ಅಂಗಡಿಯವರಿಗೆ ಸೂಚಿಸಿದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿ ಡಿಎಪಿ ಪಡೆಯಲು ಇನ್ನು ಕೆಲ ಹೊತ್ತಿನವರೆಗೆ ಅಧಿಕಾರಿಗಳು ಸಮಯಾವಕಾಶ ನೀಡಿದ್ದಾರೆ ಎಂದು ಪಪಂ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದು ವಿರೋಧ ವ್ಯಕ್ತಪಡಿಸತೊಡಗಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ರೈತರನ್ನು ಸಮಾದಾನ ಪಡಿಸಿ ಅಂಗಡಿಯಲ್ಲಿ ದಾಸ್ತಾನು ಇರುವವರೆಗೂ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿ ರೈತರನ್ನು ಸಮಾದಾನ ಪಡಿಸಿದರು.

ಕೇಂದ್ರ ಸರ್ಕಾರ ಸಬ್ಸಿಡಿ ಕೊಡುವ ನಿಲುವನ್ನು ಪ್ರಕಟಿಸುತ್ತಿರುವಂತೆ ರೈತರು ಡಿಎಪಿ ಪಡೆಯಲು ಮುಗಿಬೀಳುತ್ತಿದ್ದಾರೆ. ಎಲ್ಲ ರೈತರಿಗೆ ಡಿಎಪಿ ಗೊಬ್ಬರ ಸಿಗುವಂತಾಗಲು ಕೃಷಿ ಇಲಾಖೆ ಅಂಗಡಿಗಳವರಿಗೆ ದಾಸ್ತಾನು ಸಂಪೂರ್ಣ ಮಾಡುವಂತೆ ಕಂಡಾಯವಾಗಿ ಸೂಚಿಸಿದ್ದೇವೆ. ರೈತರು ಗೊಬ್ಬರವನ್ನು ಪಡೆಯುವ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್‌ ಧರಿಸಿ ಖರೀದಿಗೆ ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ. ವಾಮದೇವ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona