Asianet Suvarna News Asianet Suvarna News

ಕೂಡ್ಲಿಗಿ: ಬಿತ್ತನೆ ಬೀಜ ಖರೀ​ದಿಗೆ ಲಾಕ್‌ಡೌನ್‌ ಅಡ್ಡಿ

* ಬಿತ್ತನೆ ಬೀಜ ಖರೀ​ದಿಗೆ ಸಮಯದ ಅಭಾ​ವ
* ನಾಲ್ಕು ಗಂಟೆ​ಯಲ್ಲಿ ಎಲ್ಲ ಖರೀದಿ ಅಸಾ​ಧ್ಯ
* ಜಿಲ್ಲಾ​ಡ​ಳಿತದಿಂದ ಐದು ದಿನ​ಗಳ ಕಾಲ ಕಠಿಣ ಲಾಕ್‌​ಡೌನ್‌ ಘೋಷಣೆ
 

Farmers Faces Problems due to Lockdown in Kudligi in Vijayanagara grg
Author
Bengaluru, First Published May 24, 2021, 10:17 AM IST

ಭೀಮಣ್ಣ ಗಜಾಪುರ

ಕೂಡ್ಲಿಗಿ(ಮೇ.24): ಮುಂಗಾರು ಬಿತ್ತ​ನೆಗೆ ರೈತರು ಭೂಮಿ​ ಹದ​ಗೊ​ಳಿಸಿ ಸಕಲ ಸಿದ್ಧತೆ ಮಾಡಿ​ಕೊಂಡಿ​ದ್ದಾರೆ. ಆದರೆ, ಬಿತ್ತನೆ ಬೀಜ ಖರೀ​ದಿ​ಸಲು ಸಮ​ಯದ ಅಭಾ​ವ​ದಿಂದ ಹಿನ್ನಡೆಯಾಗಿ​ದೆ.

ಜಿಲ್ಲೆ​ಯಲ್ಲಿ ಕೊರೋನಾ ಸೋಂಕಿನ ನಿಯಂತ್ರ​ಣಕ್ಕೆ ಜಿಲ್ಲಾ​ಡ​ಳಿತ ಐದು ದಿನ​ಗಳ ಕಾಲ ಕಠಿಣ ಲಾಕ್‌​ಡೌನ್‌ ಘೋಷಿಸಿದ್ದು ಯಾವ ಅಂಗ​ಡಿ​ಗಳು ತೆರೆ​ಯು​ವಂತಿಲ್ಲ. ತಾಲೂ​ಕಿ​ನಲ್ಲಿ ಮಳೆ​ಯಾ​ಗು​ತ್ತಿದ್ದು ಇನ್ನೊಂದು ಮಳೆ ಉತ್ತ​ಮ​ವಾಗಿ ಸುರಿ​ದರೆ ಹೈಬ್ರೀಡ್‌ ತೊಗರಿ ಬಿತ್ತ​ನೆಗೆ ಕಾಯ್ದಿ​ರುವ ರೈತ​ರಿಗೆ ಬೀಜ​ಗಳೇ ಸಿಗು​ತ್ತಿಲ್ಲ. ಹೀಗಾಗಿ ಎಲ್ಲಿ ಮುಂಗಾರು ಬಿತ್ತ​ನೆಗೆ ಹಿನ್ನ​ಡೆ​ಯಾ​ಗು​ತ್ತದೆ ಎಂಬ ಭಯ ರೈತ​ರಲ್ಲಿ ಮೂಡಿ​ದೆ.

ನಾಲ್ಕು ಗಂಟೆ ಮಾತ್ರ ಅವ​ಕಾ​ಶ:

ಸೋಮ​ವಾ​ರ​ದಿಂದ ಕೃಷಿಗೆ ಸಂಬಂಧಿ​ಸಿದ ಅಂಗ​ಡಿ​ಗಳು ಬೆಳಗ್ಗೆ 6ರಿಂದ 10ರ ವ​ರೆಗೆ ಮಾತ್ರ ಓಪನ್‌ ಆಗ​ಲಿವೆ. ಈ ಅವ​ಧಿ​ಯಲ್ಲಿ ಬಿತ್ತನೆ ಬೀಜ, ರಸ​ಗೊ​ಬ್ಬರ, ಸಲ​ಕ​ರ​ಣೆ​ಗ​ಳನ್ನು ಖರೀ​ದಿ​ಸಲು ಅಸಾಧ್ಯ. ಒಂದು ವೇಳೆ ಮುಗಿ​ಬಿ​ದ್ದರೂ ಅಂಗ​ಡಿ​ಗಳು ಕೊರೋನಾ ಹಾಟ್‌​ಸ್ಪಾಟ್‌ ಆಗುವ ಆತಂಕ ಎದು​ರಾ​ಗಿದೆ. ಕಡಿಮೆ ಅವಧಿ ಇರು​ವು​ದ​ರಿಂದ ಒಮ್ಮೇಲೆ ರೈತರು ಆಗ​ಮಿ​ಸು​ವು​ದ​ರಿಂದ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳಲು ಆಗು​ವು​ದಿ​ಲ್ಲ. ಇದ​ರಿಂದ ಮತ್ತಷ್ಟು ಸೋಂಕು ಉಲ್ಬ​ಣ​ವಾ​ಗುವ ಸಾಧ್ಯ ಇದೆ. ಹೀಗಾಗಿ ಈ ಅವ​ಧಿ​ಯನ್ನು ಹೆಚ್ಚಿಸಿ ಅನು​ಕೂಲ ಮಾಡಿ​ಕೊ​ಡ​ಬೇ​ಕೆಂದು ರೈತರು ಅಧಿ​ಕಾ​ರಿ​ಗ​ಳಿಗೆ ಮನವಿ ಮಾಡಿ​ದ್ದಾ​ರೆ.

ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ 24,140 ಜನರಿಗೆ ಸೋಂಕಿನ ಲಕ್ಷಣ!

ಸೋಂಕಿನ ಭಯ​ದಿಂದ ವಿಳಂಬ:

ರೈತರು ಪ್ರತಿ ವರ್ಷ ಹೊಲ ಹದಗೊಳಿ​ಸಲು ಆರಂಭಿ​ಸು​ತ್ತಿ​ದ್ದಂತೆ ಬಿತ್ತನೆ ಬೀಜ, ರಸ​ಗೊ​ಬ್ಬರ ಖರೀ​ದಿಗೆ ಮುಂದಾ​ಗು​ತ್ತಿ​ದ್ದರು. ಆದರೆ, ರಾಜ್ಯ​ದಲ್ಲಿ ಕೊರೋನಾ ಅಬ್ಬ​ರಿ​ಸಿ​ದ್ದ​ರಿಂದ ಸರ್ಕಾರ ಸೆಮಿ ಲಾಕ್‌​ಡೌನ್‌, ಲಾಕ್‌​ಡೌ​ನ್‌ ಘೋಷಿ​ಸಿ​ದ್ದ​ರಿಂದ ರೈತರು ನಗ​ರ​ಗ​ಳಿಗೆ ಹೋಗಲೇ ಇಲ್ಲ. ಜತೆಗೆ ಸೋಂಕಿನ ಭಯ​ದಿಂದ ಊರು ಬಿಟ್ಟು ಹೊರ​ಬ​ರ​ಲಿಲ್ಲ. ಹೀಗಾಗಿ ಬಿತ್ತ​ನೆಗೆ ಬೇಕಾ​ಗುವ ವಸ್ತು​ಗಳ ಖರೀ​ದಿ​ಸಲು ವಿಳಂಬ​ವಾ​ಯಿತು ಎನ್ನು​ತ್ತಾರೆ ರೈತ​ರು.

ಫಸಲು ಸಿಗು​ವು​ದಿ​ಲ್ಲ:

ಹೈಬ್ರೀಡ್‌ ಜೋಳ​ವನ್ನು ಕೃತಿಕಾ ಮಳೆಯ ಕಡೆ ಹಾಗೂ ರೋಹಿಣಿ ಮಳೆಯ ಮೊದಲ ಪಾದ​ದಲ್ಲಿಯೇ ಬಿತ್ತನೆ ಮಾಡ​ಲಾ​ಗು​ತ್ತಿ​ದೆ. ಇದೀಗ ಕೃತಿಕಾ ಮಳೆಯ ಕಡೆಯ ಪಾದ ಬಂದಿದ್ದು ಇಂದು ಅಥವಾ ನಾಳೆ ಮಳೆ ಸುರಿ​ದರೇ ರೈತರು ಬಿತ್ತನೆಗೆ ಮುಂದಾ​ಗು​ತ್ತಾರೆ. ಆದರೆ, ಅವ​ರಿಗೆ ಬಿತ್ತನೆ ಬೀಜ​ಗಳೇ ದೊರ​ಕಿಲ್ಲ. ವಿಳಂಬ​ವಾ​ದರೆ ತೆನೆ ಕಾಳು ಕಟ್ಟು​ವು​ದಿಲ್ಲ ಎಂಬ ಆತಂಕ​ದೊಂದಿಗೆ ಕೀಟ ಭಾದೆ ಕಾಡು​ತ್ತದೆ ಎಂಬ ಅಳಲು ರೈತ​ರ​ದ್ದು.

ಕೃತಿಕಾ ಮಳೆ​ಯಲ್ಲಿ ಹೈಬ್ರೀಡ್‌ ಜೋಳ ಬಿತ್ತನೆ ಮಾಡದಿದ್ದರೆ ವರ್ಷಪೂರ್ತಿ ಉಪವಾಸ ಇರಬೇಕಾಗುತ್ತದೆ. ಲಾಕ್‌ಡೌನ್‌ನಿಂದ ನಮಗೆ ಬಿತ್ತನೆ ಬೀಜ, ಗೊಬ್ಬರ, ಇತರೆ ಸಲಕರಣೆ ಖರೀ​ದಿ​ಸಲು ಆಗಿಲ್ಲ. ಸರ್ಕಾರ ರೈತರ ಬಿತ್ತನೆಗೆ ಬೇಕಾದ ಎಲ್ಲ ಸಲಕರಣೆಗಳ ಮಾರಾ​ಟಕ್ಕೆ ಅವ​ಕಾಶ ನೀಡ​ಬೇ​ಕು ಎಂದು ಕೂಡ್ಲಿಗಿ ತಾಲೂಕು ಕಕ್ಕುಪ್ಪಿಯ ರೈತ ಮಾರಣ್ಣ ತಿಳಿಸಿದ್ದಾರೆ. 

ಲಾಕ್‌​ಡೌನ್‌ ನಿಯಮ ಪಾಲಿಸಿ ರೈತ ಸಂಪರ್ಕ ಕೇಂದ್ರ ಸೇರಿದಂತೆ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬ​ಹುದು. ಇನ್ನೆರಡು ದಿನಗಳಲ್ಲಿ ಡಿಎಪಿ ಹಳೇ ದರದಲ್ಲಿಯೇ ಮಾರಾಟ ಮಾಡುವ ಆದೇಶ ಬರ​ಲಿದ್ದು 1900 ಬದಲಿಗೆ 1200ಗೆ ರಸಗೊಬ್ಬರ ಮಾರಾಟ ಮಾಡಲಾಗುವುದು ಎಂದು ಕೂಡ್ಲಿಗಿ ತಾಲೂಕು ಕೃಷಿ ಅಧಿಕಾರಿ ಕೆ. ವಾಮದೇವ ಹೇಳಿದ್ದಾರೆ.

ಬಿತ್ತನೆ ಬೀಜ ಖರೀ​ದಿ​ಸಲು ಹೆಚ್ಚಿನ ಸಂಖ್ಯೆ​ಯಲ್ಲಿ ಖರೀ​ದಿ​ಸಲು ಬರು​ವು​ದ​ರಿಂದ ಕೊರೋನಾ ಸೋಂಕು ಉಲ್ಬ​ಣ​ವಾ​ಗುವ ಸಾಧ್ಯತೆ ಇದೆ. ಹೀಗಾಗಿ ಸಹಾ​ಯಕ ಆಯು​ಕ್ತರು ಹಾಗೂ ಜಿಲ್ಲಾ​ಧಿ​ಕಾ​ರಿ​ಗಳ ಗಮ​ನಕ್ಕೆ ತಂದು ಕೃಷಿಗೆ ಸಂಬಂಧಿ​ಸಿ​ದಂತೆ ಅಂಗ​ಡಿ​ಗಳ ಅವ​ಧಿ​ಯನ್ನು ಹೆಚ್ಚಿಸಿ ರೈತ​ರಿಗೆ ಅನು​ಕೂಲ ಮಾಡಿ​ಕೊಡುವಂತೆ ಕೇಳ​ಲಾ​ಗು​ವುದು. ಕೃಷಿ ಸಂಬಂಧಿತ ಸಲ​ಕ​ರಣೆಗಳ ಖರೀ​ದಿಗೂ ಅವ​ಕಾಶ ಮಾಡಿ​ಕೊ​ಡ​ಲಾ​ಗು​ವು​ದು ಎಂದು ತಹ​ಸೀ​ಲ್ದಾ​ರ್‌ ಜಿ. ಅನಿಲಕುಮಾರ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios