ರೈತರು ಕೊಳ್ಳುವ ಬಿತ್ತನೆಬೀಜ, ಗೊಬ್ಬರ, ಕೂಲಿ ಹಾಗೂ ಸಾಗಾಣಿಕೆ ವೆಚ್ಚ 3 ಪಟ್ಟು ಹೆಚ್ಚಾಗಿದೆ. ಆದರೂ ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ಮೋಸದ ಬೆಲೆ ನಿಗದಿ ಮಾಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಆರೋಪಿಸಿದರು.

ಶಿವಮೊಗ್ಗ (ಡಿ.13) : ರೈತರು ಕೊಳ್ಳುವ ಬಿತ್ತನೆಬೀಜ, ಗೊಬ್ಬರ, ಕೂಲಿ ಹಾಗೂ ಸಾಗಾಣಿಕೆ ವೆಚ್ಚ 3 ಪಟ್ಟು ಹೆಚ್ಚಾಗಿದೆ. ಆದರೂ ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ಮೋಸದ ಬೆಲೆ ನಿಗದಿ ಮಾಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಆರೋಪಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಕಬ್ಬಿಗೆ ಈಗಲೂ 5 ವರ್ಷದ ಹಿಂದಿನ ಬೆಲೆಯನ್ನೇ ನಿಗದಿ ಮಾಡಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಇನ್ನೂ ಉಳಿದಿದೆ. ರೈತರು ಚಳುವಳಿ ಮಾಡಿದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ದೂರಿದರು.

ಟನ್‌ಗೆ 50 ಹೆಚ್ಚಳ ಆದೇಶ ಸುಟ್ಟು ಕಬ್ಬು ರೈತರ ಭಾರೀ ಪ್ರತಿಭಟನೆ

ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಬ್ಯಾಂಕ್‌ಗಳು ರೈತ ಆಸ್ತಿ ಜಪ್ತಿ, ಹರಾಜು, ಆನ್‌ಲೈನ್‌ ಹರಾಜು ಮಾಡುತ್ತಿರುವುದರ ವಿರುದ್ಧ ಸಿಎಂ ಕಾನೂನು ಮಾಡುತ್ತೇವೆ ಎಂದು ಹೇಳಿದ್ದರೂ, ಈ ಕಾನೂನು ಕೂಡಲೇ ಜಾರಿಗೆ ತರಬೇಕು. ಸರ್ಕಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕ್ವಿಂಟಲ್‌ ಭತ್ತಕ್ಕೆ .500 ಪ್ರೋತ್ಸಾಹಧನ ನೀಡುತ್ತಿರುವಂತೆ ಎಲ್ಲ ಜಿಲ್ಲೆಯ ರೈತರಿಗೂ ಕೊಡಬೇಕು. ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣ ಮಸೂದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದರ ಜೊತೆಗೆ ಭತ್ತ, ರಾಗಿ, ಮೆಕ್ಕೆಜೋಳ,ತೊಗರಿ, ಕಡಲೆ, ಉದ್ದು, ಹೆಸರು, ಹತ್ತಿ, ಸೂರ್ಯಕಾಂತಿ, ಶೇಂಗಾ ಮುಂತಾದ ಬೆಳೆಗಳ ಬೆಲೆಯೂ ಕುಸಿದಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಭತ್ತಕ್ಕೆ ಕೆಲವು ಜಿಲ್ಲೆಗಳಲ್ಲಿ ಮಾತ್ರ 500 ರು., ಪೋ›ತ್ಸಾಹ ಧನವಿದೆ. ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಮತ್ತು ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕು. ಎಸ್‌ಸಿ, ಎಸ್‌ಟಿಗೆ ಮಾತ್ರವಲ್ಲದೆ ಎಲ್ಲಾ ಬಿಪಿಎಲ್‌ ಕಾರ್ಡುದಾರರಿಗೂ ಉಚಿತ ವಿದ್ಯುತ್‌ ನೀಡಬೇಕು ಎಂದು ಆಗ್ರಹಿಸಿದರು.

ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಭೂತಾನ್‌ನಿಂದ ಅಡಕೆ ಆಮದನ್ನು ನಿಲ್ಲಿಸಬೇಕು. ಕಳ್ಳ ಸಾಗಾಣಿಕೆ ತಡೆಗಟ್ಟಬೇಕು. ಎಲೆ ಚುಕ್ಕಿ, ಹಳದಿ ಎಲೆ, ಮುಂತಾದ ರೋಗಗಳಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಗಿದ್ದು, ಕೂಡಲೆ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ರೈತವಿರೋಧಿ ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.

ತೆಲಂಗಾಣ, ಪಂಜಾಬ್‌ ಮತ್ತು ದೆಹಲಿಯ ಸರ್ಕಾರಗಳು ರೈತರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ರಾಜ್ಯಸರ್ಕಾರ ಕೂಡ ಅದೇ ರೀತಿಯ ಸೌಲಭ್ಯಗಳನ್ನು ರೈತರಿಗೆ ನೀಡಬೇಕು. ನೆರೆ ಸಂತ್ರಸ್ತರಿಗೆ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಎಸ್‌. ಶಿವಮೂರ್ತಿ, ಇ.ಬಿ.ಜಗದೀಶ್‌, ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಕೆ.ರಾಘವೇಂದ್ರ, ಕಸೆಟ್ಟಿರುದ್ರೇಶ, ಜಿ.ಎನ್‌. ಪಂಚಾಕ್ಷರಿ, ಜ್ಞಾನೇಶ್‌, ಸಿ. ಚಂದ್ರಪ್ಪ ಇದ್ದರು.

20ರಂದು ಬೆಂಗಳೂರಿನಲ್ಲಿ ಸಮಾವೇಶ

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಡಿ.20ರಂದು ಬೆಳಗ್ಗೆ 10 ರಂದು ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಸುಮಾರು 5 ಸಾವಿರ ರೈತರು ಸೇರುವ ನಿರೀಕ್ಷೆ ಇದೆ. ಜಿಲ್ಲೆಯಿಂದಲೂ 500ಕ್ಕೂ ಹೆಚ್ಚು ಮಂದಿ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಸವರಾಜಪ್ಪ ಅವರು ತಿಳಿಸಿದರು.

Vijayapura : ಕಬ್ಬಿಗೆ ಎಫ್‌ಆರ್‌ಪಿ ದರ ಘೋಷಣೆಗೆ ಆಗ್ರಹ

22ರಂದು ಸಭೆ, ರಕ್ತದಾನ ಶಿಬಿರ

ರೈತ ಸಂಘದಿಂದ ಡಿ.22ರಂದು ಬೆಳಿಗ್ಗೆ 10ಕ್ಕೆ ರೋಟರಿ ರಕ್ತನಿಧಿಯಲ್ಲಿ ರೈತರ ಕಣ್ಮಣಿ ಎನ್‌.ಡಿ. ಸುಂದರೇಶ್‌ ಅವರ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಎನ್‌.ಡಿ.ಸುಂದರೇಶ್‌ ಅವರು ರೈತಸಂಘದ ಸಂಸ್ಥಾಪಕರಾಗಿದ್ದರು. ರೈತರಿಗೆ ನ್ಯಾಯ ಒದಗಿಸಲು ದುಡಿದವರು. ಇವರ 30ನೇ ನೆನಪಿನ ಸಭೆಯ ಅಂಗವಾಗಿ ಮತ್ತು ರಾಜ್ಯಸರ್ಕಾರ ತಂದಿರುವ ರೈತವಿರೋಧಿ ಕಾಯಿದೆಗಳನ್ನು ವಾಪಾಸು ಪಡೆಯಲು ಆಗ್ರಹಿಸಿ ಈ ಸಭೆ ಆಯೋಜಿಸಲಾಗಿದೆ. ಇದರ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಎಚ್‌.ಆರ್‌.ಬಸವರಾಜಪ್ಪ ತಿಳಿಸಿದರು.