ಕಬ್ಬಿನ ಎಫ್‌ಆರ್‌ಪಿ ದರವನ್ನು ಘೋಷಣೆ ಮಾಡಬೇಕು, ಅತೀವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

 ಮುದ್ದೇಬಿಹಾಳ(ಅ.15): ಕಬ್ಬಿನ ಎಫ್‌ಆರ್‌ಪಿ ದರವನ್ನು ಘೋಷಣೆ ಮಾಡಬೇಕು, ಅತೀವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

Add Asianetnews Kannada as a Preferred SourcegooglePreferred

ಈ ಸಂದರ್ಭದಲ್ಲಿ ರೈತ (Farmers) ಮುಖಂಡ ವೈ.ಎಲ್‌.ಬಿರಾದಾರ, ಹುಸೇನ್‌ ಮುಲ್ಲಾ, ಸಂಗಣ್ಣ ಬಾಗೇವಾಡಿ (Bagevadi) ಮಾತನಾಡಿ, ಈಗಾಗಲೇ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಅಲ್ಲಿನ ಜಿಲ್ಲಾಧಿಕಾರಿ ಅವರು ಸನ್‌ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ಎಫ್‌ಆರ್‌ಪಿ ದರವನ್ನು ನಿಗದಿಗೊಳಿಸಿ ಆದೇಶಿಸಿದ್ದಾರೆ. ಆದರೆ, ವಿಜಯಪುರ-ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಸಾಲಿನ ದರವನ್ನು ನಿಗದಿಗೊಳಿಸಲು ವಿಳಂಬ ಮಾಡಲಾಗುತ್ತಿದೆ. ಕೇಳಿದರೆ ಕಳೆದ 2021-22ನೇ ಸಾಲಿನ ದರವನ್ನೇ ರೈತರಿಗೆ ತೋರಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ದೂರಿದರು.

ಬಾಲಾಜಿ ಶುಗ​ರ್‍ಸ್ ಮತ್ತು ಪ್ಯಾರಿ ಶುಗ​ರ್‍ಸ್ನಿಂದ ಕಬ್ಬು ಕಟಾವು ಸಮಯಕ್ಕೆ ಸರಿಯಾಗಿ ಮಾಡುವಂತೆ ಸೂಚಿಸಬೇಕು. ಮೊದಲು ಸ್ಥಳೀಯ ರೈತರ ಕಬ್ಬು ಕಟಾವಿಗೆ ಆದ್ಯತೆ ನೀಡಬೇಕು. ಕಬ್ಬು ಕಟಾವು ಆದ ನಂತರ ರೈತರಿಗೆ 15 ದಿನಗಳಲ್ಲಿ ಖಾತೆಗೆ ಹಣ ಜಮಾ ಮಾಡಬೇಕು. ರೈತರಿಗೆ ಶುಗ​ರ್‍ಸ್ ಫ್ಯಾಕ್ಟರಿಯಿಂದ ಬೀಜ ಗೊಬ್ಬರ ಕೊಡಲಾಗುತ್ತಿದ್ದು, ಅದಕ್ಕೆ ವಿಧಿಸುತ್ತಿರುವ ಬಡ್ಡಿಯನ್ನು ರದ್ದುಗೊಳಿಸಬೇಕು. ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕೊಡಬೇಕು. ಅತೀವೃಷ್ಟಿಯಿಂದ ಹಾಗೂ ಕೋರಿ ಹುಳುವಿನ ಬಾಧೆಯಿಂದ ತೊಂದರೆಗೀಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಉತ್ತರಿಸಿ, ನಿಮ್ಮ ಈ ಹಿಂದೆ ಕೊಟ್ಟಿರುವ ಮನವಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅಲ್ಲದೇ ನಿಮಗೆ ಕಾರ್ಖಾನೆಗಳು ಕೊಡುವ ಕಬ್ಬಿನ ದರದ ಕುರಿತು ಮಾಹಿತಿ ರೈತ ಮುಖಂಡರಿಗೆ ನೀಡಿದ್ದೇವೆ ಎಂದು ತಿಳಿಸಿದರು. ಆದರೆ, ಇದಕ್ಕೆ ಒಪ್ಪದ ರೈತರು, ಪ್ರಸಕ್ತ ಸಾಲಿನ ದರದ ಕುರಿತು ಮಾಹಿತಿ ನೀಡಿ, ರೈತರು, ಕಾರ್ಖಾನೆ ಮುಖ್ಯಸ್ಥರ ಸಭೆ ಕರೆಯಿರಿ ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಈರಣಗೌಡ ಬಿರಾದಾರ, ಗುರುಸಂಗಪ್ಪ ಹಂಡರಗಲ್‌, ಇಬ್ರಾಹಿಮ್‌ ನಾಯ್ಕೋಡಿ, ಶಿವಣ್ಣ ನಾಯ್ಕೋಡಿ, ನಾಗಪ್ಪ ಜಟ್ಟಗಿ, ಶರಣಬಸಪ್ಪ ವಾಲೀಕಾರ, ಭೀಮಣ್ಣ ಬಾಗೇವಾಡಿ, ಬಸನಗೌಡ ಬ್ಯಾಲ್ಯಾಳ, ವೀರೇಶ ಗಣಾಚಾರಿ, ಮುತ್ತಣ್ಣ ಗಂಗೂರ, ಯಲ್ಲಪ್ಪ ಮೇಟಿ, ಆರ್‌.ಎಂ.ಗೊಳಸಂಗಿ, ಲಕ್ಷ್ಮಣ ತೊಂಡಿಕಟ್ಟಿಮೊದಲಾದವರು ಇದ್ದರು.

ಬಾಕ್ಸ್‌..

ರೈತರೊಂದಿಗೆ ತಹಸೀಲ್ದಾರ್‌ ವಾಗ್ವಾದ

ಕಳೆದ ಸೆ.26 ರಂದು ಈ ಬಗ್ಗೆ ಕ್ರಮ ಜರುಗಿಸುವಂತೆ ರೈತರ ಸಭೆ ನಡೆಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈಗ ಕಬ್ಬು ಕಟಾವು ಮಾಡುವ ಕಾರ್ಯ ಶುರುವಾಗುತ್ತಿದ್ದು, ರೈತರ ಬೇಡಿಕೆಗಳ ಬಗ್ಗೆ ತಹಸೀಲ್ದಾರ್‌ರು ಸಮರ್ಪಕ ಸ್ಪಂದನೆ ನೀಡುತ್ತಿಲ್ಲ ಎಂದು ರೈತ ಸಂಘದ ಪದಾಧಿಕಾರಿಗಳು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡರು. ಈ ವೇಳೆ ಬೇರೆ ಕೆಲಸಕ್ಕೆ ನಿರ್ಗಮಿಸುತ್ತಿದ್ದ ತಹಸೀಲ್ದಾರ್‌ ಕಡಕಭಾವಿ ರೈತ ಸಂಘದ ಪದಾಧಿಕಾರಿಗಳನ್ನು ತಮ್ಮ ಚೇಂಬರ್‌ಗೆ ಕರೆಯಿಸಿಕೊಂಡು ಚರ್ಚೆ ಶುರು ಮಾಡಿದರು. ಈ ವೇಳೆ ರೈತ ಸಂಘದ ಪದಾಧಿಕಾರಿಗಳಿಗೆ ತಹಸೀಲ್ದಾರ್‌ರು ಬುದ್ದಿವಾದ ಹೇಳಲು ಮುಂದಾದರು. ಆದರೆ, ಇದಕ್ಕೆ ಸೊಪ್ಪು ಹಾಕದ ರೈತ ಸಂಘದ ಪದಾಧಿಕಾರಿಗಳು, ಮೊದಲೇ ರೈತರು ತೊಂದರೆಯಲ್ಲಿದ್ದಾರೆ. ಕಬ್ಬಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ದರವನ್ನು ಘೋಷಣೆ ಮಾಡದೇ ಸುಮ್ಮನಿರುವುದೇತಕ್ಕೆ, ಅತೀವೃಷ್ಟಿಯಿಂದ ಹಾಳಾದ ಎಷ್ಟುರೈತರಿಗೆ ಪರಿಹಾರ ಕೊಡಲಾಗಿದೆ. ಸರ್ವೆ ಮಾಡಿ ಪರಿಹಾರ ದೊರಕಿಸಿಕೊಟ್ಟೀದ್ದೀರಾ ಎಂದು ಪ್ರಶ್ನಿಸಿದರು. ಬಳಿಕ ಈ ಬಗ್ಗೆ ಬೇಡಿಕೆಯಲ್ಲಿನ ಅಂಶಗಳನ್ನು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್‌ ತಿಳಿಸಿದರು. ಒಂದು ಹಂತದಲ್ಲಿ ರೈತರ ಜೊತೆಗೆ ತಹಸೀಲ್ದಾರ್‌ರೇ ಸಹನೆ ಕಳೆದುಕೊಂಡಂತೆ ವರ್ತಿಸಿದ್ದೂ ಕಂಡು ಬಂದಿತು.

ರೈತ ಸಂಘಟನೆಯ ಮುಖಂಡರಾದ ವೈ.ಎಲ್‌.ಬಿರಾದಾರ, ಸಂಗಣ್ಣ ಬಾಗೇವಾಡಿ, ಹುಸೇನ್‌ ಮುಲ್ಲಾ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಹೋದರೆ ತಹಸೀಲ್ದಾರ್‌ರು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಸಹಾನುಭೂತಿಯಿಂದ ತಹಸೀಲ್ದಾರ್‌ರು ನಡೆದುಕೊಳ್ಳದಿರುವುದು ಖಂಡನೀಯ ಎಂದರು.

ಎಂ.ಬಿ.ಎಲ್‌-10-1

ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್‌ ಕಚೇರಿಗೆ ಆಗಮಿಸಿದ್ದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಎಂ.ಬಿ.ಎಲ್‌-10-1ಎ

ಮುದ್ದೇಬಿಹಾಳ ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ ಅವರು ಸೋಮವಾರ ರೈತ ಸಂಘಟನೆ ಪದಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.