ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು, ಬೆಂಗಳೂರಿನ ಉತ್ತರಹಳ್ಳಿ ಮತ್ತು ಹೆಮ್ಮಿಗೆಪುರ ವಾರ್ಡ್ಗಳಲ್ಲಿ ನಕಲಿ ಇ-ಪಿಐಡಿ ಮತ್ತು ಇ-ಖಾತಾ ಸೃಷ್ಟಿಸಿರುವ ಹಗರಣವನ್ನು ಬಯಲಿಗೆಳೆದಿದ್ದಾರೆ.
ಬೆಂಗಳೂರು: ಸ್ವತ್ತುಗಳಿಗೆ ನಕಲಿ ಇ-ಪಿಐಡಿ ಸೃಷ್ಟಿ, ನಕಲಿ ಇ-ಖಾತಾ, ಖಾತಾ ಮಾಡಿಕೊಟ್ಟಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ದಕ್ಷಿಣ ನಗರ ಪಾಲಿಕೆ ಮತ್ತು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಜಿಬಿಎ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಉಪ ವಿಭಾಗದಲ್ಲಿ ಕಾನೂನು ಬಾಹಿರವಾಗಿ 148 ಖಾತೆಗಳನ್ನು ಮಾಡಿರುವ ಹಗರಣ ಸಂಬಂಧ ‘ಬಿ’ ವಹಿ ಮಾಡಬೇಕಿದ್ದ 550 ಸ್ವತ್ತುಗಳಿಗೆ ಕಡತ ಇಲ್ಲದೆ 550 ‘ಎ’ಖಾತಾ ಮಾಡಿ ಬಿಬಿಎಂಪಿಗೆ ಹತ್ತಾರು ಕೋಟಿ ರು. ನಷ್ಟ ಹಾಗೂ ಭ್ರಷ್ಟಾಚಾರದ ಆರೋಪದಡಿ ಅಂದಿನ ಉತ್ತರಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ವಿರುದ್ಧ ನಾನು ನೀಡಿದ್ದ ದೂರಿನ ಅನ್ವಯ ಕಾನೂನು ಕ್ರಮ ಕೈಗೊಂಡು ಈಗಾಗಲೇ ಅಮಾನತು ಮಾಡಲಾಗಿದೆ.
ಆಗಿನ ಉಪ ಆಯುಕ್ತ ಡಿ.ಕೆ.ಬಾಬು ಅವರು ಕಾನೂನು ಬಾಹಿರವಾಗಿ 550 ‘ಎ’ ಖಾತಾಗಳನ್ನು ಮಾಡಿದ್ದ ಖಾತಾ ಪುಸ್ತಕದ ಸಂಖ್ಯೆ ಎ-80 ಪುಸ್ತಕವನ್ನು ಜಪ್ತಿ ಮಾಡಿಸಿ, ಆನ್ಲೈನ್ನಲ್ಲಿಯೂ ಸಹ ಎ-80 ಪುಸ್ತಕದಲ್ಲಿರುವ ಸದರಿ ಖಾತೆಗಳನ್ನು ಡೀಲಿಟ್ ಮಾಡಿಸಿದ್ದಾರೆ. ಈ ಬೃಹತ್ ಹಗರಣ ಸಂಬಂಧ ಲೋಕಾಯುಕ್ತ ತನಿಖೆ ಮತ್ತು ಇಲಾಖಾ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಹಾಲಿ ಉತ್ತರಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಶಿವಮ್ಮ ಮತ್ತು ಕಂದಾಯ ವಸೂಲಿಗಾರ ರಾಕೇಶ್ ಅವರು ಕಾನೂನಿನ ನಿಯಮ ಗಾಳಿಗೆ ತೂರಿಸಿ ಎ-80 ಖಾತಾ ಪುಸ್ತಕವನ್ನು ಸೀಜ್ ಮಾಡಿಸಿರುವುದಲ್ಲೇ, ಆ ಪುಸ್ತಕದಲ್ಲಿ ನಮೂದಾಗಿದ್ದ 5 ಬೃಹತ್ ವಸತಿ ಸಂಕೀರ್ಣಗಳ ಪೈಕಿ ಶ್ರೀವಾರಿ ಇನ್ಫ್ರಾಸ್ಟ್ರಕ್ಚರ್ಸ್ ಹೆಸರಿನ ಒಂದು ವಸತಿ ಸಂಕೀರ್ಣಕ್ಕೆ ಬಿಲ್ಡರ್ ಹೆಸರಿನಲ್ಲಿ 148 ಖಾತೆ ಮಾಡಿಕೊಟ್ಟಿದ್ದಾರೆ. ಬಳಿಕ 148 ಮನೆಗಳ ಮಾಲೀಕರ ಹೆಸರಿಗೆ ಖಾತೆಗಳ ವರ್ಗಾವಣೆ ಮಾಡಿದ್ದಾರೆ. ಇದು ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದೆ.
ಈ ಸಂಬಂಧ ಸಹಾಯಕ ಕಂದಾಯ ಅಧಿಕಾರಿ ಶಿವಮ್ಮ ಮತ್ತು ಕಂದಾಯ ವಸೂಲಿಗಾರ ರಾಕೇಶ್ ವಿರುದ್ಧ ಕಾನೂನು ರೀತಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎನ್.ಆರ್.ರಮೇಶ್, ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ಸಹ ದಾಖಲಿಸುವುದಾಗಿ ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
9 ಸ್ವತ್ತುಗಳಿಗೆ ನಕಲಿ ಇ-ಖಾತಾ:
ಜಿಬಿಎ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ 9 ಸ್ವತ್ತುಗಳಿಗೆ ಲಕ್ಷಾಂತರ ರು. ಕಿಕ್ಬ್ಯಾಕ್ ಪಡೆದು ನಕಲಿ ಇ-ಪಿಐಡಿ ಸಂಖ್ಯೆಗಳನ್ನು ಸೃಷ್ಟಿಸಿ, ಇ-ಖಾತಾ ಮಾಡಿಕೊಡಲಾಗಿದೆ ಎಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ವಾಸ್ತವದಲ್ಲಿ ಇ-ಖಾತಾ ವೆಬ್ಸೈಟ್ನಲ್ಲಿ ಒಂದು ಸ್ವತ್ತಿನ ಇ-ಪಿಐಡಿ ಸಂಖ್ಯೆ ನಮೂದಿಸಿದಾಗ ಖಾತೆದಾರನ ಹೆಸರು ಮತ್ತು ಖಾತಾ ಪುಸ್ತಕದಲ್ಲಿ ಸದರಿ ಖಾತೆದಾರರ ಹೆಸರು ನಮೂದಾಗಿರುವ ಪುಟವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿದ ಪ್ರತಿ ಕಾಣಿಸಬೇಕು.
ಆದರೆ, ಹೊಸಹಳ್ಳಿ ಗ್ರಾಮದ ಸ್ವತ್ತಿನ ಸಂಖ್ಯೆ 9ರ ಖಾತೆಯ ಇ-ಪಿಐಡಿ ಸಂಖ್ಯೆಯನ್ನು ಇ-ಖಾತಾ ವೆಬ್ಸೈಟ್ನಲ್ಲಿ ನಮೂದಿಸಿದರೆ ಖಾತೆದಾರರ ಹೆಸರು ಮಧು ಎಂದು ಕಾಣುತ್ತಿದೆ. ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿದ ಖಾತೆ ಪುಸ್ತಕದ ಪ್ರತಿಯಲ್ಲಿ ಖಾತೆದಾರರ ಹೆಸರು ಖಾಲಿ ಇದೆ. ಈ ರೀತಿ 0 ಸ್ವತ್ತುಗಳಿದ್ದು, ಈಗಾಗಲೇ 4 ಸ್ವತ್ತುಗಳಿಗೆ ಇ-ಖಾತಾ ವಿತರಿಸಲಾಗಿದೆ. ಉಳಿದ 4 ಸ್ವತ್ತುಗಳಿಗೆ ಡ್ರಾಫ್ಟ್ ಇ-ಖಾತಾ ಸಿದ್ಧಪಡಿಸಲಾಗಿದೆ. ಖಾತಾ ಪುಸ್ತಕದಲ್ಲಿ ಖಾಲಿ ಇರುವ ಸ್ವತ್ತುಗಳಿಗೆ ಕಡತ ಇಲ್ಲದಿದ್ದರೂ ಅನಾಮಿಕ ಮಧು ಎಂಬಾತನ ಹೆಸರಿಗೆ ಕೇಸ್ ವರ್ಕರ್ ಲಾಗಿನ್ ನಲ್ಲಿ ಹೊಸ ಖಾತೆಗಳನ್ನು ಎಂಟ್ರಿ ಮಾಡಿ ಎಆರ್ಓ ಲಾಗಿನ್ನಲ್ಲಿ ಅನುಮೋದಿಸಲಾಗಿದೆ ಎಂದು ಆರೋಪಿಸಲಾಗಿದೆ.


