ಉಚ್ಛಾಟಿತ 14 ಮುಖಂಡರ ಮೇಲೆ ಅಮಾನತು ತೂಗುಗತ್ತಿ!
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತರಾದ 14 ಕಾಂಗ್ರೆಸ್ ಸದಸ್ಯರನ್ನು ಹುದ್ದೆಯಿಂದಲೂ ಶೀಘ್ರ ಅಮಾನತುಗೊಳಿಸುವ ಸಾಧ್ಯತೆ ಇದೆ.
ಬೆಂಗಳೂರು [ಡಿ.31]: ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತಗೊಂಡಿರುವ 14 ಸದಸ್ಯರನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕರು ನೀಡಿರುವ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಆಯುಕ್ತ (ಪ್ರಭಾರಿ) ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರು ಕಾಂಗ್ರೆಸ್ ಪಕ್ಷದ 14 ಸದಸ್ಯರನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಪ್ರತಿ ಸೋಮವಾರ ಕೈ ಸೇರಿದೆ. ಸ್ಥಳೀಯ ಸಂಸ್ಥೆಗಳ ನಿಯಮ ಪ್ರಕಾರ ನಿಯಮ 3(1)(ಎ) ಮತ್ತು (ಬಿ) ಅನ್ವಯ ಅನರ್ಹಗೊಳಿಸಲು ಅವಕಾಶವಿದೆ. ಪಕ್ಷದ ವಿಪ್ ಉಲ್ಲಂಘನೆ, ಪಕ್ಷದ ಸೂಚನೆಗೆ ವ್ಯತರಿಕ್ತವಾಗಿ ನಡೆದುಕೊಂಡಿರುವ ಬಗ್ಗೆ ದೂರಿನೊಂದಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ದಾಖಲೆ ಸಲ್ಲಿಕೆಗೆ ಸೂಚನೆ ನೀಡುತ್ತೇವೆ. ಅಲ್ಲದೇ, ಪಕ್ಷ ವಿರೋಧಿ ಚಟುವಟಿಕೆ ನಡೆದು 15 ದಿನದಲ್ಲಿ ಆಯುಕ್ತರಿಗೆ ದೂರು ನೀಡಬೇಕು. ಈ ಎಲ್ಲ ಅಂಶ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ರಾಜಕೀಯವಾಗಿ ತಿರುಗುಬಾಣ, ಏಸು ವಿವಾದ ಬೆಳೆಸದಂತೆ ಸಚಿವರಿಗೆ ಬಿಎಸ್ವೈ ತಾಕೀತು!...
ಇನ್ನು ಜೆಡಿಎಸ್ 4 ಸದಸ್ಯರ ಅಮಾನತು ಬಗ್ಗೆ ದೂರು ಇನ್ನು ಕೈ ಸೇರಿಲ್ಲ. ದೂರು ಪ್ರತಿ ಕೈ ಸೇರಿದ ಬಳಿಕ ಆ ಬಗ್ಗೆಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಮಾನತು ಮಾಡದಿದ್ದರೆ ಹೈಕೋರ್ಟ್ ಮೊರೆ
ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಪ್ರತಿಕ್ರಿಯಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆದು 15 ದಿನದಲ್ಲಿ ಆಯುಕ್ತರಿಗೆ ದೂರು ನೀಡಬೇಕೆಂಬ ನಿಯಮ ಇಲ್ಲ. ಪ್ರಾದೇಶಿಕ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಸದಸ್ಯರನ್ನು ಅಮಾನತುಗೊಳಿಸದೆ ಇದ್ದರೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ತಿಳಿಸಿದರು.