200 ಹಾವು ಹಿಡಿದು ಜಮೀನಲ್ಲಿ ಬಿಟ್ಟುಕೊಂಡ್ರು : ಇಂಜಿನಿಯರ್ ಆಗಬೇಕಿದ್ದವ ಈಗ ಲಕ್ಷಾದೀಶ್ವರ
ಇಂಜಿನಿಯರ್ ಆಗಬೇಕಿದ್ದವ ಈಗ ರೈತನಾಗಿ ಲಕ್ಷಾದೀಶ್ವರನಾದ ಕತೆ ಇದು. ಇದು ರೈತರಾಗಿಯೇ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ
ಮೈಸೂರು (ನ.08): ಐದು ದಶಕಗಳ ಹಿಂದೆ ಡಾ.ರಾಜ್ಕುಮಾರ್ ಅವರ ಸಿನಿಮಾ ’ಬಂಗಾರದ ಮನುಷ್ಯ’ ನೋಡಿ ಸಾಕಷ್ಟುಮಂದಿ ನಗರದಿಂದ ವಾಪಸ್ ತಮ್ಮ ಗ್ರಾಮಕ್ಕೆ ತೆರಳಿ ಕೃಷಿ ಆರಂಭಿಸಿದರು. ಕೊರೋನಾ ಪರಿಣಾಮದಿಂದ ಹೇರಲಾದ ಲಾಕ್ಡೌನ್ನಿಂದ ಒಂದಿಷ್ಟುಯುವಕರು ಹಳ್ಳಿಗೆ ವಾಪಸಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಎಂಜಿಯರ್ ಆಗುವ ಆಸೆ ಬಿಟ್ಟು ಕೃಷಿಯೇ ನಮ್ಮ ಮೂಲ ಎಂದು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ರಾಮೇನಹಳ್ಳಿ ಗ್ರಾಮದ ಮಹೇಶ್ ಸಾಯವಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 35 ವರ್ಷದ ಮಹೇಶ್ ಕಳೆದ 15 ವರ್ಷಗಳಿಂದ ಕೃಷಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ತಮ್ಮಗಿರುವ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಯಶಸ್ವಿಯಾಗಿರುವ ಮಹೇಶ್ ವಾರ್ಷಿಕವಾಗಿ ಅಂದಾಜು 2 ಲಕ್ಷ ರು. ಲಾಭ ಗಳಿಸುತ್ತಾರೆ. ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಮತ್ತು ಜೇನು ಸಾಕಣಿಕೆ ಅವರ ಕೈ ಹಿಡಿದಿದೆ. ಈ ಮೂಲಕ ಮಾದರಿ ಯುವಕರಿಗೆ ಮಾದರಿಯಾಗಿದ್ದಾರೆ.
ಬಾಲ್ಯದಿಂದಲೇ ಪ್ರಕೃತಿ ಮತ್ತು ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಹೇಶ್ ಎಂಜಿನಿಯರ್ ಆಗಿ ಸಾಧನೆ ಮಾಡಬೇಕೆಂದು ಎಂಜಿನಿಯರಿಂಗ್ ಪದವಿ ಸೇರ್ಪಡೆಯಾದರು. ಎಂಜಿನಿಯರ್ ಆಗಬೇಕೆಂಬ ಆಸೆಗಿಂತ, ಕೃಷಿಯೇ ಮೇಲು ಎಂದು ಕೃಷಿಗೆ ಆಕರ್ಷಿತರಾದರು. ನೈಸರ್ಗಿಕ ಕೃಷಿ ಆರಂಭಿಸಿದರು. ಆರಂಭದ ದಿನಗಳಲ್ಲಿ ನಿರೀಕ್ಷಿಸಿದ ಆದಾಯ ಗಳಿಸಿಲು ಸಾಧ್ಯವಾಗದಿದ್ದಾಗ, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಮತ್ತು ಸಾವಯವ ಕೃಷಿ ಕಡೆ ಗಮನ ಹರಿಸಿದರು.
ಈ ವರ್ಷ ಬೆಳೆದ ಯಾವ ಬೆಳೆ ರೈತನಿಗೆ ಸಿಗೋದಿಲ್ಲ: ಕಾರ್ಣಿಕ ಭವಿಷ್ಯ..!
ಜಮೀನಿನಲ್ಲಿ 4 ಎಕರೆಯಲ್ಲಿ ರೇಷ್ಮೆ, 4 ಎಕರೆಯಲ್ಲಿ 208 ತೆಂಗಿನ ಮರಗಳು, 2 ಎಕರೆಯಲ್ಲಿ ನೆಂದ್ರೆಬಾಳೆ ಹಣ್ಣು, ಏಲಕ್ಕಿ, ಪಚ್ಚಬಾಳೆ, ಒಂದು ಎಕರೆಯಲ್ಲಿ ವಿಳ್ಯೆದೇಲೆ, 50 ಸಪೋಟ ಮರ, 50ಕ್ಕಿಂತ ಹೆಚ್ಚಿನ ಹಲಸು, ಬೀಟೆ ಹುಣ್ಣೆ, ಹೆಬ್ಬೆವು ಮತ್ತು ಕಹಿಬೇವು ಮರಗಳು, ರಾಗಿ, ಜೋಳ, ಭತ್ತ, ಶುಂಠಿ, ತರಕಾರಿ, ಹೂ ಸೇರಿದಂತೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ವತಿಯಿಂದ 21 ಮೀಟರ್ ಉದ್ದದ ಮೂರು ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿ ಕೃಷಿ ಮಾಡುವ ಜೊತೆಗೆ ಮೀನು ಸಾಕಣಿಕೆ ಮಾಡುತ್ತಿದ್ದಾರೆ.
ಮೀನು ಸಾಕಣಿಕೆಯಿಂದ 10 ಲಕ್ಷ ಲಾಭ: 20 ಜೇನು ಸಾಕಣಿಕೆ, 12 ಹಸು ಸಾಕಣಿಕೆ ಹಾಗೂ 4 ಎಕರೆಯಲ್ಲಿ ಮೀನು ಸಾಕಣಿಕೆ ಮಾಡುತ್ತಿದ್ದಾರೆ. ಇಷ್ಟಕ್ಕೇ ಸೀಮಿತವಾದ ಮಹೇಶ್ ’ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ ವನ್ನು ಸ್ಥಾಪಿಸಿ ಎಂಟು ವಷÜರ್ಗಳಿಂದ ನಡೆಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಕಬಿನಿಯಲ್ಲಿ ಮೀನುಮರಿಗಳನ್ನು ಖರೀದಿಸಿ ಅವುಗಳನ್ನು ತಮ್ಮ ಮೀನಿನ ತೊಟ್ಟಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಾರೆ. ಇಲ್ಲಿ ಕಾಟ್ಲಾ, ರೇವು, ಹುಲ್ಲುಗೆಂಡೆ, ಬ್ರಿಗಲ್, ಸಮಂತಗೆಂಡೆ ಹಾಗೂ ಮುಂತಾದ ಮೀನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯವರೆಗೆ 10 ಲಕ್ಷದವರೆಗೆ ಆದಾಯ ಗಳಿಸಿದ್ದಾರೆ.
ಸಮಸ್ಯೆಗೆ ನೈಸರ್ಗಿಕ ಪರಿಹಾರ: ಕೃಷಿ ಸಮಸ್ಯೆಗೆ ನೈಸರ್ಗಿಕ ಪರಿಹಾರ ಹುಡುಕುವ ಮಹೇಶ್, ನೈಸರ್ಗಿಕ ಗೊಬ್ಬರ ಬಳಸುತ್ತಾರೆ. ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇಲಿಗಳು ಬೆಳೆಗಳನ್ನು ನಾಶ ಮಾಡುವುದನ್ನು ಹಾಗೂ ಮೀನುಗಳನ್ನು ಕಪ್ಪೆಗಳು ತಿನ್ನುವುದನ್ನು ತಡೆಗಟ್ಟಲು ಹೊಲದಲ್ಲಿ ಮತ್ತು ಮೀನು ಸಾಕಣಿಕೆ ತೋಟಿಗೆ ಸ್ವತಃ ತಾವೇ ಹಿಡಿದ ಹಾವುಗಳನ್ನು ಬಿಟ್ಟಿದ್ದಾರೆ. ಈ ಮೂಲಕ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೂ ಒಟ್ಟು 200 ಹಾವುಗಳನ್ನು ಹಿಡಿದು ತಮ್ಮ ಜಮೀನಿನಲ್ಲಿ ಬಿಟ್ಟಿಕೊಂಡು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ ಐದು ವರ್ಷಗಳಿಂದಲೂ ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವುದನ್ನು ಗುರುತಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ’ಯುವ ಕೃಷಿಕ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 2014 ಮತ್ತು 2019ರ ರೈತ ದಸರಾದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಉತ್ಸಾಹಿ ಯುವ ಕೃಷಿಕ’ ಎಂದು ಗೌರವಿಸಲಾಗಿದೆ. ಜನಧ್ವನಿ ಬಾನುಲಿ ಕೇಂದ್ರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಸನ್ಮಾನಿಸಿವೆ.
ಕಚ್ಚಿಸಿಕೊಂಡ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ! ಬೆಚ್ಚಿದ ಆಸ್ಪತ್ರೆ ಸಿಬ್ಬಂದಿ .
ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಆಲದ ಮರ ಮತ್ತು ಚೇರಿಮರಗಳನ್ನು ಬೆಳೆಸಿದ್ದಾರೆ. ಯಾವುದೇ ಬೆಳೆಗಳನ್ನು ಬೆಳೆಯುವ ಮೊದಲೇ ಬೆಳೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಇದಕ್ಕಾಗಿ ನಿತ್ಯ 4 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ರಾಸಾಯನಿಕ ಗೊಬ್ಬರ ಹಾಕದೇ ಮಣ್ಣಿನ ಫಲವತ್ತತೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಹಸು ಸಗಣಿ, ಕೋಳಿ ಮತ್ತು ಮೀನು ಸಾಕಣಿಕೆಯಿಂದ ದೊರೆಯುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಬಳಸುತ್ತಾರೆ. ಕಳೆದ 12 ವರ್ಷಗಳಿಂದಲೂ ಸಹ ಯಾವುದೇ ರಾಸಯನಿಕ ಗೊಬ್ಬರಗಳನ್ನು ಸಿಂಪಡಿಸಿಲ್ಲ ಎಂದು ಮಹೇಶ್ ತಿಳಿಸಿದ್ದಾರೆ.
ಆಸಕ್ತ ರೈತರು, ಅನೇಕ ಸಂಘ-ಸಂಸ್ಥೆಗಳು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ರೈತರಿಗೆ ಇವರಿಂದ ಸಲಹೆ ಪಡೆಯುತ್ತಾರೆ. ಅಲ್ಲದೆ ರಾಮೇನಹಳ್ಳಿಯ ಸುತ್ತಮುತ್ತಲಿನ ರೈತರಿಗೆ ಸ್ಫೂರ್ತಿಯಾಗಿದ್ದಾರೆ. ’’ಏಕಬೆಳೆ ಪದ್ದತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯಿಂದ ನಷ್ಟವಿಲ್ಲದೆ ಸಾಕಷ್ಟುಲಾಭಗಳಿಸಬಹುದು. ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿ ಅನುಸರಿಸುವುದರಿಂದ ಯಾವ ರೈತನು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ತುಳಿಯುವುದಿಲ್ಲ. ಇದಕ್ಕೆ ನಾನೇ ಉದಾಹರಣೆ,’’ ಹಾಗೂ ’’ಬೆಲೆ ಆಧಾರಿತ ಬೆಳೆಗಳು ಮತ್ತುಕುಟುಂಬ ನಿರ್ವಹಣೆಗೆ ಬೇಕಾಗುವ ಬೆಳೆ ಬೆಳೆದು ಮೌಲ್ಯವರ್ಧಿತ ಬೆಲೆಗಳಿಗೆ ಮಾರಾಟ ಮಾಡಬೇಕು,’’ ಎಂದು ಹೇಳುತ್ತಾರೆ. ಯುವ ಕೃಷಿಕ ಮಹೇಶ್. ಹೆಚ್ಚಿನ ಮಾಹಿತಿಗಾಗಿ, ಮೊ. 9845748514.