Asianet Suvarna News Asianet Suvarna News

Mysuru : ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದಿಲ್ಲ

ಯಾವುದೇ ಅರ್ಹ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಿಲ್ಲ. ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

Eligible voters are not removed from the list snr
Author
First Published Dec 1, 2022, 7:44 AM IST

 ಮೈಸೂರು (ಡಿ.01):  ಯಾವುದೇ ಅರ್ಹ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಿಲ್ಲ. ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ (Politics)  ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಪರಿಷ್ಕರಣೆ ಎಂಬುದು ನಿರಂತರ ಪ್ರಕ್ರಿಯೆ. ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಾನೂನು (Law) ಬದ್ಧವಾಗಿ ಪುನರಾವರ್ತನೆಗೊಂಡ ಪ್ರಕರಣಗಳಲ್ಲಿ ಮತದಾರರನ್ನು ಕೈ ಬಿಡುವ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ನಿಗದಿತ ನಮೂನೆ-7ನ್ನು ಪಡೆದುಕೊಂಡ ನಂತರ ಸ್ಥಳ ಪರಿಶೀಲನೆಯ ಹಾಗೂ ಬೂತ್‌ ಮಟ್ಟದ ಅಧಿಕಾರಿಗಳ ವರದಿಯ ನಂತರ ಮತದಾರರನ್ನು ಕೈಬಿಡಲಾಗಿದ್ದು, ಇದು ಪಾರದರ್ಶಕವಾಗಿದೆ ಎಂದರು.

ಈ ಬಾರಿ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಭಾವಚಿತ್ರ ಹಾಗೂ ವಿವರಗಳನ್ನೊಳಗೊಂಡ ಮತದಾರರನ್ನು ಪರಿಶೀಲಿಸಿ ಕೈಬಿಡಲಾದ ಕಾರಣ ಹೆಚ್ಚಿನ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮರಣ ಹೊಂದಿದವರು, ಸ್ಥಳಾಂತರ, ಪುನರಾವರ್ತನೆ, ಒಂದೇ ರೀತಿಯ ಭಾವಚಿತ್ರಗಳನ್ನು ಹೊಂದಿರುವ ಕಾರಣ ಪರಿಶೀಲಿಸಲಾಗುತ್ತದೆ. ಕರಡು ಮತದಾರರ ಪಟ್ಟಿಪರಿಶೀಲಿಸಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮರಣ ಹೊಂದಿದ ಕಾರಣದಿಂದ, 20,440 ಮತದಾರರು ಸ್ಥಳಾಂತರ ಹೊಂದಿದ ಕಾರಣದಿಂದ 16,933 ಪುನರಾವರ್ತನೆ ಕಾರಣದಿಂದ 2,227 ಹಾಗೂ ಒಂದೇ ರೀತಿಯ ಭಾವಚಿತ್ರ ಹೊಂದಿದ ಕಾರಣದಿಂದ 80,930 ಪ್ರಕರಣಗಳು ಸೇರಿದಂತೆ ಒಟ್ಟು 1,20,786 ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟ್‌ಗಳು ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗಿದ್ದರೆ ಅಂತಹವರ ಮಾಹಿತಿಯನ್ನು ಬಿಎಲ…ಒಗಳಿಗೆ, ಎಆರ್‌ಒಗಳಿಗೆ, ತಹಸೀಲ್ದಾರರಿಗೆ ಹಾಗೂ ನನಗೂ ಸಹ ಮಾಹಿತಿ ನೀಡಬಹುದಾಗಿದೆ. ಉದ್ದೇಶಪೂರ್ವಕವಾಗಿ ಹೆಸರು ತೆಗೆದು ಹಾಕಿರುವುದು ಕಂಡುಬಂದರೆ ತನಿಖೆ ನಡೆಸಿ ಕಾರಣವಾದಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಮ್ಮ ಹೆಸರುಗಳು ಬೇರೆ ಬೂತ್‌ಗಳಿಗೆ ಬದಲಾವಣೆ ಆಗಿದ್ದರೆ ಫಾರಂ ನಂ. 8ರಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.ಯಾರದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ ಫಾರಂ ನಂ. 6ರಲ್ಲಿ ಅರ್ಜಿ ಸಲ್ಲಿಸಿ ಸೇರ್ಪಡೆ ಮಾಡಬಹುದು. ವೋಟರ್‌ ಹೆಲ್ಪ…ಲೈನ್‌ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಇವಿಎಂ ಮಿಷನ್‌ಗೆ ಸಂಬಂಧಿಸಿದಂತೆ ಕೇವಲ ಮೈಸೂರು ಜಿಲ್ಲೆಗೆ ಮಾತ್ರ ಇವಿಎಂ ಮಿಷನ್‌ಗಳು ಬಂದಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಿಗೂ ಹೊಸ ಇವಿಎಂ ಮಿಷನ್‌ ಸರಬರಾಜು ಆಗುತ್ತಿವೆ. ಅದೇ ರೀತಿ ಮೈಸೂರು ಜಿಲ್ಲೆಗೂ ಬಂದಿವೆ. ಅನವಶ್ಯಕ ಗೊಂದಲ ಬೇಡ. ಯಾವುದೇ ಗೊಂದಲಗಳಿದ್ದರೆ ಚುನಾವಣೆ ಶಾಖೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ನನ್ನನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಲಕ್ಮಿಕಾಂತರೆಡ್ಡಿ, ಚುನಾವಣಾ ತಹಸೀಲ್ದಾರ್‌ ರಾಮ್‌ ಪ್ರಸಾದ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

ಎಡಿಸಿ ಡಾ. ಮಂಜುನಾಥಸ್ವಾಮಿ ಮಾತನಾಡಿ, ರಾಜ್ಯದಾದ್ಯಂತ ಮತದಾರರ ಪಟ್ಟಿಪರಿಷ್ಕರಣೆ ನಡೆಯುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಪೋಟೋ ಸಿಮಿಲರ್‌ ಎಂಟ್ರಿ ಇರುವ 1,73,943 ಪ್ರಕರಣಗಳಿದ್ದವು. ಇವುಗಳನ್ನು ಪರಿಶೀಲನೆ ಮಾಡಿ ಪೋಟೋ ಸಿಮಿಲರ್‌ ಎಂಟ್ರಿ ಕಾರಣದಿಂದ ಕರುಡು ಮತದಾರರ ಪಟ್ಟಿಯಿಂದ 80,930 ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios