ಚಿಕ್ಕಮಗಳೂರು ಜಿಲ್ಲೆ  ಬಾಳೆಹೊನ್ನೂರಿನಲ್ಲಿ 20 ಅಡಿ ಎತ್ತರದಿಂದ ಕಾಲು ಜಾರಿ ಬಿದ್ದು ಆನೆಯೊಂದು ಮೃತಪಟ್ಟಿದೆ. 

ಬಾಳೆಹೊನ್ನೂರು [ಜು.04]: ಸುಮಾರು 20 ಅಡಿ ಎತ್ತರದಿಂದ ಕಾಲುಜಾರಿ ಕೆಳಗಿದ್ದ ಬಂಡೆ ಮೇಲೆ ಕಾಡಾನೆಯೊಂದು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾರಂಬಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತಪಟ್ಟಿರುವ ಗಂಡಾನೆ ವಯಸ್ಸು ಸುಮಾರು 50 ವರ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಖಾಂಡ್ಯ ಹೋಬಳಿಯ ಹ್ಯಾರಂಬಿ ಗ್ರಾಮ ಸಮೀಪದಲ್ಲಿರುವ ತೋಟವೊಂದರಲ್ಲಿ 2 ಕಾಡಾನೆಗಳು ವಾರದಿಂದ ಬೀಡುಬಿಟ್ಟಿದ್ದವು. ಅವುಗಳು ಆಸುಪಾಸಿನ ಫಸಲು ಹಾಳು ಮಾಡುತ್ತಿದ್ದವು. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಈ ಆನೆಗಳನ್ನು ಕಾಡಿಗೆ ಓಡಿಸಬೇಕೆಂದು ಜನರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಬುಧವಾರ ಭದ್ರಾ ವನ್ಯಜೀವಿ ಸಿಬ್ಬಂದಿ ಹಾಗೂ ಸ್ಥಳೀಯರು ಆನೆಗಳನ್ನು ಕಾಡಿಗೆ ಅಟ್ಟುತ್ತಿದ್ದರು. ಈ ವೇಳೆಯಲ್ಲಿ ಆನೆಯೊಂದು ಕಾಲು ಜಾರಿ ಸುಮಾರು 20 ಅಡಿ ಕೆಳಗಿದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಪ್ರಾಣಬಿಟ್ಟಿದೆ. ಈ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಗಾಬರಿಗೊಂಡು ಆನೆ ಕಾಡಿನತ್ತ ಓಡುವಾಗ ಕಲ್ಲಿನ ಮೇಲೆ ನೀರಿದ್ದರಿಂದ ಜಾರಿ, ಕೆಳಗಿದ್ದ ಮತ್ತೊಂದು ಕಲ್ಲಿನ ಮೇಲೆ ಬಿದ್ದಿದೆ. ಆದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಡಿಎಫ್‌ಓ ಸಾಕತ್‌ ಸಿಂಗ್‌ ರಣವತ್‌, ಎಸಿಎಫ್‌ ಸತೀಶ್‌, ಆರ್‌ಎಫ್‌ಓ ನೀಲೇಶ್‌ ಸಿಂಧೆ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.