ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್‌ ಎಸ್ಟೇಟ್‌ನಲ್ಲಿ ಕಾಡಾನೆ ತುಳಿತಕ್ಕೆ ತೋಟದ ಕಾರ್ಮಿಕ ಮಂಗಳವಾರ ಬಲಿಯಾದ ಘಟನೆಯು ಹಸಿರಾಗಿರುವಾಗಲೇ, ಅಂತಹದ್ದೇ ಘಟನೆ ಮರುಕಳಿಸಿ ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಸಕಲೇಶಪುರ (ಮೇ.12): ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್‌ ಎಸ್ಟೇಟ್‌ನಲ್ಲಿ ಕಾಡಾನೆ (Elephant) ತುಳಿತಕ್ಕೆ ತೋಟದ ಕಾರ್ಮಿಕ ಮಂಗಳವಾರ ಬಲಿಯಾದ ಘಟನೆಯು ಹಸಿರಾಗಿರುವಾಗಲೇ, ಅಂತಹದ್ದೇ ಘಟನೆ ಮರುಕಳಿಸಿ ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತ ತಪ್ಪಿದಂತಾಗಿದೆ. ತಾಲೂಕಿನ ಹಳೆಕೆರೆ ಗ್ರಾಮದಲ್ಲಿ ಮತ್ತೊಂದು ಅದೇ ರೀತಿಯ ಕಾಡಾನೆ ದಾಳಿ (Elephant Attack) ನಡೆದು ಕೂಲಿ ಕಾರ್ಮಿಕ ಮಹಿಳೆಯೊಬ್ಬರು (Women) ಗಾಯಗೊಂಡಿರುವ (Injured) ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಪಾರಾದ ಮಹಿಳೆ: ಬಾಗೆ ಗ್ರಾಮದ ರಂಗಮ್ಮ (50) ಕಾಡಾನೆ ದಾಳಿಯಿಂದ ಗಾಯಗೊಂಡ ಮಹಿಳೆಯಾಗಿದ್ದು, ಬುಧವಾರ ಕಾಫಿ ತೋಟದ ಕೆಲಸಕ್ಕೆ ಗ್ರಾಮದ ರಸ್ತೆಯಲ್ಲಿ ನಡೆದು ಹೋಗುವ ವೇಳೆ ಕಾಫಿ ತೋಟದಿಂದ ಏಕಾಏಕಿ ರಸ್ತೆಗೆ ಬಂದ ಕಾಡಾನೆಯು ಮಹಿಳೆಯ ಮೇಲೆ ದಾಳಿ ನಡೆಸಿ ಸೊಂಡಿಲಿನಿಂದ ಎಳೆದು ತುಳಿಯುವ ವೇಳೆಗೆ ಇತರೆ ಕಾರ್ಮಿಕರು ಕೂಗಾಟ ನಡೆಸಿದ ಪರಿಣಾಮ ಮಹಿಳೆಯನ್ನು ಬಿಟ್ಟು ತೆರಳಿದೆ. ಹಿಂದಿನ ದಿನ ಇದೆ ಹಳೆಕೆರೆ ಗ್ರಾಮದ ಭಾಗದಲ್ಲಿ ರವಿ ಎಂಬ ಕೂಲಿ ಕಾರ್ಮಿಕನನ್ನು ಬಲಿ ಪಡೆದ ನರ ಹಂತಕ ಆನೆಯೇ ಈ ಮಹಿಳೆಯ ಮೇಲೆ ದಾಳಿ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ.

ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ,ಲಕ್ಷಾಂತರ ಮೌಲ್ಯದ ಬೆಳೆ ನಾಶ

ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌: ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಬಲಭಾಗದ ಕಾಲು ಹಾಗೂ ಭುಜದ ಭಾಗಕ್ಕೆ ತೀವ್ರ ತೆರವಾದ ಪೆಟ್ಟು ಬಿದ್ದಿದ್ದು ಎಕ್ಸ್‌ರೇಯಿಂದ ಪೂರ್ಣ ಪ್ರಮಾಣದ ಮಾಹಿತಿ ದೊರೆಯುವುದಿಲ್ಲ. ಎಂಆರ್‌ಐ ಸ್ಕ್ಯಾ‌ನಿಂಗ್‌ ಮಾಡಿಸಿದರೆ ನರಗಳಿಗೆ ಪೆಟ್ಟಾಗಿರುವ ಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ಹೇಳಿದ ನಂತರ ಮಹಿಳೆಯನ್ನು ಅರಣ್ಯ ಇಲಾಖೆಯವರು ಹಾಸನದ ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌ ಮಾಡಿಸಲು ಕರೆದುಕೊಂಡು ಹೋಗಿದ್ದು ಪರೀಕ್ಷೆಯ ನಂತರ ಮಹಿಳೆಯ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ.

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

ಗ್ರಾಮಸ್ಥರ ಆಕ್ರೋಶ: ಆನೆಗಳ ಹಾವಳಿಯಿಂದಾಗಿ ನಮಗೆ ಜೀವ ಭಯ ಉಂಟಾಗಿದ್ದು ಕೂಲಿಗೆಂದು ತೋಟಕ್ಕೆ ಹೋದರೆ ಪುನಃ ನಾವು ಮನೆಗೆ ವಾಪಸ್ಸು ಬರುತ್ತೇವೆ ಎಂಬ ಭರವಸೆ ನಮಗಿಲ್ಲ ಒಂದು ಆನೆಗಳಿಗೆ ನೆಲೆ ಕಲ್ಪಿಸಿ ಇಲ್ಲ ನಮಗೆ ಒಂದು ನೆಲೆಯನ್ನು ನೀಡಿ ಪ್ರತಿದಿನ ನಾವು ಗ್ರಾಮಗಳಲ್ಲಿ ಸಂಚರಿಸುವಾಗ ಜೀವ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಇದಕ್ಕೆ ಶಾಶ್ವತ ಪರಿಹಾರವನ್ನು ಸರ್ಕಾರ ಅಥವಾ ಅರಣ್ಯ ಇಲಾಖೆಯ ಅ​ಧಿಕಾರಿಗಳು ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳ್ಳಿ ಅರಣ್ಯ ಇಲಾಖೆಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅ​ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಕ್ಷಣದಲ್ಲೇ ಉನ್ನತ ಮಟ್ಟದ ಅ​ಧಿಕಾರಿಗಳ ಅನುಮತಿ ಪಡೆದು ನರ ಹಂತಕ ಪುಂಡಾನೆಯನ್ನು ಹಿಡಿಯಲಾಗುವುದು ಎಂದಿದ್ದಾರೆ.