ಸಾರ್ವಜನಿಕ ಸ್ಥಳಗಳಲ್ಲಿರುವ ವಿದ್ಯುತ್ ಉಪಕರಣಗಳೊಂದಿಗೆ ಯಾರೂ ಹುಡುಗಾಟವಾಡಬಾರದು. ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ. ರಾಜಶೇಖರ್ ಎಚ್ಚರಿಸಿದರು.

 ತುರುವೇಕೆರೆ : ಸಾರ್ವಜನಿಕ ಸ್ಥಳಗಳಲ್ಲಿರುವ ವಿದ್ಯುತ್ ಉಪಕರಣಗಳೊಂದಿಗೆ ಯಾರೂ ಹುಡುಗಾಟವಾಡಬಾರದು. ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ. ರಾಜಶೇಖರ್ ಎಚ್ಚರಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕು ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಇಲಾಖಾ ವತಿಯಿಂದ ಪಟ್ಟಣದಲ್ಲಿ ನಡೆಸಿದ ವಿದ್ಯುತ್ ಸುರಕ್ಷತಾ ಜಾಥಾ ಸಂಧರ್ಭದಲ್ಲಿ ಮಾತನಾಡಿದ ಅವರು, ವಿದ್ಯುತ್ ತಂತಿಗಳಿಂದ ದೂರವಿರಲು ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕು. ವಿದ್ಯುತ್ ಸ್ವಿಚ್‌ಗಳು ಹಾಗೂ ವಿದ್ಯುತ್ ಉಪಕರಣಗಳು ಮಕ್ಕಳ ಕೈಗೆ ಸಿಗದಂತೆ ಕ್ರಮಕೈಗೊಳ್ಳಬೇಕು. ಗ್ರಾಹಕರು ಯಾವಾಗಲೂ ಮೂರು ಪಿನ್‌ಗಳ ಪ್ಲಗ್ ಅಥವಾ ಸಾಕೆಟ್‌ಗಳನ್ನು ಬಳಸಬೇಕು. ಹಾಗೂ ಕಟ್ಟಡದಲ್ಲಿ ಅರ್ಥಿಂಗ್ ಸರಿಯಾಗಿ ಇರುವಂತೆ ಜಾಗೃತಿ ವಹಿಸಬೇಕೆಂದು ರಾಜಶೇಖರ್ ಸೂಚನೆ ನೀಡಿದರು.

ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು. ತುಂಡಾಗಿ ಬಿದಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬಾರದು. ಬಟ್ಟೆಗಳನ್ನು, ಸಾಕು ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು. ವಿದ್ಯುತ್ ತಂತಿಗಳ ಮೇಲಿರುವ ಬಳ್ಳಿ, ಮರದ ಕೊಂಬೆಗಳನ್ನು ಸ್ವಯಂ ಇಚ್ಛೆಯಿಂದ ತೆರವುಗೊಳಿಸಲು ಮುಂದಾಗಬಾರದು ಎಂದರು.

ಪಟ್ಟಣದ ಬೆಸ್ಕಾಂ ಕಚೇರಿಯಿಂದ ಹೊರಟ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಬಾಣಸಂದ್ರ, ಮಾಯಸಂದ್ರ, ದಬ್ಬೇಘಟ್ಟ ಹಾಗೂ ತಿಪಟೂರು ರಸ್ತೆಗಳಲ್ಲಿ ಬ್ಯಾನರ್ ಹಿಡಿದು ಜಾಥಾ ನಡೆಸಿದರು. ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂದೆ ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಿದರು.

ಈ ಸಂಧರ್ಭದಲ್ಲಿ ತಂಡಗ ಬೆಸ್ಕಾಂ ಶಾಖಾಧಿಕಾರಿ ಎಂ.ಎಲ್. ಉಮೇಶ್ವರಯ್ಯ, ಮಾಯಸಂದ್ರ ಶಾಖಾಧಿಕಾರಿ ನಾರಾಯಣಪ್ಪ, ದಂಡಿನಶಿವರ ಶಾಖಾಧಿಕಾರಿ ಸೋಮಶೇಖರ್, ಟೌನ್ ಶಾಖಾಧಿಕಾರಿ ಗಿರೀಶ್‌ಕುಮಾರ್ ಮತ್ತು ಕಾಂತರಾಜು, ಗುತ್ತಿಗೆದಾರರಾದ ಕೆ.ಬಿ. ಮಲ್ಲಿಕ್, ಶಂಕರೇಗೌಡ, ಪ್ರಕಾಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.