ಶ್ರೀಗಳ ಕೇಸ್ ಕಾನೂನು ವಿದ್ಯಾರ್ಥಿಗಳ ಪಾಲಿಗೆ ಬೈಬಲ್
ಎಡನೀರು ಶ್ರೀಗಳ ಪ್ರಕರಣ ಕಾನೂನು ವಿದ್ಯಾರ್ಥಿಗಳ ಪಾಲಿನ ಬೈಬಲ್ ಆಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಬರೋಬ್ಬರಿ 28 ದಿನಗಳ ಕಾಲ ವಾದ ಪ್ರತಿವಾದ ನಡೆದ ಈ ಕೇಸ್ ಸಿಲೆಬಸ್ ಆಗಿದೆ.
ಮಂಗಳೂರು (ಸೆ.07): ಸಂವಿಧಾನದತ್ತ ಮೂಲಭೂತ ಹಕ್ಕಿನ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿ ದೇಶದ ಕಾನೂನು ವ್ಯವಸ್ಥೆಯಲ್ಲಿ ಕೇಶವಾನಂದ ಸ್ವಾಮೀಜಿ ಹೆಸರು ಚಿರಸ್ಥಾಯಿ. 1973ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ಈಗಲೂ ದೇಶದ ಕಾನೂನು ವಿದ್ಯಾರ್ಥಿಗಳ ಪಾಲಿಗೆ ಬೈಬಲ್ನಂತಿದೆ.
ಬರೋಬ್ಬರಿ 68 ದಿನಗಳ ಕಾಲ ವಾದ-ಪ್ರತಿವಾದ ನಡೆದ, ಸುಪ್ರೀಂ ಕೋರ್ಟ್ನ 13 ಮಂದಿ ನ್ಯಾಯಾಧೀಶರ ಪೀಠ ವಿಚಾರಣೆ ಕೈಗೊಂಡ ಬಲು ಅಪರೂಪದ ಪ್ರಕರಣ ಎಂದೇ ಇದು ವ್ಯಾಖ್ಯಾನಿಸಲ್ಪಟ್ಟಿದೆ. ಸಂಸತ್ತಿಗೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಇದ್ದರೂ ಅದರ ಮೂಲಭೂತ ಲಕ್ಷಣವನ್ನು ಬದಲಾಯಿಸುವ ಅವಕಾಶ ಇಲ್ಲ ಎಂದು ಈ ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ.
ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ ...
ಏನಿದು ಪ್ರಕರಣ?-ಭೂ ಸುಧಾರಣೆ ಕಾಯ್ದೆಯಂತೆ ಕೇರಳ ಸರ್ಕಾರವು ಎಡನೀರು ಮಠಕ್ಕೆ ಸೇರಿದ ಆಸ್ತಿ ಸ್ವಾಧೀನಪಡಿಸಿಕೊಳ್ಳಲು 1970ರಲ್ಲಿ ನೋಟಿಸ್ ಜಾರಿ ಮಾಡಿತ್ತು. ಇದನ್ನು ವಿರೋಧಿಸಿ ಕೇಶವಾನಂದ ಶ್ರೀಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಿನ ಪ್ರಸಿದ್ಧ ನ್ಯಾಯವಾದಿ ನಾನಾಬಾಯ್ ಫಾಲ್ಕಿವಾಲಾ ಶ್ರೀಗಳ ಪರ ವಕಾಲತ್ತು ವಹಿಸಿದ್ದರು. ಸರ್ಕಾರದ ಹಸ್ತಕ್ಷೇಪಲ್ಲದೆ ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕು ಹಾಗೂ ಆಸ್ತಿ ಮೂಲಭೂತವಾದುದೋ, ಅಲ್ಲವೋ ಎಂಬುದು ಈ ಪ್ರಕರಣದ ಪ್ರಧಾನ ಅಂಶವಾಗಿತ್ತು. ಅತ್ಯಪರೂಪ ಎಂಬಂತೆ 13 ನ್ಯಾಯಾಧೀಶರ ಪೀಠ ಈ ಪ್ರಕರಣವನ್ನು ಪರಿಶೀಲನೆಗೆ ಒಡ್ಡಿತ್ತು.
1972ರ ಅ.31ರಿಂದ 1973ರ ಮಾರ್ಚ್ 23ರ ವರೆಗೆ 68 ದಿನಗಳ ಕಾಲ ವಾದ-ಪ್ರತಿವಾದಗಳು ನಡೆದವು. ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದ್ದರೂ ಸಂವಿಧಾನವನ್ನು ಹೇಗೆ ಬೇಕಾದರೂ ತಿದ್ದಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಬೇಕಿತ್ತು. ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿ ಅದರ ಮೂಲ ಸ್ವರೂಪಕ್ಕೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು. ಸಂವಿಧಾನದ ಕೆಲ ಮೂಲ ವಿಚಾರಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಅಸಾಧ್ಯ ಎಂದು ಪೀಠ ಅಭಿಪ್ರಾಯಪಟ್ಟಿತು. ಜತೆಗೆ, ಪರಿಚ್ಛೇದ (ಶೆಡ್ಯೂಲ್) 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು.
ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು ..
ಇಂದು ಹಿಂದೂಗಳದ್ದು ಮಾತ್ರವಲ್ಲದೆ ಇತರೆ ಧಾರ್ಮಿಕ ಸಂಸ್ಥೆಗಳ ಆಸ್ತಿಗಳನ್ನು ಸರ್ಕಾರದ ಹಸ್ತಕ್ಷೇಪವಿಲ್ಲದೆ ನಡೆಸಿಕೊಂಡು ಬರಲು, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂಸತ್ತು ರದ್ದುಪಡಿಸದಂತೆ ಕಾಪಾಡಲು ಕಾರಣೀಭೂತವಾಗಿದ್ದ ಪ್ರಕರಣ. ಅಮೆರಿಕ, ಬ್ರಿಟನ್ ರಾಷ್ಟ್ರಗಳ ನ್ಯಾಯಾಲಯಗಳೂ ಈ ಪ್ರಕರಣವನ್ನು ಉಲ್ಲೇಖಿಸುತ್ತವೆ.
ಯಕ್ಷಗಾನಕ್ಕೂ ಪ್ರೋತ್ಸಾಹ
ಕಲೆಯನ್ನು ಆರಾಧನಾ ರೂಪದಲ್ಲಿ ಕಂಡ ಶ್ರೀಗಳು ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನವನ್ನು ಪ್ರೀತ್ಯಾದರಗಳಿಂದ ಪೋ›ತ್ಸಾಹಿಸಿ ನೂರಾರು ಕಲಾವಿದರ ಜೀವನ ನಿರ್ವಹಣೆಗೆ ಸಹಾಯ ಮಾಡಿದವರು. ಎಡನೀರು ಮೇಳವನ್ನು ಆರಂಭಿಸಿದ್ದಲ್ಲದೆ, ಹಲವು ವರ್ಷಗಳ ಕಾಲ ಅದನ್ನು ಮುನ್ನಡೆಸಿದವರು. ಅಲ್ಲದೆ ಸ್ವತಃ ಹರಿದಾಸರಾಗಿರುವ ಸ್ವಾಮೀಜಿ ಭಾಗವತಿಕೆಯನ್ನೂ ನಡೆಸುತ್ತಿದ್ದರು. ಅಂತ್ಯಕಾಲದಲ್ಲೂ ಭಾಗವತಿಕೆ ನಡೆಸುತ್ತಿದ್ದುದು ಅವರ ವಿಶೇಷತೆ. ಕಾರಣಾಂತರಗಳಿಂದ ಎಡನೀರು ಮೇಳ ನಿಲ್ಲಿಸಿದ ಬಳಿಕವೂ ಮಠದಲ್ಲಿ ಯಕ್ಷಗಾನದ ವೈಭವಕ್ಕೆ ಕೊರತೆ ಇರಲಿಲ್ಲ.