Asianet Suvarna News Asianet Suvarna News

ಕುಷ್ಟಗಿ: ಎಣ್ಣೆ ಹೊಡೆಯೋಕೆ ಕೃಷಿ ಜಮೀನೂ ಸಾಲ್ತಿಲ್ಲ ಕುಡುಕರಿಗೆ..!

* ಖಾಲಿ ನಿವೇಶನ ರೈತರ ಜಮೀನುಗಳಲ್ಲಿ ಮದ್ಯಸೇವನೆ
* ಕೃಷಿ ಚಟುವಟಿಕೆಗೆ ತೀವ್ರ ತೊಂದರೆ ಕಡಿವಾಣಕ್ಕೆ ರೈತನ ಆಗ್ರಹ
* ಮನೆ ಹಾಗೂ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ 
 

Drunkards Did Party in Agriculture Land at Kushtagi in Koppal grg
Author
Bengaluru, First Published Jun 7, 2021, 2:37 PM IST

ಕುಷ್ಟಗಿ(ಜೂ.07): ಖಾಲಿ ನಿವೇಶನ, ಶಾಲಾ, ಕಾಲೇಜುಗಳ ಆವರಣಗಳಲ್ಲಿ ಕುಡಿದ ಬಾಟಲಿಗಳನ್ನು ಬೀಸಾಡುತ್ತಿದ್ದ ಕುಡುಕರು ಈಗ ರೈತರ ಜಮೀನುಗಳನ್ನೇ ಆಕ್ರಮಿಸಿದ್ದು, ಇದು ಕೃಷಿ ಚಟುವಟಿಕೆಗೂ ತೊಂದರೆಯಾಗಿ ಪರಿಣಮಿಸಿದೆ. ಅಲ್ಲದೆ ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳು ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿರುವ ಜಮೀನುಗಳಲ್ಲಿ ಖಾಲಿ ಬಾಟಲಿಗಳನ್ನು ಬೀಸಾಡುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕೊರೋನಾ ಮಹಾಮಾರಿಯಿಂದಾಗಿ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಭಯದ ವಾತಾವರಣದಲ್ಲಿ ಕಾಲಕಳೆಯುವಂತಾಗಿದೆ. ಆದರೆ ಮದ್ಯವ್ಯಸನಿಗಳ ಪಾಲಿಗೆ ಇದ್ಯಾವೂದು ಲೆಕ್ಕಕ್ಕಿಲ್ಲ ಎನ್ನುವುದಕ್ಕೆ ಪಟ್ಟಣದ ಹೊರವಲಯದಲ್ಲಿರುವ ರೈತರ ಜಮೀನುಗಳೇ ಸಾಕ್ಷಿಯಾಗಿವೆ.

ನಿಯಂತ್ರಣ ಇಲ್ಲ:

ಇದಕ್ಕೆ ಸಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಕಣ್ಣಿಗೆ ಕಂಡರೂ ಕಾಣದಂತೆ ಕೈಕಟ್ಟಿಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ. ಪಟ್ಟಣದ ಹೊರವಲಯದಲ್ಲಿ ಸಾಕಷ್ಟು ಸಂಖ್ಯೆಯ ಮದ್ಯವ್ಯಸನಿಗಳು ಅಲ್ಲಲ್ಲಿ ತಮ್ಮ ಮೊಬೈಲ್‌ ಬೆಳಕನ್ನು ಬಳಸಿ ಮದ್ಯಸೇವನೆ ಮಾಡುತ್ತಿದ್ದರೂ ಪೊಲೀಸರು ಈ ಬಗ್ಗೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ ಕೃಷಿ ಚಟುವಟಿಕೆ ಮಾಡುವುದಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರ ನೀಡಿದ ಜನರಿಗೆ ಬಿಜೆಪಿ ಶಾಸಕ ದಢೇಸ್ಗೂರು ಸಾವಿನ ಕಾಣಿಕೆ: ತಂಗಡಗಿ

ಗ್ರಾಮೀಣ ಪ್ರದೇಶದಲ್ಲಿ:

ಪಟ್ಟಣದ ಹೊರವಲಯದ ರೈತರ ಜಮೀನುಗಳಲ್ಲಿ ಈ ಪರಿಸ್ಥಿತಿಯಾದರೆ, ಇನ್ನು ಗ್ರಾಮೀಣ ಪ್ರದೇಶದಲ್ಲಿಯೂ ಅಕ್ರಮ ಮದ್ಯ ಮಾರಾಟ ಅಲ್ಲಲ್ಲಿ ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಇರುವ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಇನ್ನು ಕೆಲವರು ಮನೆ ಮಾಡಿ ಮನೆಯ ಕುಟುಂಬಸ್ಥರೊಂದಿಗೆ ನಿತ್ಯ ವಿವಾದ ಮಾಡುತ್ತಿರುವುದು ಸಹ ಅಲ್ಲಲ್ಲಿ ಕೇಳಿಬಂದಿದೆ.

ಜತೆಗೆ ಕೆಲವರು ಮನೆ ಹಾಗೂ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಇದನ್ನು ನಿಯಂತ್ರಿಸಬೇಕಾದ ಅಬಕಾರಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕೂಡಲೇ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಹಾಗೂ ಪಟ್ಟಣದ ಹೊರವಲಯದಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದರೆ ಮುಂದೊಂದು ದಿನ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕಾಗುತ್ತದೆ ಎಂದು ರೈತರಾದ ಶಿವಪ್ಪ ಚೂರಿ, ಶರಣಪ್ಪ, ದ್ಯಾಮಣ್ಣ, ಹನುಮಂತಪ್ಪ ಸೇರಿದಂತೆ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios