ಪೈಪ್‌ಲೈನ್‌ ಮೂಲಕ ಔರಾದ್‌ಗೆ ಕುಡಿಯುವ ನೀರು ಯೋಜನೆ, ಪ್ರಭು ಚವ್ಹಾಣ್‌ ಗುಣಗಾನ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬೀದರ್‌ ನಾಂದೇಡ್‌ ರೈಲು ಮಾರ್ಗಕ್ಕಾಗಿ ಭೂಸ್ವಾಧೀನ, ಅನುದಾನಕ್ಕೆ ಸಿಎಂ ಓಕೆ

ಔರಾದ್‌(ಅ.19): ಕಾರಂಜಾ ಜಲಾಶಯದಿಂದ ಔರಾದ್‌ ಪಟ್ಟಣಕ್ಕೆ ಕುಡಿವ ನೀರಿನ ಯೋಜನೆಗೆ ಅನುಮೋದನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಪಟ್ಟಣದ ಅಮರೇಶ್ವರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಡಿವ ನೀರಿನ ಯೋಜನೆಯಲ್ಲಿ ನಾವೆಂದೂ ಹಿಂದೆ ಬಿದ್ದಿಲ್ಲ. ಗ್ರಾಮೀಣ ಭಾಗದ ಕುಡಿವ ನೀರಿನ ಯೋಜನೆಗೆ ರು. 9 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ನಗರ ಪ್ರದೇಶದಲ್ಲಿ ಕುಡಿವ ನೀರಿನ ಯೋಜನೆಗೆ ಕೇಂದ್ರದ ನೆರವಿನೊಂದಿಗೆ 7500 ಕೋಟಿ ರು.ಗಳನ್ನು ಇತರೆ ನಗರಗಳಿಗೆ ಮೀಸಲಿಟ್ಟಿದ್ದೇವೆ. ಭಾಲ್ಕಿ ವಿಧಾನಸಭಾ ಕ್ಷೇತ್ರದ 26 ಸಾವಿರ ಎಕರೆ ಪ್ರದೇಶದಲ್ಲಿ ಒಂದು ಟಿಎಂಸಿ ನೀರು ರೈತರಿಗೆ ಸಿಗುವಂತೆ ಯೋಜಿಸಲಾಗಿದೆ. ಹೀಗೆಯೇ ಕಾರಂಜಾದಿಂದ ಔರಾದ್‌ಗೆ ಕುಡಿವ ನೀರು ಯೋಜನೆಗೆ ಸಚಿವ ಪ್ರಭು ಚವ್ಹಾಣ್‌ ಮನವಿಯಂತೆ ಮಂಜೂರಾತಿ ಕೊಡುತ್ತೇನೆ ಎಂದರು.

Add Asianetnews Kannada as a Preferred SourcegooglePreferred

ಕರ್ನಾಟಕದ ಕಿರೀಟವಾಗಿರುವ ಔರಾದ್‌ ತಾಲೂಕು, ಕಾರ್ಯಕರ್ತರು ತೋರಿಸಿದ ಪ್ರೀತಿಯನ್ನು ನನ್ನ ಜೀವನದಲ್ಲಿ ನಾನೆಂದೂ ಮರೆಯಲ್ಲ. ಬೆಂಗಳೂರಿನಂತೆ ಬೀದರ್‌ನ ತಲಾದಾಯ ಸಮವಾಗಬೇಕು. ಅದಕ್ಕಾಗಿ ಇಲ್ಲಿ ಸೌಲಭ್ಯಗಳು, ಮಾರುಕಟ್ಟೆ ಮತ್ತಿತರರ ಸುಧಾರಣೆ ಆಗಬೇಕಿದೆ. ಅದಕ್ಕಾಗಿ ಸರ್ಕಾರ ಸಾಕಷ್ಟುಶ್ರಮಿಸುತ್ತಿದೆ ಎಂದರು.

ದಾಖಲೆ ಕೊಟ್ರೆ ಸಿದ್ದು ವಿರುದ್ಧ ಕ್ರಮ ತಗೋತೀರಾ?: ರಾಹುಲ್‌ಗೆ ಸಿಎಂ ಸವಾಲ್‌

ಇನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರ ಬೇಡಿಕೆಯಂತೆ ಬೀದರ್‌ನಿಂದ ನಾಂದೇಡ್‌ವರೆಗೆ ರೈಲು ಮಾರ್ಗಕ್ಕಾಗಿ ಕರ್ನಾಟಕದಿಂದಲೂ ಭೂಸ್ವಾಧೀನ ಹಾಗೂ ಅನುದಾನ ನೀಡಲು ಬದ್ಧವಾಗಿದ್ದೇವೆ. ಕಾರಂಜಾ ನಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಿಪೆಟ್‌ಗಾಗಿ ಖೂಬಾ ಶ್ರಮ ಶ್ಲಾಘನೀಯ: ಸಿಎಂ ಬೊಮ್ಮಾಯಿ

ಕೇಂದ್ರ ಸಚಿವ ಖೂಬಾ ನೇತೃತ್ವದಲ್ಲಿ ಸಿಪೆಟ್‌ ಕೇಂದ್ರ ನಿರ್ಮಾಣವಾಗುತ್ತಿದೆ. ಇಲ್ಲಿಗೆ ಸಿಪೆಟ್‌ ಕೇಂದ್ರ ಬರುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಗವಂತ ಖೂಬಾಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬೇಲ್‌ ಮೇಲಿರುವ ರಾಹುಲ್‌, ಭ್ರಷ್ಟಾಚಾರದ ಮಾತು: ಸಿಎಂ ಬೊಮ್ಮಾಯಿ ವ್ಯಂಗ್ಯ

ರಾಜ್ಯದಾದ್ಯಂತ 2 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ಪೈಕಿ ವರ್ಷಾಂತ್ಯಕ್ಕೆ 50 ಶಾಲಾ ಕೊಠಡಿಗಳು ನಿರ್ಮಾಣ ಆಗಬೇಕು. 71 ಪಿಎಚ್‌ಸಿ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. 34 ಪಿಎಚ್‌ಸಿಗಳನ್ನು ಸಿಎಚ್‌ಸಿಗಳಾಗಿ ತಲಾ 8 ಕೋಟಿ ರು.ಗಳನ್ನು ಒದಗಿಸಿ 35 ಹಾಸಿಗೆಗಳ ಆಸ್ಪತ್ರೆನ್ನಾಗಿಸುತ್ತಿದ್ದೇವೆ ಎಂದರು.

ಪ್ರಭು ಚವ್ಹಾಣ್‌ ಉಡ ಇದ್ದಂಗ ಹಿಡಿದರೆ ಬಿಡೋದೆ ಇಲ್ಲ:

ಪ್ರಭು ಚವ್ಹಾಣ್‌ ಉಡ ಇದ್ದಂಗ ಹಿಡಿದರೆ ಬಿಡೋದೆ ಇಲ್ಲ. ಇಂದು ಸೇರಿರುವ ಜನರ ಸಂಖ್ಯೆ, ಅವರ ಉತ್ಸಾಹ ನೋಡಿದರೆ ಔರಾದ್‌ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್‌ ಅವರು ನೂರಕ್ಕೆ ನೂರು ಪ್ರತಿಶತ ಗೆಲುವು ಸಾಧಿಸುತ್ತಾರೆ. ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಅವರದು ದೊಡ್ಡ ಗುಣ. ಚವ್ಹಾಣ್‌ ದೊಡ್ಡವರ ಜೊತೆ ದೊಡ್ಡವರಂತೆ, ಸಣ್ಣವರ ಜೊತೆ ಸಣ್ಣವರಂತೆ ಇದ್ದು ಕೆಲಸ ಮಾಡುತ್ತಾರೆ ಎಂದು ಸಚಿವ ಪ್ರಭು ಚವ್ಹಾಣ್‌ ಅವರ ಗುಣಗಾನವನ್ನು ಸಿಎಂ ಬೊಮ್ಮಾಯಿ ಮಾಡಿದರು.