* ಸಿಎಂ ಬದಲಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ* ಯಡಿಯೂರಪ್ಪ ಸಮರ್ಥ, ಪ್ರಶ್ನಾತೀತ ನಾಯಕ: ಡಾ. ಸಂಗನಬಸವ ಶ್ರೀ* ದಲಿತ ಸಿಎಂ ಎಂದು ವಿಚಾರ ಬಂದಾಗ ಕಾರಜೋಳರನ್ನು ಮುಖ್ಯಮಂತ್ರಿ ಮಾಡಲಿ 

ಹೊಸಪೇಟೆ(ಜು.22): ಬಿ.ಎಸ್‌. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಶ್ರೀ ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿದರೆ ರಾಜ್ಯದಲ್ಲಿ ಪಕ್ಷ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಪ್ರಶ್ನಾತೀತ ಹಾಗೂ ಸಮರ್ಥ ನಾಯಕರು. ಅವರ ಪರಿಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಹೈಕಮಾಂಡ್‌ ಅವರಿಗೆ ಬೆಂಬಲ ನೀಡಲಿಲ್ಲ. ಈ ಕಾರಣದಿಂದ ಇಂದು ಈ ಪರಿಸ್ಥಿತಿ ಉದ್ಭವಿಸಿದೆ ಎಂದರು.

ನಾಯಕತ್ವ ಬದಲಾವಣೆಯ ಮಧ್ಯೆ ಸಚಿವ ಸಂಪುಟ ಸಭೆ: ಮೌನ ಮುರಿತಾರಾ ಬಿಎಸ್‌ವೈ..?

ಸಮಾನತೆ ನಾಯಕ:

ಯಡಿಯೂರಪ್ಪನವರು ವೀರಶೈವ ಲಿಂಗಾಯತ ನಾಯಕ ಎಂದು ನಾವು ಬೆಂಬಲ ನೀಡುತ್ತಿಲ್ಲ. ಅವರು ಎಲ್ಲ ಧರ್ಮ, ಸಮುದಾಯವನ್ನು ಸಮಾನವಾಗಿ ಕಾಣುವಂತವರು. ಅವರಿಗೆ ಜನಪರ ಕಾಳಜಿ ಇದೆ. ಅವರನ್ನು ಬಿಟ್ಟು ಬೇರೆ ಯಾರನ್ನೂ ಸಿಎಂ ಮಾಡಿದರೂ ನಾವು ಒಪ್ಪುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ ಶ್ರೀಗಳು, ಮುಂದಿನ ಪರಿಸ್ಥಿತಿಯಲ್ಲಿ ದಲಿತ ಸಿಎಂ ಎಂದು ವಿಚಾರ ಬಂದಾಗ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದರು.

ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಉಪ್ಪಿನ ಬಸವಲಿಂಗ ದೇವರು, ದರೂರು ರಕ್ತ ಮಠದ ಕೊಟ್ಟೂರು ದೇಶಿಕರು, ವೀರಶೈವ ಸಮಾಜದ ಮುಖಂಡರಾದ ಶರಣುಸ್ವಾಮಿ, ಸಾಲಿ ಸಿದ್ದಯ್ಯ ಸ್ವಾಮಿ, ಅಶ್ವಿನ್‌ ಕೊತ್ತಂಬರಿ, ಕೆ. ರವಿಶಂಕರ್‌, ಜಿ. ನೀಲಕಂಠಗೌಡ, ಮಾಂತೇಶ್‌, ವಿಜಯ ಸಿಂಧಗಿ ಹಾಗೂ ಡಾ. ಗುರು ಬಸವರಾಜ ಮತ್ತಿತರರಿದ್ದರು.