ದೇಶದ ನಿಜವಾದ ಪ್ರಜೆಗಳು ಯಾರು ಎಂಬುದನ್ನು ಗುರುತಿಸುವುದಕ್ಕೆ ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಯಾಗಬೇಕು ಎಂದು ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರೋಧಿಗಳು ಹೇಳುತ್ತಿದ್ದಾರೆ.

ಉಡುಪಿ(ಫೆ.05): ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕೇಂದ್ರ ಬಿಜೆಪಿ ಸರ್ಕಾರ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಈ ದೇಶದ ನಿಜವಾದ ಪ್ರಜೆಗಳು ಯಾರು ಎಂಬುದನ್ನು ಗುರುತಿಸುವುದಕ್ಕೆ ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಯಾಗಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಸಂಚಾಲಕ ವಾಮನ ಮೇಶ್ರಾಮ್‌ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ನಗರದ ಪುರಭವನದಲ್ಲಿ ನಡೆದ ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪರಿವರ್ತನಾ ಯಾತ್ರೆ’ಯ ಉಡುಪಿ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಗಳು ಒಳಒಪ್ಪಂದ ಮಾಡಿಕೊಂಡು ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳನ್ನೇ ತಿರುಚಿವೆ. ಇದು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ ಎಂದ ಅವರು, ಚುನಾವಣಾ ಅಕ್ರಮ ನಿಲ್ಲಬೇಕಾದರೆ ಇವಿಎಂ ಬಳಕೆ ನಿಲ್ಲಬೇಕು, ಮೊದಲಿನಂತೆ ಬ್ಯಾಲೆಟ್‌ ಪೇಪರ್‌ ಬಳಕೆ ಮತ್ತೆ ಜಾರಿಯಾಗಬೇಕು ಎಂದವರು ಆಗ್ರಹಿಸಿದ್ದಾರೆ.

ಸಿಎಎ ಹೋರಾಟಕ್ಕೆ 120 ಕೋಟಿ ಹಣ: PFI ಸದಸ್ಯರು ನಿರುತ್ತರ!

ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಅಧ್ಯಕ್ಷ ಅಬ್ದುಲ್‌ ಹಮೀದ್‌ ಅಝರಿ ಮಾತನಾಡಿ, ಇಂದು ದೇಶದಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ಮಾತ್ರ ಹೋರಾಟವಲ್ಲ, ಆರ್‌ಎಸ್‌ಎಸ್‌ ಸಿದ್ಧಾಂತಗಳ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

ಕ.ದ.ಸಂ.ಸ. (ಭೀಮಘರ್ಜನೆ) ರಾಜ್ಯ ಸಂಚಾಲಕ ಉದಯಕುಮಾರ್‌ ತಲ್ಲೂರು ಮಾತನಾಡಿ, ದಲಿತರು ಸ್ವಾವಲಂಬಿಗಳಾಗಬೇಕು. ಬಿಜೆಪಿಯವರು ಅಂಬೇಡ್ಕರ್‌ ಸಂವಿಧಾನವನ್ನು ಮನು ಸಂವಿಧಾನವಾಗಿ ಬದಲಿಸಲು ಹೊರಟಿದ್ದಾರೆ. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲದಿದ್ದಲ್ಲಿ ಅವರು ದೇಶಬಿಟ್ಟು ಹೋಗಲಿ ಎಂದಿದ್ದಾರೆ.

ಬಜೆಟ್ ಪೂರ್ವ ಸಭೆ: ಬೆಂಗಳೂರು ಅಭಿವೃದ್ಧಿಗೆ ಪ್ಲಾನಿಂಗ್ ಏನು..?

ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ರಾಷ್ಟ್ರೀಯ ಮೂಲನಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ನಿಶಾ ಮೇಶ್ರಾಮ್, ನಸೀಮಾ ಫಾತಿಮಾ, ಅಬ್ದುಲ್‌ ಅಜೀಜ್‌ ಉದ್ಯಾವರ ಮುಂತಾದವರಿದ್ದರು.