ಮಂಗಳೂರಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ| ಕ್ರೀಡಾ ಸಾಧಕರಿಗೆ ಗ್ರೇಸ್‌ ಅಂಕ ನೀಡಲು ಚಿಂತನೆ| ದೈನಂದಿನ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ|

ಮಂಗಳೂರು: (ಸೆ.18) ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯಲ್ಲಿ ಸತತವಾಗಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred


ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತಾನಾಡಿದ ಅವರು, ಯುವ ಜನತೆ ಸದೃಢವಾದರೆ ದೇಶ ಸದೃಢವಾಗುತ್ತದೆ. ಯಾರು ಕ್ರೀಡೆಯಲ್ಲಿ ಭಾಗವಹಿಸುತ್ತಾರೆ, ಯಾರು ಕ್ರೀಡೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸುತ್ತಾರೆ ಅಂತಹವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂಬುದಕ್ಕೆ ಬೇಕಾದಷ್ಟು ಉದಾಹರಣೆಗಳು ಇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ. ಉತ್ತಮ ಸಂಘಟನೆಯಾಗುವ ಇಂತಹ ಕ್ರೀಡಾಕೂಟಗಳ ಪ್ರಯೋಜನವನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ದೇಶದ ಹೆಸರನ್ನು ಉತ್ತುಂಗಕ್ಕೇರಿಸುವ ಕಾರ್ಯವಾಗಬೇಕು ಎಂದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್‌ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್‌ ಕಾರ್ಯಾಧ್ಯಕ್ಷ ರತನ್‌ ಶೆಟ್ಟಿ, ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿಗಳಾದ ಮಂಗಳೂರು ವಿಭಾಗದ ಲಿಲ್ಲಿ ಪಾಯಿಸ್‌, ಬೆಳ್ತಂಗಡಿ ವಿಭಾಗದ ಪ್ರಭಾಕರ, ಪುತ್ತೂರು ವಿಭಾಗದ ಮಾಮಚ್ಚನ್‌, ಬಂಟ್ವಾಳ ವಿಭಾಗದ ನವೀನ್‌, ಸುಳ್ಯ ವಿಭಾಗದ ದೇವರಾಜ್‌ ಮುತ್ಲಾಜೆ ಸೇರಿದಂತೆ ಮಟ್ಟಿತರು ಉಪಸ್ಥಿತರಿದ್ದರು.