ರಾಸಲೀಲೆ ಸಿಡಿ ಕೇಸ್: ಪೊಲೀಸ್ ಠಾಣೆಗೆ ದಿನೇಶ್ ದಿಢೀರ್ ಹಾಜರ್..!
ಮಾಧ್ಯಮಗಳ ಕಣ್ತಪ್ಪಿಸಿ ಠಾಣೆಗೆ ಹಾಜರು| ಪೊಲೀಸರು ದೂರು ವಾಪಸಿಗೆ ಒಪ್ತಾರಾ?| ಎರಡು ದಿನಗಳ ಹಿಂದೆ ತಮ್ಮ ವಕೀಲರ ಮೂಲಕ ದೂರು ವಾಪಸ್ ಪಡೆಯುವ ಬಗ್ಗೆ ಖುದ್ದು ಪತ್ರ ಕಳುಹಿಸಿದ್ದ ದಿನೇಶ್ ಕಲ್ಲಹಳ್ಳಿ| ಸದ್ಯಕ್ಕೆ ದೂರು ಹಿಂಪಡೆಯಲು ಸಾಧ್ಯವಿಲ್ಲ: ಪೊಲೀಸ್ ಮೂಲಗಳು|
ಬೆಂಗಳೂರು(ಮಾ.10): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದ್ದಾರೆ ಎನ್ನಲಾದ ಸಿ.ಡಿ. ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮಂಗಳವಾರ ರಾತ್ರಿ ಮಾಧ್ಯಮಗಳ ಕಣ್ಣು ತಪ್ಪಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿಢೀರ್ ಹಾಜರಾಗಿದ್ದಾರೆ.
ಎರಡು ದಿನಗಳ ಹಿಂದೆ ತಮ್ಮ ವಕೀಲರ ಮೂಲಕ ದೂರು ವಾಪಸ್ ಪಡೆಯುವ ಬಗ್ಗೆ ಕಳುಹಿಸಿದ್ದ ಪತ್ರ ಖುದ್ದು ನಾನೇ ಕೈಬರಹದಲ್ಲಿ ಬರೆದಿದ್ದೇನೆ. ಹೀಗಾಗಿ ಈ ಹಿಂದೆ ಕೊಟ್ಟಿದ್ದ ದೂರನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಸಲೀಲೆ ಕೇಸ್ : ರಮೇಶ್ ಸಿಡಿ ಸಿಕ್ಕ ಬಗ್ಗೆ ದಿನೇಶ್ ರಿಯಾಕ್ಷನ್
ಮಾಜಿ ಸಚಿವರ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರಿನ ಸಂಬಂಧ ತಮ್ಮ ವಕೀಲರ ಮೂಲಕ ಕಬ್ಬನ್ ಪಾರ್ಕ್ ಠಾಣೆಗೆ ಪತ್ರ ಕಳುಹಿಸಿ ದೂರು ಹಿಂಪಡೆಯುತ್ತಿರುವುದಾಗಿ ದಿನೇಶ್ ಕಲ್ಲಹಳ್ಳಿ ಹೇಳಿದ್ದರು. ಈ ವೇಳೆ ಕ್ರಿಮಿನಲ್ ಕೇಸ್ ಆಗಿರುವ ಕಾರಣ ದೂರುದಾರರೇ ಖುದ್ದು ಠಾಣೆಗೆ ಬರುವಂತೆ ಇನ್ಸ್ಪೆಕ್ಟರ್ ಬಿ.ಮಾರುತಿ ಅವರು ಕಲ್ಲಹಳ್ಳಿ ಪರ ವಕೀಲರಿಗೆ ತಿಳಿಸಿದ್ದರು. ಹೀಗಾಗಿ ದಿನೇಶ್ ಕಲ್ಲಹಳ್ಳಿ ಮಂಗಳವಾರ ಖುದ್ದು ಠಾಣೆಗೆ ಬಂದು ದೂರು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಕಾನೂನು ಪ್ರಕಾರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಪೊಲೀಸ್ ಮೂಲಗಳ ಪ್ರಕಾರ, ಏಕಾಏಕಿ ಈ ರೀತಿ ದೂರು ಹಿಂಪಡೆಯಲು ಸಾಧ್ಯವಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಅಲ್ಲದೆ, ಈಗಾಗಲೇ ದಿನೇಶ್ ಕಲ್ಲಹಳ್ಳಿ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ದೂರು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.