ರಾಸಲೀಲೆ ಕೇಸ್ : ರಮೇಶ್ ಸಿಡಿ ಸಿಕ್ಕ ಬಗ್ಗೆ ದಿನೇಶ್ ರಿಯಾಕ್ಷನ್
ರಮೇಶ್ ಜಾರಕಿಹೊಳಿ ರಾಸಲೀಲೆ ನಡೆದ ಹೋಟೆಲ್ನೊಂದಿಗೆ ತಮಗಿರುವ ಸಂಬಂಧ, ಆ ಸಿಡಿ ತಮಗೆ ಹೇಗೆ ಸಿಕ್ಕಿತು ಎಂಬುದೆಲ್ಲವೂ ಪೊಲೀಸ್ ತನಿಖೆಯ ಭಾಗವಾಗಿರುವ ಕಾರಣ ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದರು.
ರಾಮನಗರ (ಮಾ.05): ರಮೇಶ್ ಜಾರಕಿಹೊಳಿ ರಾಸಲೀಲೆ ನಡೆದ ಹೋಟೆಲ್ನೊಂದಿಗೆ ತಮಗಿರುವ ಸಂಬಂಧ, ಆ ಸಿಡಿ ತಮಗೆ ಹೇಗೆ ಸಿಕ್ಕಿತು ಎಂಬುದೆಲ್ಲವೂ ಪೊಲೀಸ್ ತನಿಖೆಯ ಭಾಗವಾಗಿರುವ ಕಾರಣ ಏನನ್ನೂ ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ಪ್ರಕರಣ ಕುರಿತಂತೆ ಪೊಲೀಸ್ ತನಿಖೆ ನಡೆಯುತ್ತಿರುವ ಕಾರಣ ತನಿಖೆಗೆ ತೊಡಕಾಗುವಂತಹ ಯಾವುದೇ ಅಂಶವನ್ನು ಬಹಿರಂಗ ಪಡಿಸಲು ಸಾಧ್ಯವಾಗುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದರು.
ಬೆಂಗಳೂರಿನ ರಾಮಕೃಷ್ಣ ಹೋಟೆಲ್ನ ಪಾರ್ಕಿಂಗ್ನಲ್ಲಿ ಸಿಡಿ ಎಕ್ಸ್ಚೆಂಚ್ ಆಗಿರುವ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಅದು ಪೊಲೀಸ್ ತನಿಖೆಯ ಭಾಗವಾಗಿರುವ ಕಾರಣ ಗೌಪ್ಯವಾಗಿ ಇಡಬೇಕಾಗುತ್ತದೆ ಎಂದು ಉತ್ತರಿಸಿದರು.
'ಜಾರಕಿಹೊಳಿ ರಾಸಲೀಲೆಯಲ್ಲಿ ದೊಡ್ಡ ದೊಡ್ಡವರ ಕೈವಾಡ, 5 ಕೋಟಿ ಡೀಲ್ ' ...
ಸಿಸಿಬಿ ಪೊಲೀಸರು ಹೋಟೆಲ್ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಅದು ಕೂಡ ತನಿಖೆಯ ಭಾಗವಾಗಿದೆ. ಹೋಟೆಲ್ಗು ನನಗೂ ಏನು ಸಂಬಂಧ, ಆ ಸಿಡಿ ಎಲ್ಲಿ ಸಿಕ್ಕಿತು ಎಂಬುದೆಲ್ಲವನ್ನು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂದರು.
9ಕ್ಕೆ ವಿಚಾರಣೆ : ಕನಕಪುರ ತಾಲೂಕು ಕಲ್ಲಹಳ್ಳಿ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿರುವ ದಿನೇಶ್ ಅವರಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಮಾರುತಿ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಕಲ್ಲಹಳ್ಳಿ ಗ್ರಾಮದ ಮನೆಯಲ್ಲಿಯೇ ಉಳಿದುಕೊಂಡಿದ್ದ ದಿನೇಶ್ ಅವರು ದೂರವಾಣಿ ಮೂಲಕ ವಕೀಲರೊಂದಿಗೆ ಚರ್ಚೆ ನಡೆಸಿದರು. ಆನಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗದೆ, ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವುದಾಗಿ ಬರೆದಿರುವ ಪತ್ರವನ್ನು ವಾಟ್ಸಪ್ ಮೂಲಕ ಸಬ್ ಇನ್ಸ್ಪೆಕ್ಟರ್ಗೆ ರವಾನಿಸಿದ್ದಾರೆ.