Dharwad News: ಅಪಘಾತಕ್ಕೀಡಾದ ದಂಪತಿಯನ್ನು ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ತಹಶೀಲ್ದಾರ್
ತಹಶೀಲ್ದಾರ್ ಸಂತೋಷ್ ಬಿರಾದರ್ ಮತ್ತು ಅವರ ಚಾಲಕ ರಾಜು ಸೇರಿ ತಮ್ಮ ವಾಹದಲ್ಲಿ ದಂಪತಿಗಳನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಧಾರವಾಡ (ಜೂ. 16) : ಅಪಘಾತಕ್ಕೀಡಾದ ದಂಪತಿಗಳನ್ನು ತಹಶಿಲ್ದಾರ ತಮ್ಮ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಬಳಿ ಸವದತ್ತಿ ಪಟ್ಟಣದ ಮಂಜುನಾಥ ಹಾಗೂ ಅವರ ಪತ್ನಿ ಧಾರವಾಡದಿಂದ ಸವದತ್ತಿಗೆ ಹೋಗುವಾಗ ಹೊಲದಲ್ಲಿ ಬಿದ್ದಿರುವ ಗೊಬ್ಬರ ಚೀಲ ಗಾಳಿಗೆ ಹಾರಿ ಬೈಕ್ ಚಕ್ರಕ್ಕೆ ಸಿಲುಕಿದೆ. ಹೀಗಾಗಿ ಬೈಕ್ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಬಿದ್ದು, ದಂಪತಿಗೆ ತೀವ್ರ ಗಾಯಗಳಾಗಿವೆ.
ಈ ವೇಳೆ ಧಾರವಾಡ ತಹಶಿಲ್ದಾರ ಸಂತೋಷ್ ಬಿರಾದರ್ ದಂಪತಿಗಳನ್ನು ತಮ್ಮ ಸ್ವಂತ ವಾಹನ, ಅಂದರೆ ಸರಕಾರಿ ವಾಹನದಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ತಹಶೀಲ್ದಾರ್ ಸಂತೋಷ್ ಬಿರಾದರ್ ಮತ್ತು ಅವರ ಚಾಲಕ ರಾಜು ಸೇರಿ ತಮ್ಮ ವಾಹದಲ್ಲಿ ದಂಪತಿಗಳನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ಖಿನ್ನತೆ: ರೈಫಲ್ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!
ಇನ್ನು ಸರಕಾರಿ ವಾಹನಗಳನ್ನ ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡುವ ಅಧಿಕಾರಿಗಳಿರುವ ಕಾಲದಲ್ಲಿ, ತಹಶೀಲ್ದಾರ್ ಬೈಕ್ ಅಪಘಾತಕ್ಕೀಡಾಗಿ ಗಾಯಗೊಂಡು ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದ ದಂಪತಿಗಳಿಗೆ ಸಹಾಯ ಮಾಡಿ ಮಾದರಿಯಾಗಿದ್ದಾರೆ. ಸದ್ಯ ಇಬ್ಬರನ್ನೂ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ತಹಶೀಲ್ದಾರ್ ಸಂತೋಷ್ ಬಿರಾದರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.