ಧರ್ಮಸ್ಥಳದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ನಡೆಸಿದ ತನಿಖಾ ಕಾರ್ಯಾಚರಣೆಯಲ್ಲಿ ದುಡಿದ ಕಾರ್ಮಿಕರು ಮತ್ತು ಜೆಸಿಬಿ ಮಾಲೀಕರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಕಾರ್ಮಿಕರ ಕೂಲಿ, ಜೆಸಿಬಿ ಬಾಡಿಗೆ ಸೇರಿದಂತೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಉಳಿದಿದೆ.
ಬೆಳ್ತಂಗಡಿ (ಮೇ.13): ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರಿಗೆ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಎಸ್ಐಟಿ ತನಿಖೆ ಶುರುವಾಗಿ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧ ನಡೆಸಲಾಗಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. ಒಟ್ಟು ₹71,500 ಬಿಲ್ ಮಾಡಿ ಕೊಟ್ಟಿದ್ದರು. ಆದರೆ, ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.
ದಿನ ನಿತ್ಯ 10-12 ಕಾರ್ಮಿಕರು ಎಸ್ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಕೂಲಿ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು ₹80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.
ಎಸ್ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆ ತಂದ ವಾಹನ ಬಾಡಿಗೆ ಹೀಗೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಕೊಡಲು ಬಾಕಿ ಇದೆ.


