ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದ.ಕ. ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ 28 ಸಂಘಟನೆಗಳಿಂದ ಬುಧವಾರ ಶಾಂತಿಯುತವಾಗಿ ಪ್ರಬಲ ಕಿಚ್ಚನ್ನು ಹಚ್ಚಿತು. ಸಮಾವೇಶದ ಹಕ್ಕೊತ್ತಾಯಗಳು ಏನೇನು..? ಬೇಡಿಕೆಗಳೇನೇನು..? ಇಲ್ಲಿ ಓದಿ.

ಮಂಗಳೂರು(ಜ.16): ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದ.ಕ. ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ 28 ಸಂಘಟನೆಗಳಿಂದ ಬುಧವಾರ ಶಾಂತಿಯುತವಾಗಿ ಪ್ರಬಲ ಕಿಚ್ಚನ್ನು ಹಚ್ಚಿತು. ಈ ಸಮಾವೇಶಕ್ಕೆ ಕಾಂಗ್ರೆಸ್‌ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರು ಪ್ರತಿಭಟನಾ ಸಭೆ: ಹೀಗಿದೆ ಪೊಲೀಸ್ ಭದ್ರತೆ..!

ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಈ ಬೃಹತ್‌ ಪ್ರತಿಭಟನೆಯಲ್ಲಿ ಈ ಕಾಯ್ದೆಗಳು ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದ್ದು, ಇದರ ವಿರುದ್ಧ ಪ್ರಬಲ ಜನಾಂದೋಲನವನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸಮಾವೇಶದಲ್ಲಿ ನೀಡಲಾಯಿತು. ಇದೇ ವೇಳೆ ಸೇರಿದ ಲಕ್ಷಕ್ಕೂ ಅಧಿಕ ಜನಸ್ತೋಮ, ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಸ್ವಾತಂತ್ರ್ಯಕ್ಕಾಗಿ ‘ಆಜಾದಿ’ ಘೋಷಣೆಯನ್ನು ಮೊಳಗಿಸಿದ್ದಾರೆ.

ಸಮಾವೇಶದ ಹಕ್ಕೊತ್ತಾಯಗಳು

1. ಸಂವಿಧಾನ ವಿರೋಧಿ, ಜನವಿರೋಧಿ ಪೌರತ್ವ ತಿದ್ದುಪಡಿಯ ಮೂರೂ ಕಾಯ್ದೆಗಳು ರದ್ದಾಗಬೇಕು.

2. ಎನ್‌ಆರ್‌ಸಿ ಭಾಗವಾಗಿಯೇ ನಡೆಯುತ್ತಿರುವ ಎನ್‌ಪಿಆರ್‌ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ಕೂಡಲೆ ರದ್ದುಗೊಳಿಸಬೇಕು.

3. ಧರ್ಮಾಧಾರಿತ ತಾರತಮ್ಯ ಮಾಡುವ ಸಿಎಎ ಬದಲಿಗೆ ಎಲ್ಲ ಬಗೆಯ ಧಾರ್ಮಿಕ ಹಾಗೂ ಇತರ ದಮನಗಳಿಗೆ ತುತ್ತಾಗಿರುವ ಎಲ್ಲ ನಿರಾಶ್ರಿತರಿಗೂ ತಾರತಮ್ಯವಿಲ್ಲದೆ ಆಶ್ರಯ ಕೊಡುವ ವಲಸೆ ನೀತಿ ಜಾರಿಯಾಗಬೇಕು.

4. ವಿಶ್ವಸಂಸ್ಥೆಯ 1948ರ ವಲಸೆ ಸಂಬಂಧಿ ಸನ್ನದನ್ನು ಭಾರತ ಸರ್ಕಾರ ಕೂಡಲೆ ಅನುಮೋದಿಸಬೇಕು.

5. 2019ರ ಡಿಸೆಂಬರ್‌ 19ರಂದು ಮಂಗಳೂರಿನಲ್ಲಿ ಅನಗತ್ಯ ಗೋಲಿಬಾರ್‌ ನಡೆಸಿದ ಪೊಲೀಸ್‌ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

6. ಗೋಲಿಬಾರ್‌ನಲ್ಲಿ ಮೃತರಾದ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಕುದ್ರೋಳಿ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ತಲಾ 10 ಲಕ್ಷ ರು. ಪರಿಹಾರ ಹಿಂಪಡೆದದ್ದು ಖಂಡನಾರ್ಹ. ಕೂಡಲೆ ಈ ಪರಿಹಾರ ಬಿಡುಗಡೆಗೊಳಿಸಬೇಕು.

ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯ ಯಾರು?

7. ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.

8. ಗೋಲಿಬಾರ್‌ ಮತ್ತು ಲಾಠಿಚಾಜ್‌ರ್‍ನಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದವರ ಆಸ್ಪತ್ರೆ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು.

9. ಡಿ.19ರಂದು ನಡೆದ ಘಟನೆಗಳಿಗೆ ಸಂಬಂಧಿಸಿ ಅಮಾಯಕರ ಮೇಲೆ ಹಾಕಲಾಗಿರುವ ಕೇಸುಗಳನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು.

10. ಭಾರತದ ಜನರನ್ನು ಮತ್ತೊಮ್ಮೆ ಧಾರ್ಮಿಕವಾಗಿ ವಿಭಜನೆ ಮಾಡಲು ನಡೆಸುತ್ತಿರುವ ಎಲ್ಲ ಹುನ್ನಾರಗಳನ್ನು ದೇಶದ ಜನರೆಲ್ಲರೂ ಒಕ್ಕೊರಲಿನಿಂದ ವಿಫಲಗೊಳಿಸಬೇಕು.