ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗದೆ ತಾಲೂಕಿನಲ್ಲಿ ಬರದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ತುರುವೇಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ.

 ತುರುವೇಕೆರೆ : ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗದೆ ತಾಲೂಕಿನಲ್ಲಿ ಬರದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ತುರುವೇಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ರೈತಾಪಿಗಳು ಬೆಳೆದಿದ್ದ ಬೆಳೆಗಳು ಮೊಳಕೆಯೊಡೆಯದೇ ಬರಡಾಗಿವೆ. ಭೂಮಿಗೆ ಬಿತ್ತಿದ್ದ ಬೆಳೆಗಳು ರೈತರ ಕೈಗೆ ಸಿಗದಂತಾಗಿದೆ. ರೈತಾಪಿಗಳು ಬೆಳೆಯಲು ಹಾಕಿದ್ದ ಬೀಜದ ಹಣವೂ ಸಿಗದ ಪರಿಸ್ಥಿತಿ ಇದೆ. ಹಾಗಾಗಿ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತಾಪಿಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರ ತಮ್ಮ ಹೋರಾಟಕ್ಕೆ ಮಣಿದು ಮೊದಲ ಹಂತವಾಗಿ 1505 ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಸಾವಿರ ಮನೆಗಳನ್ನು ಮಂಜೂರು ಮಾಡುವ ಭರವಸೆಯನ್ನು ವಸತಿ ಸಚಿವ ಜಮೀರ್‌ ಅಹಮದ್‌ ನೀಡಿದ್ದಾರೆಂದು ತಿಳಿಸಿದ ಕೃಷ್ಣಪ್ಪ ವಸತಿ ಸಚಿವ ಜಮೀರ್‌ ಅಹಮದ್‌ಗೆ ಧನ್ಯವಾದ ತಿಳಿಸಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲವಿದೆ. ಬಹುಪಾಲು ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಹಾಗಾಗಿ ಕೂಡಲೇ ಹೇಮಾವತಿ ನಾಲಾ ಅಧಿಕಾರಿಗಳು ತಾಲೂಕಿನ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಬೇಕು. ಹೇಮಾವತಿ ಅಧಿಕಾರಿಗಳು ಕೇವಲ ಕುಣಿಗಲ್‌, ನಾಗಮಂಗಲ ಕ್ಷೇತ್ರಕ್ಕೆ ಅಧಿಕಾರಿಗಳಲ್ಲ. ನಮ್ಮ ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ಹರಿಸಬೇಕು. ಇಲ್ಲವಾದರೆ ನಾನೇ ಎಲ್ಲ ನಾಲೆಗಳ ಬಳಿ ಓಡಾಗಿ ನೀರು ತುಂಬಿಸುತ್ತೇನೆ ಎಂದು ಶಾಸಕ ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಜೆಡಿಎಸ್‌ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್‌, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬೂವನಹಳ್ಳಿದೇವರಾಜು, ಹೆಡಗಿಹಳ್ಳಿ ವಿಶ್ವನಾಥ್‌, ಬಸವರಾಜು, ತಿಮ್ಮೇಗೌಡ, ಮಂಜಪ್ಪ, ಶಂಕರೇಗೌಡ, ಶಶಿ, ದೇವರಾಜು ಸೇರಿದಂತೆ ಇತರರು ಇದ್ದರು.