ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲಿ. ಅದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು. ನಮಗೆ ನ್ಯಾಯಾಂಗದಲ್ಲಿ‌ ನಂಬಿಕೆ ಇದೆ. ನಾವು ದಾವಣಗೆರೆಗೆ ತೆರಳಿ ದೇವರ ದರ್ಶನ ತಗೊಂಡು ಬಂದ್ವಿ. ಮಗುವಿನ‌ ಮುಖ ನೋಡೋಕೆ ಹೋಗಿದ್ವಿ, ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ: ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ  

ಚಿತ್ರದುರ್ಗ(ಅ.30): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ ವೈದ್ಯಕೀಯ ಚಿಕಿತ್ಸೆ ಬೇಲ್‌ ನೀಡಿದೆ. ಈ ವಿಚಾರ ಕಾನೂನು, ನ್ಯಾಯಾಂಗದ ವಿಚಾರವಾಗಿದೆ. ನಾವು ಈ ಕುರಿತು ಪ್ರತಿಕ್ರಿಯೆ ನೀಡಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸರಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ. ಈ‌ ಮೂಲಕ ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದು ನಮ್ಮ ಉದ್ದೇಶ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಅವರು, ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲಿ. ಅದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು. ನಮಗೆ ನ್ಯಾಯಾಂಗದಲ್ಲಿ‌ ನಂಬಿಕೆ ಇದೆ. ನಾವು ದಾವಣಗೆರೆಗೆ ತೆರಳಿ ದೇವರ ದರ್ಶನ ತಗೊಂಡು ಬಂದ್ವಿ. ಮಗುವಿನ‌ ಮುಖ ನೋಡೋಕೆ ಹೋಗಿದ್ವಿ, ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. 

ಸಧ್ಯ ತಾಯಿ ಮಗುವಿನ ಆರೋಗ್ಯ ಸುಧಾರಿಸಿದೆ. ವೈದ್ಯರು ಕೊಟ್ಟ ಸಲಹೆಯಂತೆ ಅವರ ತಂದೆ ತಾಯಿ ಜೋಪಾನ‌ ಮಾಡ್ತಿದ್ದಾರೆ. ಮಗುವಿಗೆ ಲಿಂಗಧಾರಣೆ, ನಾಮಕರಣದಂಥ ಕಾರ್ಯಕ್ರಮಗಳು ಆಗಬೇಕು. ನಾಮಕರಣ ಬಗ್ಗೆ ನಾವಿನ್ನೂ ನಿರ್ಧಾರ ಮಾಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು ನಮ್ಮ‌ ಗುರಿ ಎಂದು ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿದ್ದಾರೆ.