Asianet Suvarna News Asianet Suvarna News

ಯಾದಗಿರಿ: ಕಲುಷಿತ ನೀರು ಸೇವನೆ, ಮೃತರ ಸಂಖ್ಯೆ 3ಕ್ಕೇರಿಕೆ

ವಾಂತಿಭೇದಿ ಪ್ರಕರಣದಲ್ಲಿ ಈಗಾಗಲೇ 58ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮತೊರ್ವ ಮಹಿಳೆ ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವುನ್ನಪ್ಪಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮೂರಕ್ಕೇರಿದೆ.

Death Toll Rises to 3  of Drinking Contaminated Water in Yadgir grg
Author
First Published Feb 17, 2023, 10:04 AM IST

ಯಾದಗಿರಿ(ಫೆ.17):  ಜಿಲ್ಲೆಯ ಗಡಿ ಭಾಗದ ಗುರುಮಠಕಲ್‌ ತಾಲೂಕಿನ ಅನಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ವಾಂತಿಭೇದಿ ಪ್ರಕರಣದಲ್ಲಿ ಈಗಾಗಲೇ 58ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮತೊರ್ವ ಮಹಿಳೆ ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವುನ್ನಪ್ಪಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮೂರಕ್ಕೇರಿದೆ. ಬುಧವಾರ ನಸುಕಿನ ಜಾವ ಸಾವಿತ್ರಮ್ಮ (25), ಬುಧವಾರ ಬೆಳಗ್ಗೆ ಸಾಯಮ್ಮ (72) ಹಾಗೂ ಬುಧವಾರ ರಾತ್ರಿ ನರಸಮ್ಮ (71) ಮೃತಪಟ್ಟಿದ್ದಾರೆ. ಗುರುವಾರ ಬೆ.22 ಜನರು ವಾಂತಿ ಭೇದಿಯಿಂದ ಚಿಕಿತ್ಸೆಗೆ ಒಳಗಾಗಿದ್ದಾರೆ. ವಾಂತಿ-ಭೇದಿ ಪ್ರಕರಣಗಳು ಮುಂದುವರಿದಿದ್ದು, ಅನಪೂರ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.

ಒಟ್ಟು ಇಲ್ಲಿಯವರೆಗೆ 66 ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು, ಅದರಲ್ಲಿ 28 ಮಕ್ಕಳು, 35 ವಯಸ್ಕರು. ಬುಧವಾರ 22 ಕೇಸುಗಳ ಬೆಳಕಿಗೆ ಬಂದಿವೆ. ಜಿಲ್ಲಾಸ್ಪತ್ರೆಯಲ್ಲಿ 33 ರೋಗಿಗಳು ದಾಖಲಾಗಿದ್ದು, ಅನಪುರ ತಾತ್ಕಾಲಿಕ ಆಸ್ಪತ್ರೆಯಲ್ಲಿ 10 ಜನ, ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ 7 ಜನ, ತೆಲಂಗಾಣದ ನಾರಾಯಣಪೇಟ್‌ನ ಆಸ್ಪತ್ರೆಯಲ್ಲಿ 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

YADGIR: ಜೋಳ ತೆನೆ ಬಿಡುವ ಸಿಹಿತಿನಿ ತಿಂದು ಏಂಜಾಯ್ ಮಾಡಿದ ಯುವಕರು

ಅನಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ:

ಅನಪೂರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು ಚಿಕಿತ್ಸೆ ಕೇಂದ್ರದಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಯುದ್ಧದ ರೀತಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಅರೋಗ್ಯ ಇಲಾಖೆ ಮುತುವರ್ಜಿ ವಹಿಸಿ ತ್ವರಿತವಾಗಿ ಚಿಕಿತ್ಸೆಗೆ ಬೇಕಾಗಿರುವ ಉಪಕರಣ ಹಾಗೂ ಔಷಧಿಗಳನ್ನು ತರಿಸಿಕೊಳ್ಳಲು ಸೂಚಿಸಿದರು.

ಗ್ರಾಮದ ಹರಿಜನವಾಡ ಬಡವಾಣೆ, ಅಗಸರ ಬಡಾವಣೆ ಹಾಗೂ ಇತರ ಬಡಾವಣೆಗಳ ಮನೆ-ಮನೆಗಳಿಗೆ ತೆರಳಿ ಜನರ ಆರೋಗ್ಯವನ್ನು ವಿಚಾರಿಸಿದರು. ಚರಂಡಿ ನೀರಿನ ಪೈಪ್‌ಲೈನ್‌ ಒಡೆದು ಹೋಗಿದೆಯಾ ಎಂಬುದನ್ನು ಎಲ್ಲ ಕಡೆ ಪರೀಶಿಲಿಸಿದರು. ನೀರಿನ ಟ್ಯಾಂಕ್‌ಗಳನ್ನು ಸಹ ಪರಿಶೀಲಿಸಿದರು. ಅಧಿಕಾರಿಗಳಿಗೆ ಗ್ರಾಮಸ್ಥರಲ್ಲಿ ಉಂಟಾದ ವಾಂತಿಭೇದಿಗೆ ಕಾರಣ ಕಂಡುಹಿಡಿಯಲು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಆರ್‌. ನಾಯಕ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಸ್‌. ಖಾದ್ರೋಳಿ ಸೇರಿ ಆರೋಗ್ಯ ಇಲಾಖೆಯವರಿದ್ದರು.

ಯಾದಗಿರಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಭೀಮಣ್ಣ ಮೇಟಿಯಿಂದ ಗಿಫ್ಟ್ ಪಾಲಿಟಿಕ್ಸ್!

ಅನಪೂರ ಗ್ರಾಮದಲ್ಲಿ ಕಲುಷಿತ ನೀರು ಅಥಾವಾ ಆಹಾರದಿಂದ ವಾಂತಿಭೇದಿ ಸಂಭವಿಸಿದೆ ಎನ್ನಬಹುದು. ಇನ್ನು ಪರಿಶೀಲಿಸುತ್ತಿದ್ದೇವೆ. ಮೊದಲು ಜನರ ಆರೋಗ್ಯ ಮತ್ತು ಚಿಕಿತ್ಸೆ ಕಡೆ ಗಮನ ಹರಿಸುತ್ತಿದ್ದೇವೆ. ಈ ಘಟನೆ ವಿವರ ಸೂಕ್ಷ್ಮವಾಗಿ ಪಡೆದುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ತಿಳಿಸಿದ್ದಾರೆ. 

ಫೆ.8ರಂದು ದರ್ಗಾದ ಜಾತ್ರೆಯಲ್ಲಿ ಮಾಂಸದ ಆಹಾರ ಸೇವನೆ ಹಾಗೂ ಸ್ಥಳದಲ್ಲೇ ನೀರು ಕುಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಂತಿಭೇದಿ ಭಯದ ವಾತಾವರಣ ಉಂಟಾಗಿದೆ ಎನ್ನಲಾಗುತ್ತಿದೆ. ಆದರೂ ಸಹ ನಮ್ಮ ಗ್ರಾಪಂ ವತಿಯಿಂದ ಅನೇಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಅಂತ ಅನಪೂರ ಗ್ರಾಪಂ ಅಧ್ಯಕ್ಷ ಗೋಪಾಲರೆಡ್ಡಿ ಹೇಳಿದ್ದಾರೆ. 

Follow Us:
Download App:
  • android
  • ios