Asianet Suvarna News Asianet Suvarna News

ಕೊರೋನಾ ಅತಂಕ: 'ಅನ್ಯ ಮಾರ್ಗದಲ್ಲಿ ಬಂದವರ ಮೇಲೆ ನಿಗಾ, ನಿರ್ಲಕ್ಷ್ಯ ವಹಿಸಿದ್ರೆ ಅಧಿಕಾರಿಗಳೇ ಹೊಣೆ'

ಗೃಹ ಪ್ರತ್ಯೇಕತೆಯಲ್ಲಿರುವ ಎಲ್ಲರ ಆರೋಗ್ಯದ ಮಾಹಿತಿ ಪ್ರತಿನಿತ್ಯ ಪಡೆಯಬೇಕು| ಕ್ವಾರಂಟೈನ್‌ ವಾಚ್‌ ತಂತ್ರಾಂಶದಲ್ಲಿ ನಿತ್ಯದ ಆರೋಗ್ಯದ ಸ್ಥಿತಿಗತಿ ಅವರ ಸೆಲ್ಫಿ ಫೋಟೋದೊಂದಿಗೆ ಅಪ್‌ಲೋಡ್‌ ಮಾಡಬೇಕು| ಹಾವೇರಿ ಜಿಲ್ಲೆಯಲ್ಲಿ 4508 ಜನರ ಪೈಕಿ 4140 ಜನ ಹೋಂ ಕ್ವಾರಂಟೈನ್‌ ಹಾಗೂ 380 ಜನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ|

DC Krishna Bajpeyi Talsk Over Coronavirus in Haveri District
Author
Bengaluru, First Published May 16, 2020, 9:24 AM IST

ಹಾವೇರಿ(ಮೇ.16): ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅನ್ಯ ಮಾರ್ಗದಿಂದ ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಿ, ಇಂತಹವರ ಮಾಹಿತಿ ಪಡೆದು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಕ್ರಮವಹಿಸಿ ಹಾಗೂ ಮನೆ ಮನೆ ಆರೋಗ್ಯ ತಪಾಸಣೆ, ಜಿಲ್ಲೆಗೆ ಬಂದವರ ಆರೋಗ್ಯ ಮಾಹಿತಿ, ಕಂಟೆನ್ಮೆಂಟ್‌ ಜೋನ್‌ಗಳ ದೈನಂದಿನ ಚಟುವಟಿಕೆಗಳನ್ನು ನಿಗದಿತ ತಂತ್ರಾಂಶದಲ್ಲಿ ಸಕಾಲದಲ್ಲಿ ಅಳವಡಿಸಲು ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಹಸೀಲ್ದಾರ್‌ಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಗೃಹ ಪ್ರತ್ಯೇಕತೆಯಲ್ಲಿರುವ ಎಲ್ಲರ ಆರೋಗ್ಯದ ಮಾಹಿತಿಯನ್ನು ಪ್ರತಿನಿತ್ಯ ಪಡೆಯಬೇಕು. ಕ್ವಾರಂಟೈನ್‌ ವಾಚ್‌ ತಂತ್ರಾಂಶದಲ್ಲಿ ನಿತ್ಯದ ಆರೋಗ್ಯದ ಸ್ಥಿತಿಗತಿಯನ್ನು ಅವರ ಸೆಲ್ಫಿ ಫೋಟೋದೊಂದಿಗೆ ಅಪ್‌ಲೋಡ್‌ ಮಾಡಬೇಕೆಂದು ತಿಳಿಸಿದರು.

ಅನಾಥ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದ‌ ಸರ್ಕಾರಿ ಅಧಿಕಾರಿ..!

ಸೇವಾ ಸಿಂಧು ನೋಂದಣಿ ಪಾಸ್‌ನೊಂದಿಗೆ ಜಿಲ್ಲೆಗೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಎಸ್‌ಒಪಿ ಮಾರ್ಗಸೂಚಿಯಂತೆ ಕ್ರಮವಹಿಸಿ. ಬೇರೆ ಮಾರ್ಗದಿಂದ ಜಿಲ್ಲೆಗೆ ಪ್ರವೇಶ ಮಾಡಿದವರ ಮಾಹಿತಿಯನ್ನು ಪಿಡಿಒಗಳ ಮೂಲಕ ಪಡೆಯಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸಿ ಇವರಿಂದ ಕೋವಿಡ್‌ ಪ್ರಕರಣಗಳು ಪತ್ತೆಯಾದಲ್ಲಿ ನೀವೇ ಜವಾಬ್ದಾರರು. ಗೋವಾದಿಂದ ಬಂದವರನ್ನು ತಪಾಸಣೆ ನಡೆಸಿ. ಈ ಪೈಕಿ ಕೋವಿಡ್‌ ಲಕ್ಷಣಗಳಿದ್ದರೆ ಕ್ವಾರಂಟೈನ್‌ಗೆ ಕಳುಹಿಸಬೇಕಾಗುತ್ತದೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವವರಿಗೆ ಉತ್ತಮ ಊಟ, ಸ್ವಚ್ಛತೆ ಕಾರ್ಯ, ಶುಚಿ ಸಂಭ್ರಮ ಕಿಟ್‌ಗಳನ್ನು ನೀಡಬೇಕು. ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಖಾಸಗಿ ನರ್ಸಿಂಗ್‌ ಹೋಂ, ಕ್ಲಿನಿಕ್‌ ಹಾಗೂ ಆಯುರ್ವೇದಿಕ್‌ ವೈದ್ಯರ ಬಳಿ ತಪಾಸಣೆಗೆ ಬಂದವರ ಮಾಹಿತಿ ಸಂಗ್ರಹಿಸಬೇಕು. ಈ ಪೈಕಿ ಜ್ವರ, ಕೆಮ್ಮು, ಶೀತ, ನೆಗಡಿ ಲಕ್ಷಣಗಳ ಕುರಿತಂತೆ ಪ್ರತಿನಿತ್ಯ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು. ಮೆಡಿಕಲ್‌ ಶಾಪ್‌ಗಳಲ್ಲಿ ಈ ರೋಗ ಲಕ್ಷಣಗಳಿಗೆ ನಿರಂತರ ಮಾತ್ರೆಗಳನ್ನು ಖರೀದಿಸಿದವರ ಮಾಹಿತಿ ಪಡೆದು ನಿಗಾವಹಿಸುವಂತೆ ಸೂಚಿಸಿದರು ಹಾಗೂ ಏಪ್ರಿಲ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಮರಣ ಹೊಂದಿದವರ ಮಾಹಿತಿ ಹಾಗೂ ಯಾವ ಕಾರಣಕ್ಕೆ ಮರಣ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಕ್ರೋಡಿಕರಿಸಿ ನೀಡುವಂತೆ ತಾಕೀತು ಮಾಡಿದರು.

ಜಿಲ್ಲೆಯ ಘೋಷಿತ ಕಂಟೆನ್ಮೆಂಟ್‌ ಬಫರ್‌ ಜೋನ್‌ ವಲಯಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಈ ವಲಯಗಳಲ್ಲಿ ವೈದ್ಯರ ಮೂಲಕ ಮನೆ ಮನೆ ಆರೋಗ್ಯ ತಪಾಸಣೆ ಚಟುವಟಿಕೆಗಳ ಅಂಕಿ-ಅಂಶಗಳನ್ನು ಕಾಲಕಾಲಕ್ಕೆ ಕಂಟೆನ್ಮೆಂಟ್‌ ಜೋನ್‌ ಆ್ಯಪ್‌ ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಮನೆ ಮನೆ ಆರೋಗ್ಯ ಸರ್ವೇ ಕುರಿತಂತೆ ಮಾಹಿತಿಯನ್ನು ಹೆಲ್ತ್‌ ವಾಚ್‌ ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ. ಈ ತಂತ್ರಾಂಶದ ಹೊಸ ವರ್ಷನ್‌ ಬಿಡುಗಡೆಗೊಳಿಸಿದ್ದು, ಎಲ್ಲ ಬಿಎಲ್‌ಒಗಳು ಅಪ್‌ಡೆಟ್‌ ಮಾಡಿಕೊಳ್ಳಲು ನಿರ್ದೇಶನ ನೀಡಿ. ಜಿಲ್ಲೆಯಲ್ಲಿ 1470 ಜನ ಬಿಎಲ್‌ಒಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದು, ಈವರೆಗೆ 1225 ಜನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಬಾಕಿ 245 ಜನ ಬಿಎಲ್‌ಒಗಳು ಹೆಲ್ತ್‌ ವಾಚ್‌ ಆ್ಯಪ್‌ಗಳನ್ನು ಡೌನ್‌ಲೋಡಮಾಡಿಕೊಂಡು ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಾಗಿದೆ. ಈವರೆಗೆ 3,18,852 ಮನೆಗಳ ಪೈಕಿ 68,516 ಮನೆಗಳ ಸರ್ವೇ ಮಾಹಿತಿಯನ್ನು ಅಪ್‌ಮಾಡಲಾಗಿದ್ದು ಬಾಕಿ ಮನೆಗಳ ಸರ್ವೇ ಕಾರ್ಯ ಮುಗಿದರೂ ತಂತ್ರಾಂಶದಲ್ಲಿ ಅಪ್‌ಲೋಡ್‌ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ 4508 ಜನರ ಪೈಕಿ 4140 ಜನ ಹೋಂ ಕ್ವಾರಂಟೈನ್‌ ಹಾಗೂ 380 ಜನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಗೃಹ ಪ್ರತ್ಯೇಕತೆಯಲ್ಲಿರುವ 4140 ಜನರ ಮೇಲೆ ನಿತ್ಯವೂ ನಿಗಾವಹಿಸಬೇಕು. ಮನೆ ಮನೆಗೆ ಭೇಟಿ ನೀಡಿ ಇವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಮೇ ಕೊನೆಯವರೆಗೂ ಮುಂದುವರಿಯಬಹುದು. ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಗುರುತಿಸಲಾಗಿರುವ ವಿದ್ಯಾರ್ಥಿ ನಿಲಯಗಳಲ್ಲಿ 3018 ಜನರಿಗೆ ಮಾತ್ರ ಸ್ಥಳವಕಾಶವಿದೆ. ಹೆಚ್ಚು ಜನ ಬಂದರೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಅನುಕೂಲವಾಗುವಂತೆ ಉತ್ತಮ ಖಾಸಗಿ, ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳನ್ನು ಗುರುತಿಸಿ ಕಾಯ್ದಿರಿಸುವಂತೆ ತಹಸೀಲ್ದಾರ್‌ಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ದಿಲೀಷ್‌ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ಚೈತ್ರಾ, ಜಿಲ್ಲಾ ಡ್ರಗ್‌ ಕಂಟ್ರೋಲ್‌ ಅಧಿಕಾರಿ ಇದ್ದರು.
 

Follow Us:
Download App:
  • android
  • ios