Asianet Suvarna News Asianet Suvarna News

ಲಾಕ್‌ಡೌನ್‌: ಎಲ್ಲ ಕಾರ್ಖಾನೆ ಆರಂಭಕ್ಕೆ ಸಿಕ್ತು ಗ್ರೀನ್‌ ಸಿಗ್ನಲ್‌..!

ಆಟೋ, ಬಸ್‌ ಸೇವೆ, ಕ್ಷೌರಿಕ ಅಂಗಡಿ, ಲಾಡ್ಜ್‌ ತೆರೆಯಲು ಇಲ್ಲ ಅವಕಾಶ| ಸರ್ಕಾರದ ನೂತನ ಮಾರ್ಗಸೂಚಿಯಂತೆ ಹಸಿರು ವಲಯದಲ್ಲಿರುವ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಮೂರು ದಿನಗಳ ಒಳಗಾಗಿ ಮರು ಆರಂಭಿಸಬೇಕು| ಈ ಚಟುವಟಿಕೆಗಳ ಆರಂಭಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ| ಉತ್ಪಾದನಾ ಚಟುವಟಿಕೆಗೆ ಯಾವುದೇ ಸಮಯ ನಿಗದಿ ಮಾಡುವುದಿಲ್ಲ ಹಾಗೂ ಪಾಸ್‌ಗಳ ಅವಶ್ಯಕತೆ ಇಲ್ಲ|

DC Krishna Bajapeyi Says All Factory open during LockDown
Author
Bengaluru, First Published Apr 29, 2020, 8:30 AM IST

ಹಾವೇರಿ(ಏ.29): ಜಿಲ್ಲೆಯ ಎಲ್ಲ ಆರ್ಥಿಕ ಚಟುವಟಿಕೆಗಳು, ಉತ್ಪಾದಕ ಚಟುವಟಿಕೆಗಳು, ಸೇವಾ ಚಟುವಟಿಕೆ, ಕಾರ್ಖಾನೆಗಳು ಪುನರ್‌ ಆರಂಭಿಸಲು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದ್ದಾರೆ.

ಜಿಲ್ಲೆಯ ವಿವಿಧ ತಹಸೀಲ್ದಾರ್‌ಗಳೊಂದಿಗೆ ಮಂಗಳವಾರ ವೀಡಿಯೋ ಸಂವಾದ ನಡೆಸಿದ ಅವರು, ಸರ್ಕಾರದ ನೂತನ ಮಾರ್ಗಸೂಚಿಯಂತೆ ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಮೂರು ದಿನಗಳ ಒಳಗಾಗಿ ಮರು ಆರಂಭಿಸಬೇಕು. ಈ ಚಟುವಟಿಕೆಗಳ ಆರಂಭಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಉತ್ಪಾದನಾ ಚಟುವಟಿಕೆಗೆ ಯಾವುದೇ ಸಮಯ ನಿಗದಿ ಮಾಡುವುದಿಲ್ಲ ಹಾಗೂ ಪಾಸ್‌ಗಳ ಅವಶ್ಯಕತೆ ಇಲ್ಲ. ಚಟುವಟಿಕೆ ಆರಂಭಿಸಿ ತಮ್ಮ ಸಂಸ್ಥೆಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಂಡಿರುವ ಕಾರ್ಮಿಕರ ಪಟ್ಟಿಯನ್ನು ತಹಸೀಲ್ದಾರಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ತಿಳಿಸಿದರು.

ಲಾಕ್‌ಡೌನ್‌ ಮಧ್ಯೆ ಸಿಪಿಐ ಬರ್ತಡೇ ಸಂಭ್ರಮ: 'ಇದೆಲ್ಲಾ ಬೇಕಿತ್ತಾ ಈ ಟೈಮ್‌ನಲ್ಲಿ..?'

ಆದರೆ ಮಾಲೀಕರು ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಟೋಕಾಲ್‌ (ಎಸ್‌ಓಪಿ) ಅನುಸರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50 ರಷ್ಟು ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕೊರೋನಾ ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಂಡು ಚಟುವಟಿಕೆ ಆರಂಭಿಸಬೇಕು. ಈ ಕುರಿತಂತೆ ಸ್ವಯಂ ದೃಢೀಕರಣ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಣ್ಣಪುಟ್ಟ ಕೈಗಾರಿಕೆ ಸೇರಿದಂತೆ ಒಟ್ಟಾರೆ 12000 ಕೈಗಾರಿಕಾ ಘಟಕಗಳಿವೆ. ಎಲ್ಲ ಕೈಗಾರಿಕಾ ಘಟಕಗಳು ಮೂರು ದಿನಗಳಲ್ಲಿ ಆರಂಭಗೊಳ್ಳಬೇಕು. ಮೆಣಸಿನಕಾಯಿ ಮಾರುಕಟ್ಟೆ, ಮೆಣಸಿನಕಾಯಿ ತೊಟ್ಟು ಬಿಡಿಸುವ ಚಟುವಟಿಕೆ, ಆಯಿಲ್‌ ಮಿಲ್‌, ರೈಸ್‌ ಮಿಲ್‌ ಒಳಗೊಂಡಂತೆ ಎಲ್ಲ ಚಟುವಟಿಕೆಗಳನ್ನು ಆರಂಭಿಸಬೇಕು. ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿಗಳನ್ನು ಆರಂಭಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದರು.

ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಕನಿಷ್ಟ ಒಂದು ಮೀಟರ್‌ ಅಂತರದಲ್ಲಿ ಗುರುತು ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಲೀಕರು, ವ್ಯವಸ್ಥಾಪಕರು ತಿಳುವಳಿಕೆ ನೀಡಬೇಕು. ಅಂಗಡಿ ಮುಂದೆ ಐದು ಜನಕ್ಕಿಂತ ಹೆಚ್ಚು ಸೇರದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಇದಕ್ಕೆ ಅವಕಾಶವಿಲ್ಲ:

ಕ್ಷೌರಿಕ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳು, ಹೋಟೆಲ್‌ ಮತ್ತು ಢಾಬಾ (ಪಾರ್ಸಲ್‌ ಸೇವೆ ಹೊರತು ಪಡಿಸಿ), ಸಿನಿಮಾ ಥಿಯೇಟರ್‌ಗಳು ಮತ್ತು ಮನರಂಜನಾ ಸ್ಥಳಗಳು, ಅಂತರ್‌ ಜಿಲ್ಲಾ ಮಾನವ ಸಾಗಾಣಿಕೆ, ಬಸ್‌, ಆಟೋ, ಟ್ಯಾಕ್ಸಿ, ಕ್ಯಾಬ್‌ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಕ್ಲಬ್‌ಗಳು ಮತ್ತು ರೆಸಾರ್ಟ್‌ಗಳು, ಸ್ವಿಮಿಂಗ್‌ ಪೂಲ್‌, ಉದ್ಯಾನವನಗಳು, ಸಮುದಾಯ ಭವನಗಳು, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಮದುವೆ ಮತ್ತು ಸಾಮೂಹಿಕ ಸಮಾರಂಭಗಳು, ಗುಟಖಾ ಅಥವಾ ತಂಬಾಕು ಅಂಗಡಿಗಳು, ಲಾಡ್ಜ್‌ಗಳು, ಬೀದಿ ಬದಿ ಚಾಟ್ಸ್‌ ಮತ್ತು ಟೀ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ದೇವಸ್ಥಾನ ಅಥವಾ ಮಸೀದಿ ಅಥವಾ ಚಚ್‌ರ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ. ಇವುಗಳನ್ನು ಹೊರತುಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳನ್ನು, ಅಂಗಡಿಗಳನ್ನು, ಕಾರ್ಖಾನೆಗಳನ್ನು ತೆರೆಯಬಹುದು ಎಂದರು.

ಅಂತರ್‌ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪಾಸ್‌ ಇಲ್ಲದೆ ಯಾವುದೇ ಮಾನವ ಸಾಗಾಣಿಕೆ ಹಾಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಮಾತ್ರ ಅವಕಾಶ. ಗೂಡ್ಸ್‌ ವಾಹನದಲ್ಲಿ ಇಬ್ಬರಿಗೆ ಮಾತ್ರ ಅವಕಾಶ. ವೈದ್ಯಕೀಯ ಕಾರಣಗಳಿಗೆ ನಿಯಮಾನುಸಾರ ಅಂತರ್‌ ಜಿಲ್ಲಾ ಪಾಸ್‌ ಪಡೆಯಬೇಕು. ಸರ್ಕಾರದಿಂದ ವಿನಾಯಿತಿ ಪಡೆದ ಕೈಗಾರಿಕೆ ಸಂಸ್ಥೆಗಳು, ಇತರ ಸಂಸ್ಥೆಗಳು ಆಯಾ ನೀಡಿದ ಪಾಸ್‌ ಬಳಸಬೇಕು ಎಂದು ತಿಳಿಸಿದರು.
 

Follow Us:
Download App:
  • android
  • ios