ನಟ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ಆಪರೇಷನ್ ಮಾಡಿಸಿಕೊಳ್ಳದೆ ಆರು ವಾರಗಳ ನಂತರ ಮನೆಗೆ ತೆರಳಿದ್ದಾರೆ. ಮಗ ವಿನೇಶ್ ಮತ್ತು ನಟ ಧನ್ವೀರ್ ಗೌಡ ಅವರೊಂದಿಗೆ ಕಾರಿನಲ್ಲಿ ತೆರಳಿದ ದೃಶ್ಯಗಳು ಕಂಡುಬಂದಿವೆ.

ಬೆಂಗಳೂರು (ಡಿ.18): ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಟ ದರ್ಶನ್‌ ಯಾವುದೇ ಆಪರೇಷನ್‌ಗೆ ಒಳಗಾಗದೆ ಬಿಜಿಎಸ್‌ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಡಿಸ್ಚಾರ್ಜ್‌ ಆಗಿದ್ದಾರೆ. ಕೂರೋಕೆ ಆಗಲ್ಲ, ಆಪರೇಷನ್‌ ಮಾಡಿಸದೇ ಇದ್ದಲ್ಲಿ ಲಕ್ವಾ ಹೊಡೆಯಲಿದೆ ಎಂದು ಹೈಕೋರ್ಟ್‌ ಎದುರು ದರ್ಶನ್‌ ಪರ ವಕೀಲರು ಹೇಳಿದ್ದರು. ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ಆರೋಗ್ಯ ವಿಚಾರದಲ್ಲಿ ಅನುಮಾನಗಳು ಬರಬಾರದು ಎಂದು ಸ್ವತಃ ಜಡ್ಜ್‌ ಹೇಳಿದ್ದರು. ಆದರೆ, ರಾಜ್ಯ ಹೈಕೋರ್ಟ್‌ನ ಮಾನವೀಯ ಕಳಕಳಿಯನ್ನೇ ಲಾಭವನ್ನಾಗಿ ಮಾಡಿಕೊಂಡ ದರ್ಶನ್‌, 6 ವಾರಗಳ ಕಾಲ ಬಿಜಿಎಸ್‌ ಆಸ್ಪತ್ರೆಯ ಬೆಡ್‌ ಮೇಲೆ ಹೊರಳಾಡಿ ಕೊನೆಗೂ ಬುಧವಾರ ಬಿಡುಗಡೆಯಾಗಿದೆ. ಅವರ ಬ್ಯಾಕ್‌ಗಾಗಲಿ, ಫ್ರಂಟ್‌ಗಾಗಲಿ ಯಾವುದೇ ಆಪರೇಷನ್‌ ಆಗಿಲ್ಲ. ಮಗನ ಹೆಗಲ ಮೇಲೆ ಕೈಯಿಟ್ಟುಕೊಂಡು ರೇಂಜ್‌ ರೋವರ್‌ ಕಾರು ಏರಿದ್ದಾರೆ.

ಈ ವೇಳೆ ಕಾರ್‌ನಲ್ಲಿ ಪುತ್ರ ವಿನೇಶ್‌ ದರ್ಶನ್ ಕೂಡ ಇದ್ದರು. ನಟ ಧನ್ವೀರ್‌ ಗೌಡ ಕಾರ್‌ಅನ್ನು ಡ್ರೈವ್‌ ಮಾಡಿದರೆ, ದರ್ಶನ್‌ ಮುಂದಿನ ಸೀಟ್‌ನಲ್ಲಿಯೇ ಕುಳಿತುಕೊಂಡಿದ್ದರು. ಡಿಸ್ಚಾರ್ಜ್ ಆಗಿ ಹೊಸಕೆರೆಹಳ್ಳಿ ಪತ್ನಿ ವಿಜಯಲಕ್ಷ್ಮೀ ಇರೋ ಅಪಾರ್ಟ್‌ಮೆಂಟ್‌ಗೆ ದರ್ಶನ್ ಬಂದಿದ್ದಾರೆ. ದರ್ಶನ್‌ ಬರುವ ಹಿನ್ನಲೆಯಲ್ಲಿ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಸಿಬ್ಬಂದಿ ಕೂಡ ಅಲರ್ಟ್‌ ಆಗಿದ್ದರು. ಅಪಾರ್ಟ್‌ಮೆಂಟ್ ಎಂಟ್ರೇನ್ಸ್ ನಲ್ಲಿ ಸೆಕ್ಯುರಿಟಿ ಸಿಬ್ಬಂದಿ ಹೈ ಅಲರ್ಟ್‌ನಲ್ಲಿದ್ದರು. ಕಾರು ಅಪಾರ್ಟ್‌ಮೆಂಟ್‌ನ ಒಳಗೆ ಹೋಗುತ್ತಿದ್ದಂತೆ ಗೇಟ್‌ಕ್ಲೋಸ್‌ ಮಾಡಲಾಗಿದೆ.