ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ, ಶಾಲಾ ವಾರ್ಷಿಕೋತ್ಸವದ ವೇಳೆ ಕಲ್ಲು ಎಸೆದಿದ್ದಾನೆಂಬ ಕ್ಷುಲ್ಲಕ ಆರೋಪದ ಮೇಲೆ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾವಳಗಿ (ಮಾ.13): ಶಾಲಾ ವಾರ್ಷಿಕ ಕಾರ್ಯಕ್ರಮದಲ್ಲಿ ಚಾವಣಿ ಮೇಲೆ ಕುಳಿತು ಚಿಕ್ಕಕಲ್ಲು (ಹಳ್ಳು) ಎಸೆದಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿದ ವಿಲಕ್ಷಣ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದೀಪ ಬಸಪ್ಪ ಪಾಂಗೆ (19) ಥಳಿತಕ್ಕೆ ಒಳಗಾಗಿ ಮೃತಪಟ್ಟ ಯುವಕ. ರಾಜು ಭೀಮಪ್ಪ ಮಾಳಿ, ವಿಜಯ ರಾಮಚಂದ್ರ ಸಾವಳಗಿ, ಮಲ್ಲಿಕಾರ್ಜುನ ನಿಂಗಪ್ಪ ಮಾಳಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಘಟನೆ:

ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಕ್ಕಳ ಮನರಂಜನೆ ಕಾರ್ಯಕ್ರಮಗಳು ನಡೆದಿತ್ತು. ಗ್ರಾಮಸ್ಥರು ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ಪಂಚಾಯಿತಿ ಕಟ್ಟಡದ ಚಾವಣಿ ಮೇಲೆ ಕುಳಿತ ಕೆಲವು ಯುವಕರಲ್ಲಿ ಯಾರೋ ಒಬ್ಬ ಕೆಳಗೆ ಕುಳಿತವರ ಮೇಲೆ ಚಿಕ್ಕ ಕಲ್ಲು (ಹಳ್ಳು) ಎಸೆದಿದ್ದಾನೆ.

ಇದರಿಂದ ಆಕ್ರೋಶಗೊಂಡ ಆರೋಪಿಗಳು ಯಾರು ಕಲ್ಲು ಎಸೆದಿದ್ದಾರೆ ಎಂದು ವಿಚಾರಿಸದೆ ನೀನೇ ಹಳ್ಳು ಎಸೆದಿದ್ದಿಯಾ ಎಂದು ಸುದೀಪನೊಂದಿಗೆ ಜಗಳವಾಡಿ ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿ ಆತನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಸುದೀಪನನ್ನು ತಕ್ಷಣ ಜಮಖಂಡಿ ಆಸ್ಪತ್ರೆಗೆ ಸಾಗಿಸಿದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಾವಳಗಿ ಠಾಣೆಯಲ್ಲಿ ದೂರು ದಾಖಲಾಗಿದೆ.