14 ವರ್ಷದ ಸಂಸಾರ ತ್ಯಜಿಸಿ, ಪ್ರೀತಿಸಿದವನಿಗಾಗಿ ಮತಾಂತರಗೊಂಡ ಶ್ರೀದೇವಿ ಎಂಬ ಮಹಿಳೆಗೆ ಆತನೇ ಮೋಸ ಮಾಡಿದ್ದಾನೆ. ಆಕೆಯ ಹಣ, ಬಂಗಾರ ದೋಚಿ ಪರಾರಿಯಾಗಿದ್ದು, ಇದೀಗ ಇಬ್ಬರು ಮಕ್ಕಳೊಂದಿಗೆ ಬೀದಿಪಾಲಾಗಿರುವ ಸಂತ್ರಸ್ತೆ ನ್ಯಾಯಕ್ಕಾಗಿ ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.

ಬಾಗಲಕೋಟೆ (ಮಾ.8): ಪ್ರೀತಿ ಎಂದು ಕುರುಡಾಗಿ ನಂಬಿ ತನ್ನೆಲ್ಲವನ್ನೂ ತ್ಯಜಿಸಿದ ಮಹಿಳೆಯೊಬ್ಬಳು ಈಗ ಮೋಸ ಹೋಗಿ ನ್ಯಾಯಕ್ಕಾಗಿ ಬಾಗಲಕೋಟೆ ಎಸ್ಪಿಯವರ ಮೊರೆ ಹೋಗಿದ್ದಾರೆ. ಮುಧೋಳ ನಿವಾಸಿ ಶ್ರೀದೇವಿ ಅಲಿಯಾಸ್ ಹಬೀಬಾ ಮೋಸ ಹೋಗಿರುವ ಮಹಿಳೆ. ಅತ್ತ ಮೊದಲ ಸಂಸಾರವನ್ನೂ ಕಳೆದುಕೊಂಡು, ಇತ್ತ ಎರಡನೇ ಪತಿಯಿಂದಲೂ ವಂಚನೆಗೊಳಗಾಗಿ ಈಗ ಇಬ್ಬರು ಮಕ್ಕಳೊಂದಿಗೆ ಅನಾಥರಾಗಿ ನಿಂತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

14 ವರ್ಷದ ಸಂಸಾರ ತ್ಯಜಿಸಿ ಸವಿಪ್ ಹಿಂದೆ ಹೋಗಿದ್ದ ಶ್ರೀದೇವಿ

ಶ್ರೀದೇವಿ ಅವರು 14 ವರ್ಷಗಳ ಹಿಂದೆ ಹಿಂದೂ ಸಂಪ್ರದಾಯದಂತೆ ಹಿಂದೂ ವ್ಯಕ್ತಿಯನ್ನ ಮದುವೆಯಾಗಿದ್ದಳು. ಆದರೆ ಅವಳ ಬಾಳಲ್ಲಿ ಪ್ರೀತಿಯ ಮುಖವಾಡ ಹಾಕಿ ಬಂದವನು ಸವಿಪ್ ಎಂಬ ಮುಸ್ಲಿಂ. ಅವನ ಪರಿಚಯವಾಗಿದೆ ಬಳಿಕ ಮದುವೆಗೆ ಬಲವಂತ ಮಾಡಿದ್ದಾನೆ. ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಆರೋಪಿಸಿರುವ ಸಂತ್ರಸ್ತ ಮಹಿಳೆ ತನ್ನ ಮೊದಲ ಪತಿಗೆ ಡೈವೋರ್ಸ್ ನೀಡಿದ್ದಳು. ಬಳಿಕ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು 'ಹಬೀಬಾ' ಎಂದು ಹೆಸರು ಬದಲಿಸಿಕೊಂಡು ಸವಿಪ ಎಂಬುವವನ ಮದುವೆಯಾಗಿದ್ದಳು

ಹಣ ಮತ್ತು ಬಂಗಾರ ದೋಚಿ ಪರಾರಿಯಾದ ಎರಡನೇ ಪತಿ!

ಕೆಲ ಕಾಲ ಶ್ರೀದೇವಿಯೊಂದಿಗೆ ಜೀವನ ನಡೆಸಿದ್ದ ಸವಿಪ್, ಬಳಿಕ ತನ್ನ ಅಸಲಿ ರೂಪ ತೋರಿಸಿದ್ದಾನೆ. ಶ್ರೀದೇವಿಗೆ ಮೊದಲ ಪತಿಯಿಂದ ಜೀವನಾಂಶವಾಗಿ ಬಂದಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲೆ ಚಿನ್ನಾಭರಣವನ್ನು ಸವಿಪ್ ದೋಚಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಣ ಮತ್ತು ಒಡವೆಗಳನ್ನು ಪಡೆದುಕೊಂಡು ಶ್ರೀದೇವಿಯನ್ನು ಅರ್ಧದಾರಿಯಲ್ಲೇ ಕೈಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇಬ್ಬರು ಮಕ್ಕಳೊಂದಿಗೆ ನ್ಯಾಯಕ್ಕಾಗಿ ಎಸ್ಪಿ ಬಳಿಗೆ ಬಂದ ಸಂತ್ರಸ್ತ ಮಹಿಳೆ

ಸದ್ಯ ಆಕೆಯ ಪರಿಸ್ಥಿತಿ ಹೇಗಿದೆ ಎಂದರೆ ಇತ್ತ ಮೊದಲ ಗಂಡನ ಮನೆಯೂ ಇಲ್ಲದೆ, ಅತ್ತ ಎರಡನೇ ಗಂಡನಿಂದಲೂ ವಂಚನೆಗೊಳಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾಳೆ. ಇಬ್ಬರು ಪುಟ್ಟ ಮಕ್ಕಳೊಂದಿಗೆ ಜೀವನ ನಡೆಸಲು ಸಂಕಷ್ಟ ಅನುಭವಿಸುವಂತಾಗಿದೆ. ತನಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ಆರೋಪಿ ಸವಿಪ್‌ನಿಂದ ತನ್ನ ಹಣ ಹಾಗೂ ಬಂಗಾರವನ್ನು ವಾಪಸ್ ಕೊಡಿಸಬೇಕು ಎಂದು ಬಾಗಲಕೋಟೆ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ಕಾನೂನು ಕ್ರಮದ ಭರವಸೆ ನೀಡಿದ ಎಸ್ಪಿ ಸಿದ್ದಾರ್ಥ ಗೋಯಲ್

ಮಹಿಳೆಯ ದೂರನ್ನು ಸ್ವೀಕರಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 'ಮಹಿಳೆ ತನಗಾಗಿರುವ ಕಿರುಕುಳದ ಬಗ್ಗೆ ದೂರು ನೀಡಲು ಬಂದಿದ್ದಾರೆ. ಈ ಬಗ್ಗೆ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ. ಸಾಲದ್ದಕ್ಕೆ ನಮ್ಮ ಮಹಿಳಾ ಪೊಲೀಸ್ ಠಾಣೆಯ ಮೂಲಕವೂ ಅವರಿಗೆ ಸೂಕ್ತ ರಕ್ಷಣೆ ಮತ್ತು ಕಾನೂನು ನೆರವು ಒದಗಿಸಲಾಗುವುದು' ಎಂದು ಅವರು ಭರವಸೆ ನೀಡಿದ್ದಾರೆ.