ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಲೆಂದು ಬಯಸಿದ್ದೆ: ಡಿಕೆಶಿ
ಸಿದ್ದರಾಮಯ್ಯ ನಾಯಕತ್ವದಲ್ಲಿಯೇ ಕಳೆದ ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ| ಸಿದ್ದು ಸೋಲನ್ನು ನಿರೀಕ್ಷಿಸಿರಲಿಲ್ಲ| ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿಗೆ ಕಾರಣವನ್ನು ಅವರೇ ಹುಡುಕುತ್ತಾರೆ: ಡಿಕೆಶಿ|
ಬೆಳಗಾವಿ(ಡಿ.19): ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆ ನಮಗೆಲ್ಲರಿಗೂ ಇತ್ತು. ಹುಣಸೂರಿನಲ್ಲಿ ನಾನು ಭಾಷಣ ಮಾಡುವಾಗಲೇ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅವರೇ ಆಗಲಿ ಎಂದಿದ್ದೆ. ಅವರ ಸೋಲನ್ನು ನಾವೂ ನಿರೀಕ್ಷಿಸಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
"
ನಾನು ಎರಡನೇ ಬಾರಿಗೆ ಸಿಎಂ ಆಗುವುದು ನಮ್ಮವರಿಗೇ ಬೇಡವಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ಯಾವ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ನಾಯಕತ್ವದಲ್ಲಿಯೇ ಕಳೆದ ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ ಎಂದರು.
ಬಿಜೆಪಿ ಎಂದರೆ ಉಡುಪಿ ಹೋಟೆಲ್ ಇದ್ದಂಗೆ : ಹಾಗಾದರೆ ಎತ್ತ ಹೋಗಲಿದೆ ಈ ನಾಯಕನ ಸವಾರಿ
ಎಸ್.ಎಂ. ಕೃಷ್ಣ ಅವರಿಗೂ ಎರಡೂ ಕಡೆ ಸ್ಪರ್ಧಿಸಲು ಅವಕಾಶ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ ಅವರನ್ನು ಎಲ್ಲರೂ ಬೆಂಬಲಿಸಿದ್ದರಿಂದಲೇ ಎರಡೂ ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಸಾಧ್ಯವಾಯಿತು. ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿಗೆ ಕಾರಣವನ್ನು ಅವರೇ ಹುಡುಕುತ್ತಾರೆ. ಕರ್ಮಭೂಮಿಯಲ್ಲಿ ಯಾರಿಗೆ ಸಹಾಯ ಮಾಡಿರುತ್ತೇವೆಯೋ, ಅವರಿಂದಲೇ ತೊಂದರೆ ಉಂಟಾದಾಗ ನೋವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅವರ ಸೋಲಿಗೆ ಯಾರು ಕಾರಣ ಎಂಬ ಹೆಸರು ಹೇಳಿದರೆ ಆ ಕುರಿತು ಪ್ರತಿಕ್ರಿಯೆ ನೀಡಬಹುದು. ಆದರೆ, ಜನರಲ್ ಆಗಿ ಹೇಳಿದರೆ ನಾವು ಕೇಳಲಾಗುತ್ತದೆಯೇ ಎಂದು ಡಿ.ಕೆ.ಶಿವಕುಮಾರ್ ಮರು ಪ್ರಶ್ನೆ ಎಸೆದರು.