ಮಗನ ಹೆಸರು, ಫೋಟೋ ಬಳಸಿದರೆ ಬೆಂಕಿ ಹಾಕ್ತೀವಿ: ಕುಸುಮಾಗೆ ಡಿ.ಕೆ.ರವಿ ತಾಯಿ ಎಚ್ಚರಿಕೆ
ನನ್ನ ಮಗನ ಜೊತೆ ಅವಳೂ ಹೋಗಿಬಿಟ್ಟಳು ಅಂತ ತಿಳಿದುಕೊಂಡಿದ್ದೇನೆ| ನನ್ನ ಮಗನ ದುಡ್ಡಿನಲ್ಲಿ ಕಷ್ಟಕ್ಕೆ ಒಂದು ರೂಪಾಯಿ ಕೂಡ ನಮಗೆ ಕೊಡಲಿಲ್ಲ| ನನ್ನ ಮನಗ ಹೆಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತುಕೊಳ್ಳಬೇಕು ಎಂದು ಕಣ್ಣೀರು ಹಾಕಿದ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ|
ತುಮಕೂರು(ಅ.03): ಬೆಂಗಳೂರಿನ ಆರ್.ಆರ್.ನಗರ ಉಪ ಚುನಾವಣೆಯಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಇದಕ್ಕೆ ಡಿ.ಕೆ.ರವಿ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದೆ.
"
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ರವಿ ತಾಯಿ ಗೌರಮ್ಮ, ಆಕೆ ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು, ಫೋಟೋ ಹಾಕಬಾರದು. ಒಂದು ವೇಳೆ ಹೆಸರು, ಫೋಟೋ ಹಾಕಿಕೊಂಡರೆ ನಾನೇ ಹುಡುಗರನ್ನು ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ನನ್ನ ಮಗನ ಜೊತೆ ಅವಳೂ ಹೋಗಿಬಿಟ್ಟಳು ಅಂತ ತಿಳಿದುಕೊಂಡಿದ್ದೇನೆ. ನನ್ನ ಮಗನ ದುಡ್ಡಿನಲ್ಲಿ ಕಷ್ಟಕ್ಕೆ ಒಂದು ರೂಪಾಯಿ ಕೂಡ ನಮಗೆ ಕೊಡಲಿಲ್ಲ. ಹೀಗಿರುವಾಗ ನನ್ನ ಮನಗ ಹೆಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತುಕೊಳ್ಳಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಅವತ್ತು ಹೋದಾಕೆ ಇವತ್ತಿನವರೆಗೂ ಬಂದಿಲ್ಲ. ಡಿ.ಕೆ.ರವಿ ಪತ್ನಿ ಅನ್ನುವ ಯೋಗ್ಯತೆಯನ್ನು ಆಕೆ 6 ವರ್ಷದ ಹಿಂದೆಯೇ ಕಳೆದುಕೊಂಡಿದ್ದಾಳೆ. ಒಂದೇ ಒಂದು ದಿನ ನಮ್ಮ ಕಷ್ಟ ಸುಖ ಕೇಳಿಲ್ಲ. ನಾನು ಕಷ್ಟಪಟ್ಟು ಮಗನನ್ನು ಓದಿಸಿದೆ. ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದಳು. ಒಂದು ರುಪಾಯಿಯನ್ನು ನಮಗೆ ಕೊಟ್ಟಿಲ್ಲ. ಆರೋಗ್ಯ ಸರಿ ಇಲ್ಲದಾಗಲೂ ನಮ್ಮ ಯೋಗಕ್ಷೇಮ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.