ಭಾರತೀಯ ಹವಾಮಾನ ಇಲಾಖೆ ಮತ್ತು ಐಎನ್‌ಸಿಒಐಎಸ್‌ ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಹೈ ವೇವ್‌ ಅಲರ್ಚ್‌ ಘೋಷಣೆ ಮಾಡಲಾಗಿದೆ.

ಮಂಗಳೂರು (ಜೂ.15) : ಭಾರತೀಯ ಹವಾಮಾನ ಇಲಾಖೆ ಮತ್ತು ಐಎನ್‌ಸಿಒಐಎಸ್‌ ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಹೈ ವೇವ್‌ ಅಲರ್ಚ್‌ ಘೋಷಣೆ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ಬಿಪೊರ್‌ಜೊಯ್‌ ಚಂಡಮಾರುತವು ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದ ತೀವ್ರತೆಯ ಪರಿಣಾಮದಿಂದ ಸಮುದ್ರದ ಅಲೆಗಳ ಎತ್ತರ 3ರಿಂದ 4 ಮೀ. ನಷ್ಟುಇರಲಿದೆ. ಸಮುದ್ರದಲ್ಲಿನ ಪ್ರಕ್ಷುಬ್ಧ ವಾತಾವರಣದಿಂದಾಗಿ ಮುಂದಿನ 5 ದಿನಗಳವರೆಗೆ (ಜೂ.19ರವರೆಗೆ) ಕರಾವಳಿ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಯಾವುದೇ ಕಾರಣಕ್ಕೂ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ಹತ್ತಿರ ಓಡಾಡುವುದು ಹಾಗೂ ಆಟವಾಡುವುದನ್ನು ಕೂಡ ನಿಷೇಧಿಸಲಾಗಿದೆ.

ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್‌ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು

ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಕಂಟ್ರೋಲ್‌ ರೂಂ. ಟೋಲ್‌ ಫ್ರೀ ಸಂಖ್ಯೆ: 1077/0824-2442590 ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕ್ಷೀಣಿಸಿದ ಮುಂಗಾರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ ಮುಂಗಾರು ಕ್ಷೀಣವಾಗಿತ್ತು. ಬೆಳಗ್ಗೆ ಮತ್ತು ಸಂಜೆ ವೇಳೆ ಸ್ವಲ್ಪ ಮಳೆಯಾದದ್ದು ಬಿಟ್ಟರೆ ಬಹುತೇಕ ಬಿಸಿಲು- ಸೆಕೆಯ ವಾತಾವರಣವೇ ಮುಂದುವರಿದಿತ್ತು. ಮುಂಗಾರು ಆರಂಭವಾದರೂ ಜಿಲ್ಲೆಯ ಹೆಚ್ಚಿನ ಕಡೆ ಅಂತರ್ಜಲ ಇನ್ನೂ ಏರಿಕೆಯಾಗಿಲ್ಲ. ಬುಧವಾರ ಕರಾವಳಿಯಲ್ಲಿ ಸರಾಸರಿ 32.1 ಡಿ.ಸೆ ಗರಿಷ್ಟಮತ್ತು 24.2 ಡಿ.ಸೆ. ಕನಿಷ್ಠ ತಾಪಮಾನ ಇತ್ತು.

ಇನ್ನು ಉಳ್ಳಾಲದ ಸಮುದ್ರ ತೀರದಲ್ಲಿ ಕಡಲ್ಕೊರೆತದಿಂದ ಹಾನಿ ಉಂಟಾಗದಂತೆ ಕಲ್ಲು ಹಾಕುವ ಕಾಮಗಾರಿ ಮುಂದುವರಿದಿದೆ. ಚಂಡಮಾರುತದ ತೀವ್ರತೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಜನತೆ ಆತಂಕದಲ್ಲಿದ್ದಾರೆ.

ಪುತ್ತೂರಿನಲ್ಲಿ ಅತೀ ಹೆಚ್ಚು (28 ಮಿಮೀ)ಮಳೆಯಾಗಿದೆ. ಉಳಿದಂತೆ ಮಂಗಳೂರು 26.6 ಮಿ.ಮೀ., ಉಪ್ಪಿನಂಗಡಿ 10 ಮಿ.ಮೀ., ಪಣಂಬೂರು 12 ಮಿ.ಮೀ., ಮಂಗಳೂರು ವಿಮಾನ ನಿಲ್ದಾಣ 4.6 ಮಿ.ಮೀ., ಧರ್ಮಸ್ಥಳ 11.5 ಮಿ.ಮೀ., ಬೆಳ್ತಂಗಡಿಯಲ್ಲಿ 6.4 ಮಿ.ಮೀ. ಮಳೆಯಾಗಿದೆ.

ತರಂಗಮೇಟ್‌ ಕಡಲತೀರದಲ್ಲಿ ಕಡಲಕೊರೆತ

 ಕಾರವಾರ (ಜೂ.15) ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯ ತಾಲೂಕಿನಲ್ಲಿ ಕಡಲ ಕೊರೆತ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಹಾಲಿ ಬಿಪೊರ್‌ ಜೊಯ್‌ ಚಂಡಮಾರುತದಿಂದ ಅಂಕೋಲಾ ತಾಲೂಕಿನ ತರಂಗಮೇಟ್‌ ಕಡಲತೀರದಲ್ಲಿ ಕಡಲಕೊರೆತ ಉಂಟಾಗಿದೆ.

ಬಿಪೋರ್‌ಜಾಯ್ ಸೈಕ್ಲೋನ್‌ ಎಫೆಕ್ಟ್ ಉಡುಪಿಯಲ್ಲಿ ಉತ್ತಮ ಮಳೆ

ಕಳೆದ ವರ್ಷವೂ ಕೂಡಾ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕೊರೆತ ಉಂಟಾಗಿತ್ತು. ಈ ಬಾರಿ ಕೂಡಾ ಅಲೆಗಳ ಅಬ್ಬರಕ್ಕೆ ಕಡಲ ಕೊರೆತವಾಗಿದೆ. ಅಲೆಗಳ ಹೊಡೆತಕ್ಕೆ ತೆಂಗಿನ ಮರಗಳ ಬುಡಗಳು ಸಡಿಲಗೊಂಡಿದೆ. ಪ್ರತಿವರ್ಷವೂ ಇಲ್ಲಿ ಕಡಲ ಕೊರೆತವಾಗುತ್ತಿದ್ದರೂ ತಡೆಗೋಡೆ ನಿರ್ಮಾಣ ಮಾಡದೆ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ.

ದೊಡ್ಡ ದೊಡ್ಡ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ತೀರದ ಸಮೀಪ ಇರುವ ಮನೆಗಳು ಕೊಚ್ಚಿ ಹೋಗುವ ಆತಂಕದಲ್ಲಿದ್ದಾರೆ. ಅಲೆಗಳ ಅಬ್ಬರ ಮತ್ತಷ್ಟುಜೋರಾದಲ್ಲಿ ಯಾವುದೇ ಕ್ಷಣದಲ್ಲಿ ಅಲೆಗಳು ಮನೆಗಳನ್ನು ಆಪೋಷನ ಪಡೆಯುವ ಸಾಧ್ಯತೆಯಿದೆ.