ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವಕ್ಕೆ ಮತ್ತು ಅವರ ನೇತೃತ್ವದ ಅಭಿವೃದ್ಧಿ ಯೋಜನೆಗಳಿಗೆ ಕೊಟ್ಟ ಜನಾದೇಶವಾಗಿದೆ. ಈ ಫಲಿತಾಂಶದ ಮೂಲಕ ಜನರು ಕಾಂಗ್ರೆಸ್‌ನ ಹುಸಿ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ ಎಂದು ಶಾಸಕ ಬಿ. ಸುರೇಶಗೌಡ ಹೇಳಿದ್ದಾರೆ.

ತುಮಕೂರು : ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವಕ್ಕೆ ಮತ್ತು ಅವರ ನೇತೃತ್ವದ ಅಭಿವೃದ್ಧಿ ಯೋಜನೆಗಳಿಗೆ ಕೊಟ್ಟ ಜನಾದೇಶವಾಗಿದೆ. ಈ ಫಲಿತಾಂಶದ ಮೂಲಕ ಜನರು ಕಾಂಗ್ರೆಸ್‌ನ ಹುಸಿ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ ಎಂದು ಶಾಸಕ ಬಿ. ಸುರೇಶಗೌಡ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಇಡೀ ದೇಶದಾದ್ಯಂತ ಸಾಧಿಸಲಿರುವ ದಿಗ್ವಿಜಯಕ್ಕೆ ಇದು ಮುನ್ನುಡಿಯಂತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಜನರು ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಬಿಜೆಪಿಗೆ ಮರಳಿ ಅಧಿಕಾರ ಕೊಟ್ಟಿದ್ದಾರೆ. ಅಂದರೆ ಇದು ಬಿಜೆಪಿಗೆ ಸಿಕ್ಕ ಸಕಾರಾತ್ಮಕ ಜಯವಾಗಿದೆ ಮತ್ತು ಇದುವರೆಗೆ ಕಾಂಗ್ರೆಸ್‌ ಪಕ್ಷ ಮಾಡಿಕೊಂಡಿರುವ ಬಂದಿರುವ ನಕಾರಾತ್ಮಕ ರಾಜಕಾರಣವನ್ನು ಜನರು ಧಿಕ್ಕರಿಸಿರುವುದರ ದ್ಯೋತಕವಾಗಿದೆ.

ಕಾಂಗ್ರೆಸ್‌ ಪಕ್ಷವು ಕೊಟ್ಟ ಸುಳ್ಳು ಗ್ಯಾರಂಟಿ ಯೋಜನೆಗಳಿಗೆ ಜನರು ಮರುಳಾಗಲಿಲ್ಲ. ದೇಶದ ಅಭಿವೃದ್ಧಿ ಮುಖ್ಯ, ದುಡಿಯುವ ಕೈಗಳಿಗೆ ಕೆಲಸ ಮುಖ್ಯ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದರು. ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ಚುನಾವಣಾ ಸಮಯದಲ್ಲಿ ಪ್ರಧಾನಿ ಅವರ ವಿರುದ್ಧ ʻದುರದೃಷ್ಟ (ಪನೌತಿ)ʼ ಎಂಬ ಹೊಣೆಗೇಡಿತನದ ಟೀಕೆ ಮಾಡಿದ್ದರು. ಈಗ ಸ್ವತಃ ರಾಹುಲ್‌ ಗಾಂಧಿ ತಮ್ಮ ಪಕ್ಷಕ್ಕೆ ಎಂಥ ʼದುರದೃಷ್ಟʼ ಎಂಬುದು ಸಾಬೀತಾಗಿದೆ.

ರಾಜಸ್ಥಾನ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಒಳಜಗಳ, ಅಧಿಕಾರಕ್ಕಾಗಿ ನಡೆದ ಕಚ್ಚಾಟಗಳು ಆ ಪಕ್ಷಕ್ಕೆ ಮುಳುವಾಗಿವೆ. ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಅದೇ ಮುಸುಕಿನ ಗುದ್ದಾಟ ನಡೆದಿದೆ. ಅದು ಅವರ ಪಕ್ಷಕ್ಕೆ ಮುಳುವಾಗಲಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹಾಗೂ ಎಲ್ಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಎಲ್ಲ ಇಪ್ಪತ್ತೆಂಟು ಸೀಟುಗಳಲ್ಲಿಯೂ ಕಾಂಗ್ರೆಸ್‌ ಅನ್ನು ಪರಾಜಯಗೊಳಿಸಿ ವಿಜಯ ಪತಾಕೆ ಹಾರಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮೂಲಕ ಪಕ್ಷಕ್ಕೆ ಬಲ ತುಂಬುತ್ತೇವೆ ಎಂದರು.