ಸೋಂಕಿತರ ಪಾಸಿಟಿವ್ ಕೇಸ್ ವರದಿ ನೇರ ವಲಯಕ್ಕೆ ರವಾನೆ
ಇನ್ನು ಮುಂದೆ ನಗರದಲ್ಲಿನ ಕೊರೋನಾ ಸೋಂಕಿನ ಪಾಸಿಟಿವ್ ಕೇಸ್ಗಳ ವರದಿಗಳನ್ನು ನೇರವಾಗಿ ನಗರದ ಆಯಾ ವಲಯಗಳಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು(ಜು.17): ಇನ್ನು ಮುಂದೆ ನಗರದಲ್ಲಿನ ಕೊರೋನಾ ಸೋಂಕಿನ ಪಾಸಿಟಿವ್ ಕೇಸ್ಗಳ ವರದಿಗಳನ್ನು ನೇರವಾಗಿ ನಗರದ ಆಯಾ ವಲಯಗಳಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಮೊದಲು ಪಾಸಿಟಿವ್ ಕೇಸ್ಗಳ ವರದಿಗಳು ಕೇಂದ್ರಕ್ಕೆ ಬಂದು ನಂತರ ಆಯಾ ವಲಯಗಳಿಗೆ ಹೋಗುತ್ತಿತ್ತು. ಇದರಿಂದ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗುತ್ತಿತ್ತು. ಆದರೆ ಈ ಪದ್ಧತಿ ಬದಲಾವಣೆ ಮಾಡಿರುವುದರಿಂದ ಇನ್ನು ಮುಂದೆ ಸೋಂಕಿತರನ್ನು ಕಾಯಿಸದೇ ನೇರವಾಗಿ ಆಸ್ಪತ್ರೆಗೆ ದಾಖಲಿಸಬಹುದಾಗಿದೆ ಎಂದು ವಿವರಿಸಿದರು.
ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ!
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಣ್ಣಪುಟ್ಟಘಟನೆಗಳನ್ನು ಹೊರತುಪಡಿಸಿದರೆ ಲಾಕ್ಡೌನ್ ಯಶಸ್ವಿಯಾಗಿದೆ. ಕೆಲವು ಕಡೆ ಅಸಹಕಾರ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
200 ಆ್ಯಂಬುಲೆನ್ಸ್ ಹಸ್ತಾಂತರಕ್ಕೆ ಕ್ರಮ:
ಸೋಂಕಿತರಿಗೆ ತ್ವರಿತ ಚಿಕಿತ್ಸೆ ನೀಡಲು 200 ಅ್ಯಂಬುಲೆನ್ಸ್ಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಟೆಂಪೋ ಟ್ರಾವಲರ್ಸ್ ವಾಹನಗಳನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸುವ ಕೆಲಸ ತ್ವರಿತವಾಗಿ ನಡೆಯುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಪ್ರತಿ ದಿನ ಯಾವ ಆ್ಯಂಬುಲೆನ್ಸ್ ಯಾವ ವಲಯದಿಂದ ಎಷ್ಟುರೋಗಿಗಳಿಗೆ ಸೇವೆ ಒದಗಿಸಿದೆ ಎಂಬ ಪ್ರತಿ ದಿನ ಅಂಕಿ-ಅಂಶ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್.ಅಶೋಕ್
ಭಗವಂತನೇ ಕಾಪಾಡಬೇಕು ಎಂಬ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಶ್ರೀರಾಮುಲು ಅವರ ಮಾತು ಅಸಹಾಯಕ ಹೇಳಿಕೆ ಅಲ್ಲ. ಲೋಕಾರೂಢಿ ಹೇಳಿಕೆ ಅಷ್ಟೇ. ಅವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ ಎಂದರು.