* ಕೊಪ್ಪಳದಲ್ಲಿ ಹಿಂದೂ ಮಹಾಸಭಾದಿಂದ 11 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ* ಸರ್ಕಾರದ ನಿರ್ದೇಶನಕ್ಕೆ ಡೋಂಟ್‌ ಕೇರ್‌ ಎಂದ ಆಯೋಜಕರು*  ಶೇ. 80 ರಷ್ಟು ಗಣೇಶ ಮೂರ್ತಿಗಳು ಚತುರ್ಥಿಯಂದೇ ವಿಸರ್ಜನೆ  

ಕೊಪ್ಪಳ(ಸೆ.12): ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಗಣೇಶ ಚತುರ್ಥಿಯಂದು ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಭರ್ಜರಿ ಮೆರವಣಿಗೆ ನಡೆಸಲಾಯಿತು. ಸುಮಾರು 11 ಅಡಿ ಎತ್ತರದ ಗಣೇಶಮೂರ್ತಿಯನ್ನು ನಗರದ ಪ್ರಮುಖ ಬೀದಿಯಲ್ಲಿ ವಾದ್ಯ, ವೃಂದ ಸೇರಿದಂತೆ ನಾನಾ ವೈವಿದ್ಯಮಯ ಮೆರವಣಿಗೆಯಲ್ಲಿ ಕರೆತರಲಾಯಿತು.

ನಗರದ ಹೊಸಪೇಟೆ ರಸ್ತೆಯಲ್ಲಿರುವ ರಿಲಯನ್ಸ್‌ ಪೆಟ್ರೋಲ್‌ ಬಂಕ್‌ನಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಸುಮಾರು 11 ಅಡಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂಡ್ರಿಸಿಕೊಂಡು, ಭರ್ಜರಿ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಯುದ್ದಕ್ಕೂ ಸಾಗಿಬಂದು ಈಶ್ವರ ದೇವಸ್ಥಾನದ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಲಾಯಿತು.

11 ದಿನಗಳೆಂದು ಘೋಷಣೆ:

4 ಅಡಿಗಿಂತ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ ಮತ್ತು ಮೆರವಣಿಗೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ ಸಹ 11 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಹಿಂದುಮಹಾ ಸಭಾ ಪ್ರತಿಷ್ಠಾಪಿಸಿಲು ಮೆರವಣಿಗೆಯಲ್ಲಿಯೇ ಕರೆತರಲಾಗಿದೆ. ಅಲ್ಲದೆ 11 ದಿನಗಳ ಕಾಲ ಸ್ಥಾಪನೆ ಮಾಡುವುದಾಗಿ ಈಗಾಗಲೇ ಸಂಘಟಕರು ಘೋಷಣೆ ಮಾಡಿಕೊಂಡಿದ್ದಾರೆ.

ಸರ್ಕಾರಕ್ಕೆ ಸಡ್ಡು: ಹಲವೆಡೆ ಅದ್ಧೂರಿ ಚೌತಿ

ಗಣೇಶ ಮೂರ್ತಿ ವಿಸರ್ಜನೆ:

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಸ್ಥಾಪನೆಯಾಗಿರುವ ಗಣೇಶ ಮೂರ್ತಿಗಳು ಸೇರಿದಂತೆ ವಿವಿಧೆಡೆಯೂ ಸ್ಥಾಪನೆಯಾಗಿದ್ದ ಗಣೇಶಮೂರ್ತಿಗಳ ಶೇ. 80 ರಷ್ಟು ಗಣೇಶ ಮೂರ್ತಿಗಳು ಚತುರ್ಥಿಯಂದೆ ಶುಕ್ರವಾರವೇ ವಿಸರ್ಜನೆ ಮಾಡಲಾಯಿತು.

ಸರ್ಕಾರ ಅವಕಾಶ ನೀಡಿದ್ದರೂ ಅದ್ಯಾವುದು ಬೇಡ ಎಂದು ಅನೇಕರು ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ವಿಸರ್ಜನೆ ಮಾಡಿದರು. ಪ್ರತಿ ವರ್ಷಕ್ಕಿಂತಲೂ ಅಧಿಕ ಗಣೇಶ ಮೂರ್ತಿಗಳನ್ನು ಒಂದೇ ದಿನಕ್ಕೆ ವಿಸರ್ಜನೆ ಮಾಡಲಾಯಿತು ಎನ್ನುವುದು ವಿಶೇಷ.

ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿರುವ ಹಾಗೂ ಮೆರವಣಿಗೆ ಮಾಡಿದ ವೇಳೆಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ.

ನಾವು ಗಣೇಶ ಮೂರ್ತಿಯನ್ನು ಪ್ರತಿ ವರ್ಷದಂತೆ 11 ದಿನಗಳ ಕಾಲವೇ ಪ್ರತಿಷ್ಠಾಪಿಸುತ್ತೇವೆ. ನಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ನಮ್ಮ ಧರ್ಮ. ಕೋವಿಡ್‌ ಇಲ್ಲದಿರುವುದರಿಂದ ವಿನಂತಿ ಮಾಡಿಕೊಂಡಿದ್ದೇವೆ ಎಂದು ಎಬಿವಿಪಿ ಮುಖಂಡ ಗವಿ ಜಂತಕಲ್‌ ಹೇಳಿದ್ದಾರೆ.