ಅಣ್ಣನ ಮನೆಗೆ ಕನ್ನ ಹಾಕಿದ ಖತರ್ನಾಕ್ ತಮ್ಮ-ಹೆಂಡತಿ ಅರೆಸ್ಟ್
ಹಬ್ಬಕ್ಕೆಂದು ಸ್ವಂತ ಅಣ್ಣನ ಮನೆಗೆ ಬಂದು ಅಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಗಂಡ ಹೆಂಡತಿ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ದಂಪತಿಯನ್ನ ಕಳವು ಕೇಸ್ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ.
ನಂಜನಗೂಡು (ಏ.18): ಅಣ್ಣನ ಮನೆಗೆ ಖತರ್ನಾಕ್ ತಮ್ಮ ಕನ್ನ ಹಾಕಿ ಇದೀಗ ಪೊಲೀಸರ ಅತಿಥಿಯಾದ ಘಟನೆ ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.
ಯುಗಾದಿ ಹಬ್ಬಕ್ಕಾಗಿ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮಕ್ಕೆ ಆಗಮಿಸಿದ್ದ ತಮ್ಮ ಅಲ್ಲಿನ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಿದ್ದು, ಆತನನ್ನು ಇಂದು ಹುಲ್ಲಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸ್ವಾಮಿ ಹಾಗೂ ಸುನಂದ ದಂಪತಿ ಯುಗಾದಿ ಹಬ್ಬಕ್ಕಾಗಿ ಅಣ್ಣ ವೆಂಕಟರಾಜು ಮನೆಗೆ ಬಂದಿದ್ದರು. ಏಪ್ರಿಲ್ 14ರಂದು ಬೆಂಗಳೂರಿನ ಮಾಗಡಿಯಿಂದ ಬಂದು ಒಂದು ವಾರ ತಂಗುವುದಾಗಿ ಹೇಳಿದ್ದರು. ಆದರೆ ಮರುದಿನವೇ ಅಂದರೆ ಏಪ್ರಲ್ 15 ರಂದು ಬೆಂಗಳೂರಿಗೆ ಹಿಂದಿರುಗಿದ್ದರು.
ಹೆಣ್ಣು ಹೆತ್ತಳು ಎಂಬ ಕಾರಣಕ್ಕೆ ಪತ್ನಿ ಮೇಲೆ ಆಸಿಡ್ ಸುರಿದ ಪಾಪಿ ಗಂಡ
ಇದರಿಂದ ಅಣ್ಣ ವೆಂಕಟರಾಜು ಅನುಮಾನಗೊಂಡು ಪರಿಶೀಲಿಸಿದಾದ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ. ಮಗನ ಮದುವೆಗಾಗಿ 3.30 ಲಕ್ಷ ಹಣ ಕೂಡಿಟ್ಟಿದ್ದು ಅದನ್ನು ದೋಚಿದ ದಂಪತಿ ಅಲ್ಲಿಂದ ಪರಾರಿಯಾಗಿದ್ದಾರೆ.
ಬೀರುವಿನಲ್ಲಿಟ್ಟಿದ್ದ ಹಣವನ್ನು ಲಪಟಾಯಿಸಿದ್ದು, ಹಣದ ವಿಚಾರ ಕೇಳಿದಾಗ ಸಾಕ್ಷಿ ಏನಿದೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಕುಪಿತಗೊಂಡ ವೆಂಕಟರಾಜು ಹುಲ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ಕಳವು ಮಾಡಿದ್ದ ಗಂಡ ಹೆಂಡತಿ ಇಬ್ಬರನ್ನು ಹುಲ್ಲಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.