ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೂ ಉಚಿತ ಪಡಿತರ
* ಕೊರೋನಾ ಕಾಲದಲ್ಲಿ ಜನರ ನೆರವಿಗೆ ನಿಲ್ಲಲು ಪಡಿತರ ನಿಯಮ ಸರಳ
* ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ
* ಆಹಾರ ಸಚಿವ ಉಮೇಶ್ ಕತ್ತಿ ಅವರಿಂದ ಪತ್ರಿಕಾ ಪ್ರಕಟಣೆ
* ಬಯೋಮೆಟ್ರಿಕ್ ವ್ಯವಸ್ಥೆಗೂ ವಿನಾಯಿತಿ ನೀಡಲಾಗಿದೆ
ಬೆಂಗಳೂರು(ಮೇ 14) ಕೊರೋನಾ ಸಂಕಷ್ಟದ ಸಂದರ್ಭ ಜನರಿಗೆ ನೆರವಾಗಲು ಮುಂದಾಗಿರುವ ಸರ್ಕಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದದವರಿಗೂ ರೇಷನ್ ವಿತರಿಸಲು ಕ್ರಮ ತೆಗೆದುಕೊಂಡಿದೆ.
ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಇಲಾಖೆಯಿಂದ ಪರಿಶೀಲನೆ ಹಂತದಲ್ಲಿ ಇದ್ದರೆ ಅಂತವರಿಗೆ ಮೇ ಮತ್ತು ಜೂನ್ ತಿಂಗಳಿಗೆ ಉಚಿತವಾಗಿ 10 ಕೆಜಿ (ಬಿಪಿಎಲ್), ಪ್ರತಿ ಕೆಜಿಗೆ15 ರೂ.ನಂತೆ 10 ಕೆಜಿ (ಎಪಿಎಲ್) ಆಹಾರ ಧಾನ್ಯ ವಿತರಣೆಗೆ ಮುಂದಾಗಿದೆ.
ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತು ಹೋಗಿ ಎಂದ ಕತ್ತಿ
ಪಿಎಂಜಿಕೆವೈ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ಒಟ್ಟು ಹತ್ತು ಕೆಜಿ ವಿತರಿಸಲಾಗುವುದು. ಈ ವಿಚಾರವನ್ನು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಚೀಟಿಗೆ 25 ಕಿಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಕೊರೋನಾ ಸೋಂಕು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಿಸುತ್ತಿರುವ ಕಾರಣ ಪಡಿತರ ಪಡೆದುಕೊಳ್ಳಲು ಈ ಮೊದಲು ಇದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು. ಹೆಬ್ಬರಳಿನ ಗುರುತು ನೀಡುವುದು ಕಡ್ಡಾಯ ಎಂಬ ನಿಯಮಕ್ಕೆ ವಿನಾಯಿತಿ ನೀಡಲಾಗಿತ್ತು .