Asianet Suvarna News Asianet Suvarna News

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ವರುಣಾರ್ಭಟ: ಭೂಕುಸಿತ, ಕಾರು ಪಲ್ಟಿ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ವರುಣಾರ್ಭಟ ಮುಂದುವರಿದಿದ್ದು, ಭೂ ಕುಸಿತ ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿವೆ. ನಿರಂತರ ಮಳೆಯಿಂದಾಗಿ ಕೊಪ್ಪ ತಾಲ್ಲೂಕು ಬಸರೀಕಟ್ಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಉರುಳಿಬಿದ್ದಿದೆ.

continued heavy rain in chikmagalur district gvd
Author
First Published Jul 24, 2023, 11:41 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.24): ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ವರುಣಾರ್ಭಟ ಮುಂದುವರಿದಿದ್ದು, ಭೂ ಕುಸಿತ ಸೇರಿದಂತೆ ಹಲವೆಡೆ ಅವಘಡಗಳು ಸಂಭವಿಸಿವೆ. ನಿರಂತರ ಮಳೆಯಿಂದಾಗಿ ಕೊಪ್ಪ ತಾಲ್ಲೂಕು ಬಸರೀಕಟ್ಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಉರುಳಿಬಿದ್ದಿದೆ. ಜಯಪುರ-ಶೃಂಗೇರಿ ರಸ್ತೆಗೆ ಮಳೆಯಿಂದ ಹಾನಿಯುಂಟಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ಎರಡು ಕಾರು ಪಲ್ಟಿ: ಭಾರೀ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಒಂದೇ ಪ್ರದೇಶದಲ್ಲಿ ಎರಡು ಕಾರುಗಳು ಪಲ್ಟಿ ಹೊಡೆದಿರುವ ಎರಡು ಪ್ರತ್ಯೇಕ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಳಿ ನಡೆದಿದೆ. ಘಟನೆಯಲ್ಲಿ ಚಾಲಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹದೇಶ್ವರ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ವೆಂಕಟೇಶ್‌

ತುಂಡಾದ ವಿದ್ಯುತ್ ತಂತಿ: ಭಾರೀ ಮಳೆ ಗಾಳಿಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಉಂಟಾಗಿ ವಿದ್ಯುತ್ ಕಂಬದಲ್ಲಿದ್ದ ವಿದ್ಯುತ್ ತಂತಿ ಬೆಂಕಿ ಹೊತ್ತಿಕೊಂಡು ತುಂಡಾಗಿ ಭದ್ರಾ ನದಿಗೆ ಬಿದ್ದಿರುವ ಘಟನೆ ಕಳಸಾ ತಾಲ್ಲೂಕಿನ ಹೆಬ್ಬಾಳೆ ಸೇತುವೆ ಬಳಿ ಸಂಭವಿಸಿದೆ.ಇದರಿಂದ ಹೊರನಾಡು, ಬಲಿಗೆ ಸೇರಿದಂತೆ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗುವಂತಾಗಿದೆ. ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಲೈನ್ ದುರಸ್ಥಿಯೂ ಸಾಧ್ಯವಿಲ್ಲದಂತಾಗಿದೆ.

ಫಾಲ್ಸ್ಗೆ ಬರಬೇಡಿ-ಗ್ರಾ.ಪಂ.ಮನವಿ: ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಪಾತ ರುದ್ರರಮಣೀಯವಾಗಿದೆ. ಕೆಮ್ಮಣ್ಣು ಮಿಶ್ರಿತ ನೀರಿನಲ್ಲೇ ಮಿಂದು ಜನರು ಮೋಜು ಮಾಡುತ್ತಿದ್ದಾರೆ. ನೀರಿನ ರಭಸ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಳೆ ಬಿಡುವು ನೀಡುವವರೆಗೆ ಜಲಪಾತ ವೀಕ್ಷಿಸಲು ಬರಬಾರದು ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಪ್ರವಾಸಿಗರಲ್ಲಿ ಮನವಿ ಮಾಡಿದೆ.

ರಸ್ತೆಗೆ ಬಂದ ಏಡಿಗಳು: ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಹರಿವು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮೂಡಿಗೆರೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೧೭೩ ರಲ್ಲಿ ಏಡಿಗಳು ಸಂಚರಿಸಲಾರಂಭಿಸಿವೆ. ಸ್ಥಳೀಯ ಕೆಲವು ಅವುಗಳ ಬೇಟೆಗಿಳಿದಿದ್ದು ಕಂಡುಬಂದಿದೆ.ಶೃಂಗೇರಿ ತಾಲ್ಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದ್ದು, ಕೆಲವೆಡೆ ತುಂಗಾ ನದಿ ನೀರು ಅಡಿಕೆ ತೋಟಗಳಿಗೆ ನುಗ್ಗಿದೆ. ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ತೊಡಕಾಗಿದೆ.

ಕೊಂಚ ತಗ್ಗಿದ ಮಳೆ: ಈ ನಡುವೆ ನಿನ್ನೆಗಿಂತಲೂ ಮಳೆಯ ರಭಸ ಕೊಂಚ ತಗ್ಗಿದ ಕಾರಣ ಸ್ವಲ್ಪ ಸಮಯ ಶಾರದಾ ಪೀಠದ ಗುರುಗಳ ಸಂಧ್ಯಾ ವಂದನೆ ಮಂಟಪ, ಗಾಂಧಿ ಮೈದಾನದಲ್ಲಿ ನೀರಿನ ಪ್ರಮಾಣವೂ ಇಳಿಕೆಯಾಗಿದೆ. ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಇನ್ನೂ ಮಳೆಯಾಗುತ್ತಲೇ ಇರುವುದರಿಂದ ತುಂಗಾನದಿ ಅಪಾಯದ ಮಟ್ಟದಲ್ಲೇ ಹರಿಯುತ್ತಿದೆ.

ಎಂಎಲ್‌ಎ ಆಗುವ ಕನಸು ಕಂಡಿರಲಿಲ್ಲ: ಶಾಸಕ ಪುಟ್ಟರಂಗಶೆಟ್ಟಿ

ಜಲಪಾತದ ಸೌಂದರ್ಯ ಇಮ್ಮಡಿ: ಎಡಬಿಡದ ಮಳೆಯಿಂದಾಗಿ ಚಾರ್ಮಾಡಿ ಘಾಡಿ ಮತ್ತು ಗಿರಿ ಭಾಗದ ಜಲಪಾತಗಳ ಸೌಂದರ್ಯ ಇಮ್ಮಡಿಯಾಗಿದೆ. ಚಾರ್ಮಾಡಿ ಕಣಿವೆಯುದ್ದಕ್ಕೂ ಜಲಪಾತಗಳ ಸರಣಿ ಕಾಣಸಿಗುತ್ತಿದ್ದು, ಪ್ರವಾಸಿಗರು ದಾರಿ ಮಧ್ಯೆ ಅಲ್ಲಲ್ಲಿ ವಾಹನ ನಿಲ್ಲಿಸಿ ನೀರಿನಲ್ಲಿ ಮಿಂದು ಸಂತಸ ಪಡುತ್ತಿದ್ದಾರೆ. ಚಿಕ್ಕಮಗಳೂರು ಸೇರಿದಂತೆ ಮಲೆನಾಡು ತಾಲ್ಲೂಕುಗಳಾದ್ಯಂತ ಎಲ್ಲಾ ಜಲಪಾತಗಳು ಮೈದುಂಬಿಕೊಂಡಿವೆ. ಚಿಕ್ಕಮಗಳೂರಿನ ಹೊನ್ನಮ್ಮನಹಳ್ಳ, ಝರಿ ಫಾಲ್ಸ್, ಮಾಣಿಕ್ಯಾಧಾರ, ಕಲ್ಲತ್ತಿಗಿರಿ ಜಲಪಾತಗಳು ಆಕರ್ಷಣೆಯ ಕೇಂದ್ರಗಳಾಗಿದ್ದು, ಪ್ರವಾಸಿಗರು ಮಾತ್ರ ಜಲಪಾತದ ಬಳಿ ಸೆಲ್ಫಿ, ರೀಲ್ಸ್ನಂತಹ ಹುಚ್ಚಾಟಕ್ಕೆ ಆಸ್ಪದ ನೀಡದೆ ಸೌಂದರ್ಯವನ್ನು ಆಸ್ವಾದಿಸುವುದು ಮುಖ್ಯವಾಗಿದೆ.

Follow Us:
Download App:
  • android
  • ios